ಚಿಂಚೋಳಿ: ‘ನಮ್ಮ ಸರ್ಕಾರ ಬಡವರ ಪರವಾಗಿದೆ. ನಾನು ಯಾವತ್ತು ಬಡವರ ಹೊಟ್ಟೆಯ ಮೇಲೆ ಹೊಡೆದು ರಾಜಕೀಯ ಮಾಡುವುದಿಲ್ಲ’ ಎಂದು ಸಂಸದೀಯ ಕಾರ್ಯದರ್ಶಿ ಡಾ.ಉಮೇಶ ಜಾಧವ್ ತಿಳಿಸಿದರು. ಅವರು ತಾಲ್ಲೂಕಿನ ಮಿರಿಯಾಣದಲ್ಲಿ ಭಾನುವಾರ ಸಿಸಿ ರಸ್ತೆ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಮಿರಿಯಾಣದಲ್ಲಿ ಶಹಾಬಾದ ಕಲ್ಲು ಗಣಿಗಾರಿಕೆ ಸ್ಥಗಿತಗೊಂಡಿತ್ತು. ಇದು ತಮ್ಮ ಗಮನಕ್ಕೆ ಬಂದ ಮೇಲೆ ಪುನರ್ ಆರಂಭಿಸಲು ಕ್ರಮ ಕೈಗೊಂಡಿದ್ದೇನೆ. ಪ್ರತಿಪಕ್ಷದವರು ಇಲ್ಲಿ ಗಣಿಗಾರಿಕೆ ಹೆಸರಲ್ಲಿ ಲೂಟಿ ನಡೆಯುತ್ತಿದೆ ಎಂದಿದ್ದಾರೆ. ಇಲ್ಲಿ ಗ್ರಾನೈಟ್ ಗಣಿಗಾರಿಕೆಯೇನು ನಡೆಯುತ್ತಿಲ್ಲ. ಬಡವರು ಬದುಕಿಗಾಗಿ ನೆಲದಿಂದ ಕಲ್ಲು ತೆಗೆದು ಮಾರಾಟ ಮಾಡುತ್ತಿದ್ದಾರೆ. ಇದನ್ನು ಟೀಕಿಸಿ ರಾಜಕೀಯ ಬೆರೆಸುವುದು ಸಲ್ಲದು ಎಂದರು.
ಚುನಾವಣೆ ಬಂದಾಗ ರಾಜಕೀಯ ಮಾಡಬೇಕು. ಬಡತನ, ನಿರುದ್ಯೋಗದ ಮೇಲೆ ರಾಜಕೀಯ ಸಲ್ಲದು. ಗಣಿ ಬಂದ್ ಆದಾಗ ಅನೇಕರು ಊರು ತೊರೆದಿದ್ದರು. ಕೆಲವರು ಕೆಲಸವಿಲ್ಲದೇ ಉಪವಾಸ ಉಳಿಯುವಂತಿತ್ತು. ಇದನ್ನು ಮನಗಂಡು ಪುನರಾರಂಭಿಸಲಾಗಿದೆ ಎಂದರು.
ಜಿ.ಪಂ ಸದಸ್ಯ ಗೌತಮ ಪಾಟೀಲ, ತಾ.ಪಂ ಸದಸ್ಯ ಜಗನ್ನಾಥ ಈದಲಾಯಿ, ಮುಖಂಡರಾದ ರವುಫ್ ಮಿರಿಯಾಣ, ನರಶಿಮ್ಲು ಪೂಜಾರಿ, ದೀಪಕನಾಗ್ ಪುಣ್ಯಶೆಟ್ಟಿ, ಆರ್.ಗಣಪತರಾವ್, ಸಿದ್ದಯ್ಯ ಗೌಡ್, ಗೋಪಾಲರಾವ್ ಕಟ್ಟಿಮನಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ ಚಂದ್ರಶೇಖರ, ಅಭಿವೃದ್ಧಿ ಅಧಿಕಾರಿ ಲಲಿತಾ, ಶ್ರೀನಿವಾಸರೆಡ್ಡಿ ಪಾಟೀಲ, ಮಧುಸೂದನರೆಡ್ಡಿ ಪಾಟೀಲ, ಕೆ.ಎಂ.ಬಾರಿ, ನಾಗೇಶ ಗುಣಾಜಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.