ADVERTISEMENT

ವಚ್ಚಾ–ಬೋಳೆವಾಡ ನಡುವೆ ಹದಗೆಟ್ಟ ರಸ್ತೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 7:00 IST
Last Updated 11 ಸೆಪ್ಟೆಂಬರ್ 2017, 7:00 IST

ಕಾಳಗಿ: ಸಮೀಪದ ವಚ್ಚಾ–ಬೋಳೆವಾಡ ನಡುವಿನ ಜಿಲ್ಲಾ ಮುಖ್ಯರಸ್ತೆ ನಿರ್ವಹಣೆ ಇಲ್ಲದೆ ಸಂಪೂರ್ಣ ಹದಗೆಟ್ಟಿದ್ದು, ಇದೀಗ ಬಸ್ಸಿನ ಸಂಚಾರ ಸ್ಥಗಿತಗೊಂಡು ಜನರು ಪರದಾಡುತ್ತಿದ್ದಾರೆ ಎಂದು ಉಭಯ ಗ್ರಾಮಸ್ಥರು ದೂರಿದ್ದಾರೆ.

ವಚ್ಚಾದಿಂದ 4ಕಿ.ಮೀ ಅಂತರದಲ್ಲಿರುವ ಬೋಳೆವಾಡ ಗ್ರಾಮಕ್ಕೆ ಕಾಳಗಿ ಬಸ್‌ ಘಟಕದ ವಿಜಯಪುರ ಮಾರ್ಗದ ಬಸ್ಸೊಂದು ಬೆಳಿಗ್ಗೆ 8ಗಂಟೆಗೆ ಮತ್ತು ಸಂಜೆ 4ಗಂಟೆಗೆ ಸಂಚರಿಸುತ್ತದೆ. ಈ ಬಸ್ಸು ಕಲಬುರ್ಗಿಗೆ ಹೋಗಿಬರುವ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ಉಪಯುಕ್ತವಾಗಿದೆ. ಆದರೆ, ಬಸ್ಸಿನ ಓಡಾಟಕ್ಕಿರುವ ಜಿಲ್ಲಾ ಮುಖ್ಯರಸ್ತೆಯು ಸಂಬಂಧಿತರ ನಿರ್ಲಕ್ಷ್ಯಕ್ಕೆ ನಲುಗಿ ಡಾಂಬರು ಕಿತ್ತುಹೋಗಿ ಎಲ್ಲೆಂದರಲ್ಲಿ ತಗ್ಗುಬಿದ್ದಿದೆ.

ಕಾಳಗಿ ಉಪವಿಭಾಗಕ್ಕೆ 1ಕಿ.ಮೀ ಹಾಗೂ ಕಲಬುರ್ಗಿ ಉಪವಿಭಾಗಕ್ಕೆ 3ಕಿ.ಮೀ ಒಳಪಡುವ ಈ ರಸ್ತೆಗೆ ಯಾರೂ ವಾರಸುದಾರರೇ ಇಲ್ಲದಂತಾಗಿ, ಇದೀಗ ಇದ್ದೊಂದು ಬಸ್ಸಿನ ಸಂಚಾರವು ಸ್ಥಗಿತಗೊಂಡು ವಚ್ಚಾ, ಬೋಳೆವಾಡ, ಹದನೂರ ಗ್ರಾಮಸ್ಥರು ಟಂಟಂ ಮೊರೆ ಹೋಗಿ ತೊಂದರೆ ಅನುಭವಿಸುತ್ತಿದ್ದಾರೆ.

ADVERTISEMENT

ಮೊದಲೇ ಗಾತ್ರದಲ್ಲಿ ಇಕ್ಕಟ್ಟಾಗಿರುವ ಈ ರಸ್ತೆ ಪಕ್ಕದಲ್ಲಿ ಬೆಣ್ಣೆತೊರಾ ನೀರಿನ ಕಾಲುವೆ ಇದೆ. ಅಕ್ಕಪಕ್ಕದಲ್ಲಿ ಗಿಡಗಂಟಿ ಬೇರೆ ಅಡ್ಡಿಯಾಗಿವೆ. ಅಂಥದರಲ್ಲಿ ಚಲಿಸುವ ವಾಹನ ಏನಾದರು ಸ್ವಲ್ಪ ಏರುಪೇರಾದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಸ್ಥಳೀಯರು.

ಇಷ್ಟೆಲ್ಲ ತೊಂದರೆ ಅನುಭವಿಸುತ್ತಿರುವ ಇಲ್ಲಿಯ ಜನರ ಬಗ್ಗೆ ಸಂಬಂಧಿಸಿದ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಗೊತ್ತಿದ್ದರೂ ಯಾರೊಬ್ಬರು ಈ ಕಡೆ ಗಮನಹರಿಸುತ್ತಿಲ್ಲ. ಜನರ ಅನುಕೂಲಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೋಳೆವಾಡ ಗ್ರಾಮದ ನಸಿರೋದ್ದಿನ ಕುಡಚಿ, ಪರಮಿಬೇಗಂ ಸೌದಾಗರ, ಬಸವಂತರಾವ ಬಿರಾದಾರ, ಭೀಮರಾಯ ಕಟ್ಟಿಮನಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.