ADVERTISEMENT

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಸೇಡಂ: ರಸ್ತೆ ಮೇಲೆ ಕುಳಿತು ಪ್ರತಿಭಟಿಸಿದ ಬಿಜೆಪಿ ಪದಾಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 10:01 IST
Last Updated 17 ಮಾರ್ಚ್ 2018, 10:01 IST
ಸೇಡಂನಲ್ಲಿ ಶುಕ್ರವಾರ ಬಿಜೆಪಿ ನಗರ ಘಟಕ ಪದಾಧಿಕಾರಿಗಳ ನೇತೃತ್ವದಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಯಿತು
ಸೇಡಂನಲ್ಲಿ ಶುಕ್ರವಾರ ಬಿಜೆಪಿ ನಗರ ಘಟಕ ಪದಾಧಿಕಾರಿಗಳ ನೇತೃತ್ವದಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಯಿತು   

ಸೇಡಂ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಜೆಪಿ ನಗರ ಘಟಕದ ಪದಾಧಿಕಾರಿಗಳ ನೇತೃತ್ವದಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ ವಿರುದ್ಧ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಕೊತ್ತಲ ಬಸವೇಶ್ವರ ದೇವಾಲಯದಿಂದ ಆರಂಭಗೊಂಡ ಮೆರವಣಿಗೆ ಚೌರಸ್ತಾ, ಕಿರಾಣ ಬಜಾರ, ರೈಲ್ವೆ ನಿಲ್ದಾಣ ಹಾಗೂ ಪೊಲೀಸ್ ಠಾಣೆಯ ಮುಂಭಾಗದಿಂದ ಉಪ ವಿಭಾಗಾಧಿಕಾರಿ ಕಚೇರಿಗೆ ತಲುಪಿತು. ಪ್ರತಿಭಟನೆಯಲ್ಲಿ ಆಶ್ರಯ ಯೋಜನೆಯ ನಿವೇಶನಕ್ಕೆ ಹಣ ತುಂಬಿದ ಮಹಿಳೆಯರು ಪಾಲ್ಗೊಂಡಿದ್ದರು.

‘ಡಾ.ಶರಣಪ್ರಕಾಶ ಪಾಟೀಲರು ಆಡಳಿತದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಸೇಡಂ ಜನರಿಗೆ ಯಾವುದೇ ಸೌಕರ್ಯ ನೀಡುತ್ತಿಲ್ಲ. ಪಟ್ಟಣದ ಜನ ಅವರಿಗೆ ಕಡಿಮೆ ಮತ ನೀಡಿದ್ದಾರೆ ಎಂಬ ಭಾವನೆಯಿಂದ ಈ ರೀತಿಯ ತಾರತಮ್ಯದ ಆಡಳಿತ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಮುಖಂಡರು ಆರೋಪಿಸಿದರು.

ADVERTISEMENT

ಸುಮಾರು 30 ನಿಮಿಷಗಳಿಗಿಂತ ಹೆಚ್ಚು ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ಇದರಿಂದ ಸಾರ್ವಜನಿಕ ಸಂಚಾರಕ್ಕೆ ಅಡಚಣೆಯುಂಟಾಯಿತು.

ಪೊಲೀಸರು ಮಾರ್ಗ ಬದಲಾಯಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. 15 ದಿನಗಳ ಒಳಗಾಗಿ ಬೇಡಿಕೆ ಈಡೇರಿಸುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಅನೀಲಕುಮಾರ ಐನಾಪುರ, ಒಬಿಸಿ ವರ್ಗಗಳ ರಾಜ್ಯ ಘಟಕದ ಉಪಾಧ್ಯಕ್ಷ ರಾಜಗೋಪಾಲರೆಡ್ಡಿ ಮುದಿರಾಜ, ಅನೀಲಕುಮಾರ ಪಾಟೀಲ ತೆಲ್ಕೂರ, ವಿಜಯಕುಮಾರ ಆಡಕಿ, ಜಗನ್ನಾಥ ಚಿಂತಪಳ್ಳಿ, ಮಲ್ಲಮ್ಮ ಚಂದ್ರಕಾಂತ ಚವಾಣ್, ಇನಾಯತ್ ರುದ್ನೂರ, ಮುರುಗೇಂದ್ರ ರೆಡ್ಡಿ ಪಾಟೀಲ, ಶ್ರೀಮಂತ ಆವಂಟಿ, ರಮೇಶ ರಾಠೋಡ, ರವಿಕುಮಾರ ಭಂಟನಳ್ಳಿ, ಓಂಪ್ರಕಾಶ ಪಾಟೀಲ, ಬಸವರಾಜ ರೇವಗೊಂಡ, ಶಿವಕುಮಾರ ಪಾಟೀಲ, ಪರಮೇಶ್ವರ ಹೋಟೆಲ್, ಅನೀಲ ರನ್ನೆಟ್ಲಾ, ಶಿವಾನಂದ ಸ್ವಾಮಿ, ಕಾಶಿನಾಥ ನಿಡಗುಂದಾ, ಚೆನ್ನಬಸ್ಸಪ್ಪ ನಿರ್ಣಿ ಇದ್ದರು.

ಒತ್ತಾಯಗಳು
*ಸೇಡಂ ಜನರಿಗೆ ಆಶ್ರಯ ಯೋಜನೆಯಡಿ ನಿವೇಶನ ನೀಡಬೇಕು.
*ಹೌಸಿಂಗ್‌ ಬೋರ್ಡ್ ಯೋಜನೆಯಡಿಲ್ಲಿ ನಗರದ 2 ಸಾವಿರಕ್ಕಿಂತಲೂ ಅಧಿಕ ಜನ ಸರ್ಕಾರಕ್ಕೆ ಹಣ ಭರಿಸಿದ್ದಾರೆ. ಅವರಿಗೆ ಮನೆ ಹಂಚಬೇಕು.
*ಪಟ್ಟಣದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಶೀಘ್ರಗತಿಯಲ್ಲಿ ಪೂರ್ಣಗೊಳಿಸಬೇಕು.
*ಪಟ್ಟಣದ ರಸ್ತೆಗಳ ಕಾಮಗಾರಿ ಮುಕ್ತಾಯಗೊಳಿಸಬೇಕು.
*ಪುರಸಭೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಏಳಿಗೆಗೆ ಬಂದ ₹5 ಕೋಟಿ ಅನುದಾನ ಮರಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.