ಅಫಜಲಪುರ: ಜಿಲ್ಲಾ ಪಂಚಾಯಿತಿ ಮತ್ತು ಕಂದಾಯ ಇಲಾಖೆ ಸುಮಾರು 20 ಸರ್ಕಾರಿ ಕಚೇರಿಗಳು ಒಂದೇ ಸಂಕೀರ್ಣದಲ್ಲಿ ನಿರ್ವಹಣೆ ಮಾಡಲು ಸುಮಾರು ₹ 30 ಕೋಟಿ ವೆಚ್ಚದ ಯೋಜನೆ ಸಿದ್ಧವಾಗಿದ್ದು, ನಗರದ ನಾಗರಿಕರು ನಿವೇಶನ ನೀಡಿದರೆ ಶೀಘ್ರದಲ್ಲೇ ಕಾಮಗಾರಿ ಆರಂಭವಾ ಗುತ್ತದೆ ಎಂದು ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಮಾಲೀಕಯ್ಯ ಗುತ್ತೇದಾರ ತಿಳಿಸಿದರು.
ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಹಿಂದುಳಿದ ಪ್ರದೇಶದ ಪಟ್ಟಿಯಿಂದ ಅಫಜಲಪುರ ತಾಲ್ಲೂಕನ್ನು ತೆಗೆದು ಹಾಕಲು ಸಾಕಷ್ಟು ಯೋಜನೆ ನೀಡಲಾ ಗುತ್ತಿದೆ. ಹಂತಹಂತವಾಗಿ ಇಡೀ ಪ್ರದೇಶ ಅಭಿವೃದ್ಧಿಪಡಿಸಲಾಗುವುದು ಎಂದರು.
ನಗರದ ನಾಗರಿಕರು ನಿವೇಶನ ನೀಡದಿದ್ದಲ್ಲಿ ಅಭಿವೃದ್ಧಿ ವೇಗ ಕುಂಠಿತವಾಗುತ್ತದೆ. ನಗರದ ನಾಗರಿಕರು ನೀಡದಿದ್ದರೆ, ಭೀಮಾ ಏತನೀರಾವರಿ ಉಪ ವಿಭಾಗದ ಕಚೇರಿ ನಿವೇಶನವನ್ನು ಸುವರ್ಣಾಸೌಧ ನಿರ್ಮಾಣಕ್ಕೆ ತೆಗೆದು ಕೊಳ್ಳುವುದು ಅನಿವಾರ್ಯ ಆಗುತ್ತದೆ. ಆದರೆ ಅದು ನಗರದಿಂದ ದೂರವಿದೆ ಎಂದು ಅವರು ತಿಳಿಸಿದರು.
ತಾಲ್ಲೂಕಿನಲ್ಲಿ ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಜನರಿಗಾಗಿ ಶಾಲೆ ಮತ್ತು ವಸತಿ ಶಾಲೆಗಳನ್ನು ತೆರೆಯಲಾಗುತ್ತಿದೆ. 4 ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲೇ ಅಫಜಲಪುರ ತಾಲ್ಲೂಕಿನಲ್ಲಿ ಹಿಂದುಳಿದ ಅಲ್ಪ ಸಂಖ್ಯಾತರ ವಿದ್ಯಾರ್ಥಿಗಳಿಗೆ ಹೆಚ್ಚಿನ ವಸತಿ ಶಾಲೆಗಳನ್ನು ಆರಂಭಿಸಲಾಗಿದೆ. ಮುಖ್ಯ ರಸ್ತೆಯಿಂದ ವಸತಿನಿಲಯಕ್ಕೆ ಸಂಚರಿಸಲು ರಸ್ತೆ ಮತ್ತು ಸುತ್ತು ಗೋಡೆ ನಿರ್ಮಿಸಲಾಗುವುದು ಎಂದರು.
ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಮೆಹ ಬೂಬ ಪಾಷಾ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಶಾಲೆಗಳು ಮತ್ತು ಕಾಲೇಜ್ ಗಳು ಹಾಗೂ ವಸತಿ ನಿಲಯಗಳು ಹೊಂದಿವೆ ಎಂದರು.
ಪುರಸಭೆ ಅಧ್ಯಕ್ಷ ಶರಣಪ್ಪ ಗುಡ್ಡೊಡಗಿ, ಸದಸ್ಯರಾದ ಪಾಷಾ ಮಣೂರ, ಮುಖಂಡರಾದ ಪಪ್ಪು ಪಟೇಪ, ದೇವೆಂದ್ರ ಜಮಾದಾರ, ಶಂಕರ ಕಣ್ಣಿ, ಭೂ ಸೇನಾ ನಿಗಮದ ಅಧಿಕಾರಿ ಜಾಫರ್, ಸಮಾಜ ಕಲ್ಯಾಣ ಅಧಿಕಾರಿ ಎಸ್.ಎನ್.ಗಿಣ್ಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.