ಆಳಂದ: ‘ಪ್ರತಿಯೊಂದು ಗ್ರಾಮ, ಪಟ್ಟಣಕ್ಕೆ ಅತ್ಯುತ್ತಮ ರಸ್ತೆ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕು. ಅಲ್ಲಿಯ ಸಮಗ್ರ ಅಭಿವೃದ್ಧಿಗೆ ರಸ್ತೆ ಸುಧಾರಣೆಗಳು ಪೂರಕವಾಗಲಿದೆ’ ಎಂದು ಶಾಸಕ ಬಿ.ಆರ್.ಪಾಟೀಲ ಹೇಳಿದರು.
ತಾಲ್ಲೂಕಿನ ಕಡಗಂಚಿ ಗ್ರಾಮದಲ್ಲಿ ಭಾನುವಾರ ₹1 ಕೋಟಿ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
‘2004ರಲ್ಲಿ ಬಿಒಟಿ ಆಧಾರದ ಮೇಲೆ ವಾಗ್ದರಿ ಮತ್ತು ರಿಬ್ಬನಪಲ್ಲಿ ಮುಖ್ಯರಸ್ತೆಯು ಕಾಮಗಾರಿಗೆ ₹240 ಕೋಟಿ ಖರ್ಚು ಮಾಡಲಾಯಿತು. ತಾಲ್ಲೂಕಿನ ಎಲ್ಲ ಹಳ್ಳಿಗಳಿಗೂ ಉತ್ತಮ ರಸ್ತೆ ಸೌಲಭ್ಯ ಒದಗಿಸಲಾಗಿದೆ’ ಎಂದರು.
ಮಹಾರಾಷ್ಟ್ರದ ಸೋಲಾಪುರ, ಪುಣೆ, ಬಸವ ಕಲ್ಯಾಣ, ಶ್ರೀಶೈಲ, ಹಾವೇರಿ ಮತ್ತಿತರ ನಗರಗಳಿಗೆ ಬಸ್ಗಳ ವ್ಯವಸ್ಥೆ ಕಲ್ಪಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಇಲಿಯಾಸ್ ಶೇಠ ಬಾಗವಾನ್ ಮಾತನಾಡಿ, ಹಲವು ಧರ್ಮ, ಜಾತಿ, ಜನಾಂಗದ ರಾಷ್ಟ್ರವಾದ ಭಾರತದಲ್ಲಿ ಯಾವುದೇ ಒಂದು ಧರ್ಮ, ಜಾತಿಗೆ ಮನ್ನಣೆ ನೀಡುವ ಪಕ್ಷ, ವ್ಯಕ್ತಿಗೆ ಆದ್ಯತೆ ದೊರೆಯಬಾರದು. ಸಮಾನತೆ, ಸಾಮರಸ್ಯವು ನಮ್ಮ ದೇಶದ ಹಿರಿಮೆ ಎಂದರು.
ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಕ ಎ.ಎಚ್.ನಾಗೇಶ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ವಿಠಲರಾವ ಪಾಟೀಲ, ಎಪಿಎಂಸಿ ಅಧ್ಯಕ್ಷ ಶರಣಬಸಪ್ಪ ಭೂಸನೂರು, ಕೆಎಂಎಫ್ ನಿರ್ದೇಶಕರಾದ ಈರಣ್ಣಾ ಝಳಕಿ, ಚಂದ್ರಕಾಂತ ಭೂಸನೂರು, ತಾ.ಪಂ ಇಒ ಡಾ.ಸಂಜಯ ರೆಡ್ಡಿ, ಮಾಜಿ ಸದಸ್ಯ ಶಿವಪುತ್ರಪ್ಪ ಕೊಟ್ರಕಿ, ಸಾಯಿನಾಥ ನರೋಣೆ, ಬೀರಣ್ಣಾ ವಗ್ಗಿ, ರಾಜಶೇಖರ ತಡಕಲ, ಶಾಂತಪ್ಪ ಧುತ್ತರಗಾಂವ, ಆಳಂದ ಘಟಕದ ವ್ಯವಸ್ಥಾಪಕ ಕೆ.ಎಲ್.ಚಂದ್ರಶೇಖರ, ಮಹಿಬೂಬ ಸಾಬ, ಎಂ.ಡಿ.ಸುಂಕದ, ಗುತ್ತಿಗೆದಾರ ಸಂಜೀವರೆಡ್ಡಿ, ಸತೀಶ ಪನಶೇಟ್ಟಿ, ರುದ್ರಯ್ಯ ಸ್ವಾಮಿ, ಗುಂಡೆರಾವ ಮಾದಗೊಂಡ, ಪಿಎಸ್ಐ ಗಜಾನಂದ ನಾಯಕ, ಎಇಇ ತಾನಾಜಿ ವಾಡೇಕರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.