ADVERTISEMENT

ಅನುಪಯುಕ್ತ ವಸ್ತುಗಳಲ್ಲಿ ಅರಳಿದ ಕಲಿಕೋಪಕರಣ

ಸಿ.ಎಸ್.ಸುರೇಶ್
Published 23 ಡಿಸೆಂಬರ್ 2017, 7:20 IST
Last Updated 23 ಡಿಸೆಂಬರ್ 2017, 7:20 IST
ಪ್ರೌಢಶಾಲೆಯ ಭಾಷಾ ಸಂಘದ ಉಸ್ತುವಾರಿ ಹೊತ್ತ ಶಿಕ್ಷಕಿಯರು
ಪ್ರೌಢಶಾಲೆಯ ಭಾಷಾ ಸಂಘದ ಉಸ್ತುವಾರಿ ಹೊತ್ತ ಶಿಕ್ಷಕಿಯರು   

ನಾಪೋಕ್ಲು: ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನದಂತಹ ವಿಷಯಗಳು ಕ್ಲಿಷ್ಟಕರ ಎಂಬುದು ಸಾಮಾನ್ಯರ ಭಾವನೆ. ಆದರೆ, ‘ಭಾಷಾ ಸಂಘ’ ಇದನ್ನು ದೂರ ಮಾಡಿದೆ.

ಇದರೊಂದಿಗೆ ಭಾಷೆಗಳ ಕಲಿಕೆಯೂ ಸುಲಭವೇನಲ್ಲ. ದಿನನಿತ್ಯದ ಜೀವನದಲ್ಲಿ ಭಾಷೆ ನಿರಂತರವಾಗಿ ಬಳಸಲ್ಪಡುತ್ತಿದ್ದರೂ ಪಠ್ಯದ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದು ಕಷ್ಟವೇ ಸರಿ. ಭಾಷೆಯ ಮೇಲೆ ವಿದ್ಯಾರ್ಥಿಗಳು ಹಿಡಿತ ಸಾಧಿಸಿದರೆ ಅದು ಇತರ ವಿಷಯಗಳ ಕಲಿಕೆಗೆ ಸಹ ಪೂರಕವಾಗಿರುತ್ತದೆ. ಈ ಕಲ್ಪನೆ ಹಾಗೂ ಉದ್ದೇಶ ಇಟ್ಟುಕೊಂಡು ಇಲ್ಲೊಂದು ಶಾಲೆಯಲ್ಲಿ ಭಾಷಾ ಸಂಘ ಸ್ಥಾಪಿಸಲಾಗಿದೆ.

ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಸ್ಥಾಪಿಸಲಾಗಿರುವ ಭಾಷಾ ಸಂಘ ಮೂವರು ಶಿಕ್ಷಕರ ಕನಸಿನ ಪ್ರಯತ್ನದಿಂದ ಮೂಡಿಬಂದಿದ್ದು, ಗಮನ ಸೆಳೆಯುತ್ತಿದೆ.

ADVERTISEMENT

ಈ ಸಂಘದ ಮೂಲಕ ವಿದ್ಯಾರ್ಥಿ ಗಳು ಭಾಷಾ ಕಲಿಕೆಯನ್ನು ವಿಭಿನ್ನವಾಗಿ ಕಲಿಯಲು ಆಸಕ್ತರಾಗಿದ್ದಾರೆ. ಕನ್ನಡ ಭಾಷಾ ಶಿಕ್ಷಕಿ ಉಷಾರಾಣಿ, ಆಂಗ್ಲ ಭಾಷಾ ಶಿಕ್ಷಕ ಮಹಾಂತೇಶ್‌ ಕೋಠಿ ಹಾಗೂ ಹಿಂದಿ ಶಿಕ್ಷಕಿ ಅಶ್ವಿನಿ ಅವರ ಪ್ರಯತ್ನದಿಂದ ಹೊರಬಂದ ಭಾಷಾ ಸಂಘದ ಕೊಠಡಿ ಗಮನ ಸೆಳೆಯುತ್ತಿದೆ.

ಭಾಷಾ ಸಂಘದ ಕೊಠಡಿಯ ತುಂಬಾ ಕಲಿಕೋಪಕರಣಗಳು ತುಂಬಿವೆ. ಅತ್ಯಂತ ಕಡಿಮೆ ವೆಚ್ಚದಲ್ಲಿ, ಅನುಪಯುಕ್ತ ವಸ್ತುಗಳಿಂದ ಮೂರೂ ವಿಷಯಗಳಿಗೆ ಸಂಬಂಧಿಸಿದ ಭಾಷಾ ಕಲಿಕೆಗೆ ಪ್ರೇರಣೆ ನೀಡುವ ಹತ್ತು ಹಲವು ಚಟುವಟಿಕೆಗಳಿವೆ. ಬಾಷಾ ಸಂಘದ ಮೂಲಕ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಲಾಗಿದೆ.

ಅಂತೆಯೇ ಇಲ್ಲಿ ಶಿಕ್ಷಕರ ಕ್ರಿಯಾಶೀಲತೆಯಿಂದ ತಯಾರಿಸಲಾದ ಹಲವಾರು ಚಟುವಟಿಕೆಗಳಿವೆ. ಕನ್ನಡ ಭಾಷೆಗೆ ಸಂಬಂಧಿಸಿದಂತೆ ಕವಿಗಳ ಪರಿಚಯ, ಜ್ಞಾನಪೀಠ ಪ್ರಶಸ್ತಿ ವಿಜೇತರ ವಿವರ, ಪ್ರಾಚೀನ ಕವಿಗಳ ವಿವರ, ವ್ಯಾಕರಣ ಸಂಬಂಧಿ ವಿಷಯಗಳು. ಸ್ವರಚಿತ ಕತೆ– ಕವನ, ಪಾಠಕ್ಕೆ ಸಂಬಂಧಿಸಿದ ಭಿತ್ತಿಚಿತ್ರ, ಭಿತ್ತಿಬರಹಗಳು ಇವೆ.

ಅಕ್ಷರ ಜಾರುಪಟ್ಟಿ ವಿಶೇಷವಾಗಿ ಗಮನ ಸೆಳೆಯುತ್ತದೆ. ಅದೇ ರೀತಿ ಆಂಗ್ಲಭಾಷೆಗೆ ಸಂಬಂಧಿಸಿದ ಸಾಕಷ್ಟು ಮಾಹಿತಿಗಳನ್ನು ಚಟುವಟಿಕೆಗಳಲ್ಲಿ ವ್ಯಕ್ತಪಡಿಸಲಾಗಿದೆ. ವಿದ್ಯಾರ್ಥಿಗಳು ಹೊಸ ಪರಿಕಲ್ಪನೆಗಳ ಹುಡುಕುವಿಕೆಗೆ ಪ್ರೋತ್ಸಾಹ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ.

ಹಿಂದಿ ಭಾಷೆಯ ಚಟುವಟಿಕೆಗಳು ಹಲವಿದ್ದು ಎಲ್ಲವನ್ನೂ ಅನುಪಯುಕ್ತ ವಸ್ತುಗಳಿಂದ ಸಿದ್ದಪಡಿಸಲಾಗಿದೆ. ಕಾಳು, ಹತ್ತಿ, ಪೆನ್ಸಿಲಿನ ಕಸ, ಕಡಲೆಕಾಯಿ ಸಿಪ್ಪೆ ಮತ್ತಿತರ ವಸ್ತುಗಳನ್ನು ಬಳಸಿ ಕಲಿಕೋಪಕರಣಗಳನ್ನು ತಯಾರಿಸುವುದು ವಿಶೇಷ. ‘ಮಕ್ಕಳು ತುಂಬಾ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದು ಮಕ್ಕಳ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಹಿಂದಿ ಶಿಕ್ಷಕಿ ಅಶ್ವಿನಿ.

* * 

ವಿದ್ಯಾರ್ಥಿಗಳಿಗೆ ಭಾಷೆಯಲ್ಲಿ ಆಸಕ್ತಿ, ಪ್ರೀತಿ ಮೂಡುವಂತೆ ಮಾಡುವುದು ಹಾಗೂ ತನ್ನಲ್ಲಿ ಅಡಗಿರುವ ಯೋಚನೆಗಳನ್ನು ಅರಳುವಂತೆ ಮಾಡುವುದು ಭಾಷಾ ಸಂಘದ ಉದ್ದೇಶವಾಗಿದೆ.
ಉಷಾರಾಣಿ, ಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.