ಕುಶಾಲನಗರ: ಉತ್ತರ ಕೊಡಗಿನ ಚಿಕ್ಕಅಳುವಾರ ಗ್ರಾಮದಲ್ಲಿ ಅಳುವಾರದಮ್ಮ ದೇವಾಲಯ ಸಮಿತಿಯಿಂದ ಏರ್ಪಡಿಸಿದ್ದ ಗ್ರಾಮ ದೇವತೆ ಶ್ರೀ ಅಳುವಾರದಮ್ಮ (ಚೌಡೇಶ್ವರಿ) ದೇವಿಯ ವಾರ್ಷಿಕ ಪೂಜಾ ಮಹೋತ್ಸವವು ಈಚೆಗೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ಬೆಳಿಗ್ಗೆ ದೇವರ ವಿಗ್ರಹಗಳಿಗೆ ಗಂಗಾಸ್ನಾನ ಹಾಗೂ ಗಂಗಾಪೂಜೆ ನೆರವೇರಿಸಲಾಯಿತು.
ಅರ್ಚಕ ಜೆ.ಚಂದ್ರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಮಹಾಮಂಗಳಾರತಿ ಬಳಿಕ ದೇವರ ವಿಗ್ರಹದೊಂದಿಗೆ ಪೂರ್ಣಕುಂಭ ಕಳಶ ಹೊತ್ತ ಭಕ್ತಾದಿಗಳು ವಾದ್ಯಗೋಷ್ಠಿಯೊಂದಿಗೆ ದೇವಸ್ಥಾನದ ವರೆಗೆ ಮೆರವಣಿಗೆ ನಡೆಸಲಾಯಿತು.
ಚಿಕ್ಕ ಅಳುವಾರ ಗ್ರಾಮದ ಜನತೆ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಂದ ಬಂದಿದ್ದ ಭಕ್ತರು ಹಬ್ಬದಲ್ಲಿ ಪಾಲ್ಗೊಂಡು ದೇವಿ ದರ್ಶನ ಪಡೆದರು.
ಅಳುವಾರದಮ್ಮದೇವಿ ಬನದಲ್ಲಿ ದೇವಿಯ ವಿಗ್ರಹ ಮತ್ತು ಕಳಶ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ವಾರ್ಷಿಕ ಪೂಜಾ ಮಹೋತ್ಸವದ ಅಂಗವಾಗಿ ದೇವಸ್ಥಾನ ಸೇರಿದಂತೆ ಗ್ರಾಮವನ್ನು ವಿದ್ಯುತ್ ದೀಪ ಹಾಗೂ ಹಸಿರು ತೋರುಣಗಳಿಂದ ಸಿಂಗರಿಸಲಾಗಿತ್ತು.
ಮಹಾಪೂಜೆಯ ನಂತರ ಅನ್ನಸಂತರ್ಪಣೆ ನೆರವೇರಿಸಲಾಯಿತು.
ದೇವರ ಉತ್ಸವಗಳು ಪೂಜಾ ಕೈಂಕರ್ಯಗಳು ದೇವಾಲಯ ಸಮಿತಿ ಅಧ್ಯಕ್ಷ ಪಿ.ರಾಜಪ್ಪ ಮತ್ತು ಕಾರ್ಯದರ್ಶಿ ಎ.ಎಚ್.ಶಿವಶಂಕರ್ ನೇತೃತ್ವದಲ್ಲಿ ನಡೆದವು. ಸಮಿತಿ ಖಜಾಂಚಿ ಎ.ಪಿ.ಧರ್ಮ, ನಿರ್ದೇಶಕರಾದ ಚರಣ್, ಎ.ಎಸ್.ಪ್ರಕಾಶ್, ಸಂತೋಷ್, ಹರೀಶ್, ಮನು, ಅರುಣ್, ರಂಗಸ್ವಾಮಿ, ಶಿವರಾಜ್, ರವಿ, ರತ್ನಾಕರ ಹಾಜರಿದ್ದರು.
ಹಬ್ಬದ ಅಂಗವಾಗಿ ವಿದ್ಯುತ್ ಅಲಂಕೃತ ಮಂಟಪದಲ್ಲಿ ದೇವಿ ಉತ್ಸವ ಮಂಟಪಗಳ ಮೆರವಣಿಗೆ ನಡೆಯಿತು. ಉತ್ಸವಕ್ಕೆ ಜಿ.ಪಂ.ಸದಸ್ಯ ಎಚ್.ಆರ್.ಶ್ರೀನಿವಾಸ್ ಹಾಗೂ ಐಎನ್ಟಿಯುಸಿ ರಾಜ್ಯ ಕಾರ್ಯದರ್ಶಿ ಎಂ.ಎನ್.ಮುತ್ತಪ್ಪ ಚಾಲನೆ ನೀಡಿದರು. ಗ್ರಾ.ಪಂ.ಅಧ್ಯಕ್ಷ ಕೆ.ಎನ್.ದೇವರಾಜ್, ಉಪಾಧ್ಯಕ್ಷ ದಾಕ್ಷಾಯಿಣಿ, ಸದಸ್ಯರಾದ ಮಂಗಳಾ ಮಹೇಶ್, ರೂಪಹರೀಶ್, ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.