ADVERTISEMENT

ಜನೋತ್ಸವ: ಇಕ್ಕಟ್ಟಿನಲ್ಲಿ ಆಯೋಜಕರು

ದಸರಾ ಸಮಿತಿಗೆ ಸರ್ಕಾರದಿಂದ ಇನ್ನೂ ಸಿಗದ ಅನುದಾನದ ಭರವಸೆ

ಅದಿತ್ಯ ಕೆ.ಎ.
Published 26 ಸೆಪ್ಟೆಂಬರ್ 2016, 9:37 IST
Last Updated 26 ಸೆಪ್ಟೆಂಬರ್ 2016, 9:37 IST

ಮಡಿಕೇರಿ: ‘ಮಡಿಕೇರಿ ದಸರಾ’ ಆರಂಭಕ್ಕೆ ಇನ್ನು ಒಂದು ವಾರ ಮಾತ್ರ ಬಾಕಿಯಿದೆ. ಆದರೆ, ಸಿದ್ಧತೆಗಳು ಮಾತ್ರ ಆರಂಭಗೊಂಡಿಲ್ಲ. ಕಾವೇರಿ ವಿವಾದ ದಿಂದಾಗಿ ಸರ್ಕಾರ ಇದುವರೆಗೂ ಇಷ್ಟೇ ಅನುದಾನ ಬಿಡುಗಡೆ ಮಾಡಲಾಗು ವುದು ಎಂಬ ಭರವಸೆ ನೀಡದ ಕಾರಣ ದಸರಾ ಸಮಿತಿ ಇಕ್ಕಟ್ಟಿಗೆ ಸಿಲುಕಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌. ಸೀತಾರಾಂ, ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ ನೇತೃತ್ವದಲ್ಲಿ ಪ್ರತ್ಯೇಕ ಎರಡು ಸಭೆಗಳು ನಡೆದಿವೆ. ಆದರೆ, ಅನುದಾನದ ಭರವಸೆ ಸಿಗದೇ ಸಿದ್ಧತೆ ಗಳನ್ನು ಕೈಗೊಳ್ಳುವುದು ಹೇಗೆ ಎಂಬ ಗೊಂದಲಕ್ಕೆ ಸಮಿತಿಯ ಸದಸ್ಯರು ಸಿಲುಕಿದ್ದಾರೆ.

ಕಳೆದ ಒಂದು ವಾರದಿಂದ ಮಡಿಕೇರಿ ನಗರದಲ್ಲಿ ಹವಾಮಾನದಲ್ಲಿ ಸಾಕಷ್ಟು ವ್ಯತ್ಯಾಸ ಕಾಣಿಸುತ್ತಿದ್ದು ಆಗಾಗ್ಗೆ ಸುರಿಯುವ ಜಿಟಿಜಿಟಿ ಮಳೆ, ಶೀತಗಾಳಿ, ಮಂಜು ಮುಸುಕಿದ ವಾತಾವರಣ ಜನರನ್ನು ಹೈರಾಣಾಗಿಸಿದೆ. ಇದೇ ವಾತಾ ವರಣ ನವರಾತ್ರಿಯ ರಂಗಿನಲ್ಲೂ ಮುಂದುವರಿದರೆ ದಸರಾದ ಕಾರ್ಯಕ್ರಮಗಳಿಗೂ ಜನರ ಕೊರತೆ ಕಾಡುವ ಆತಂಕ ಸಹ ಎದುರಾಗಿದೆ.

ನಾಲ್ಕು ಶಕ್ತಿ ದೇವತೆಗಳ ಮೆರವಣಿಗೆಯ ಮೂಲಕ ಮಡಿಕೇರಿ ಜನೋತ್ಸವಕ್ಕೆ ಚಾಲನೆ ಲಭಿಸಲಿದೆ. ಬಳಿಕ ವಿಜಯ ದಶಮಿಯ ತನಕ 9 ದಿನಗಳ ಕಾಲ ನವರಾತ್ರಿ ಬೆಳಕಿನಲ್ಲಿ ಮಿಂದೇಳಲು ಸಾಕಷ್ಟು ಸಿದ್ಧತೆಗಳು ನಗರದಲ್ಲಿ ಈಗಾಗಲೇ ನಡೆಯಬೇಕಿತ್ತು. ಆದರೆ, ಸಭೆ, ಸ್ವಚ್ಛತಾ ಕಾರ್ಯ ಹೊರತು ಪಡಿಸಿದರೆ ಸಿದ್ಧತೆಯ ಕೊರತೆ ಎದ್ದು ಕಾಣಿಸುತ್ತಿದೆ. ಗುಂಡಿ ಮುಚ್ಚುವ ಕಾರ್ಯಕ್ಕೆ ಇನ್ನೂ ಚಾಲನೆ ಲಭಿಸಿಲ್ಲ. ವೇದಿಕೆ ನಿರ್ಮಾಣದ ಕೆಲಸಗಳೂ ನಡೆಯುತ್ತಿಲ್ಲ. ಗಾಂಧಿ ಮೈದಾನದಲ್ಲಿ ಜಲ್ಲಿ ಪುಡಿಯಿಂದ ಗುಂಡಿಗಳನ್ನು ಮುಚ್ಚುವ ಕೆಲಸ ಹೊರತು ಪಡಿಸಿದರೆ ಕಣ್ಣಿಗೆ ಕಾಣುವ ದೊಡ್ಡ ಸಿದ್ಧತೆಗಳು ನಡೆಯುತ್ತಿಲ್ಲ.

‘ದಸರಾದ ಆಹ್ವಾನ ಪತ್ರಿಕೆಗಳು ಮುದ್ರಣಗೊಂಡಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿಯೂ ಸಿದ್ಧಗೊಂಡಿದೆ. ಸರ್ಕಾರ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಲಿದೆ ಎಂಬ ಆಶಾಭಾವನೆ ಸಹ ಇದೆ. ₹ 1.50 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಿ ದ್ದೇವೆ. ಸೋಮವಾರ ಬೆಳಿಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದ್ದು ಅನುದಾನದ ಸ್ಪಷ್ಟ ಮಾಹಿತಿ ಸಿಗಲಿದೆ’ ಎಂದು ದಸರಾ ಸಮಿತಿ ಸದಸ್ಯ ಚುಮ್ಮಿ ದೇವಯ್ಯ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಕಾವೇರಿ ಕರಿನೆರಳು: ಕಾವೇರಿ ವಿವಾದ ಮಡಿಕೇರಿ ದಸಾರದ ಮೇಲೂ ಕರಿನೆರಳು ಬೀರುವ ಸಾಧ್ಯತೆಯಿದೆ. ಸರ್ಕಾರ ಕಳೆದ ಸಾಲಿನಂತೆಯೇ ಈ ಬಾರಿಯೂ ₹ 50 ಲಕ್ಷ ಅನುದಾನ ಕೊಟ್ಟರೆ ಅದ್ಧೂರಿ ದಸರಾ ಆಲೋಚನೆಯಲ್ಲಿ ಇರುವ ಸಮಿತಿಗೆ ನಿರಾಶೆ ಉಂಟಾಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆ ನಿರ್ಮಾಣ, ಬೆಳಕಿನ ವ್ಯವಸ್ಥೆ, ಕಾವೇರಿ ಕಲಾಕ್ಷೇತ್ರದ ಅಲಂಕಾರ, ಧ್ವನಿವರ್ದಕ, ಎಲ್‌ಇಡಿ ಪರದೆ ವ್ಯವಸ್ಥೆಗೆ ₹ 27 ಲಕ್ಷಕ್ಕೆ ಶನಿವಾರ ಗುತ್ತಿಗೆ ನೀಡಲಾಗಿದೆ. ನಾಲ್ಕು ಕರಗಕ್ಕೆ ಕನಿಷ್ಠ ₹6 ಲಕ್ಷ, ದಶಮಂಟಪಗಳಿಗೆ ಕನಿಷ್ಠ ₹3 ಲಕ್ಷ ಎಂದರೂ ₹ 30 ಲಕ್ಷ ಅನುದಾನ ಬೇಕು. ಇನ್ನು ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಕಲಾವಿದರ ವೆಚ್ಚವೂ ಲಕ್ಷಗಳ ಲೆಕ್ಕದಲ್ಲಿದೆ.

ಸರ್ಕಾರದಿಂದ ಕನಿಷ್ಠ ₹ 1 ಕೋಟಿ ಅನುದಾನ ದೊರೆತರೆ ಮಾತ್ರ ವಿಜೃಂಭಣೆಯ ಜನೋತ್ಸವಕ್ಕೆ ಮಡಿಕೇರಿ ಸಾಕ್ಷಿಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಚಂದಾ ವಸೂಲಿಗೆ ವಿರೋಧ: ದಶಮಂಟಪಗಳ ಸಮಿತಿ ಸದಸ್ಯರು ಈಗಾಗಲೇ ನಗರ ಪ್ರದಕ್ಷಿಣೆ ಹಾಕಿ ಚಂದಾ ವಸೂಲಿ ಮಾಡುತ್ತಿದ್ದಾರೆ. ಆದರೆ, ದಸರಾ ಸಮಿತಿ ಸದಸ್ಯರು ಚಂದಾ ವಸೂಲಿಗೆ ಈ ಬಾರಿ ಮುಂದಾಗಿಲ್ಲ. ಕಳೆದ ವರ್ಷ ಸರ್ಕಾರದಿಂದಲೂ ಅನುದಾನ ಪಡೆದು, ಸಾರ್ವಜನಿಕರಿಂದಲೂ ವಂತಿಗೆ ಸಂಗ್ರಹಿಸಿದ್ದಕ್ಕೆ ದಶಮಂಟಪ ಸಮಿತಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ದಸರಾ ಸಮಿತಿ ಸದಸ್ಯರು ಈ ಬಾರಿ ಸರ್ಕಾರದ ಅನುದಾನವನ್ನೇ ನಂಬಿ ಕುಳಿತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.