ADVERTISEMENT

ಭಗವತಿ ವಿಗ್ರಹ ಪ್ರತಿಷ್ಠಾಪನೆ

ಗ್ರಾಮಸ್ಥರ ನೆರವಿನಿಂದ ದೇವಾಲಯ ಜೀರ್ಣೋದ್ಧಾರ; ಬ್ರಹ್ಮಕಳಶಾಭಿಷೇಕ

​ಪ್ರಜಾವಾಣಿ ವಾರ್ತೆ
Published 29 ಮೇ 2015, 11:20 IST
Last Updated 29 ಮೇ 2015, 11:20 IST

ನಾಪೋಕ್ಲು: ಸಮೀಪದ ಹಳೆತಾಲ್ಲೂಕಿನಲ್ಲಿರುವ ಭಗವತಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡಿದ್ದು ನವೀಕರಣಗೊಂಡಿರುವ ದೇವಾಲಯದಲ್ಲಿ ಭಗವತಿ ದೇವಿಯ ವಿಗ್ರಹವನ್ನು ಗುರುವಾರ ಪ್ರತಿಷ್ಠಾಪನೆ ಮಾಡಲಾಯಿತು.

ಬೆಳಿಗ್ಗೆ 7.19 ನಿಮಿಷಕ್ಕೆ ಮಿಥುನ ಲಗ್ನದಲ್ಲಿ ಭಗವತಿ ದೇವಿಯ ವಿಗ್ರಹ ಪ್ರತಿಷ್ಠಾಪನೆಯನ್ನು ಅರ್ಚಕ ಹರೀಶ್‌್‌ಭಟ್‌ ಕಾಳೇಘಾಟ್‌ನ ನಾರಾಯಣ ತಂತ್ರಿಯವರ ನೇತೃತ್ವದಲ್ಲಿ ನೆರವೇರಿಸಲಾಯಿತು.

ಬಳಿಕ ಗಣಪತಿ ಪ್ರತಿಷ್ಠೆ, ಅಷ್ಟಬಂಧ ಕಾರ್ಯಕ್ರಮ ಹಾಗೂ ಬ್ರಹ್ಮಕಳಶಾಭಿಷೇಕಗಳು ನಡೆಯಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

2014ರ ಮೇ 20ರಿಂದ ಆರಂಭ ಗೊಂಡ ಜೀರ್ಣೋದ್ಧಾರ ಕಾರ್ಯ ಗ್ರಾಮಸ್ಥರ ನೆರವಿನಿಂದ ಪೂರ್ಣಗೊಂಡಿದ್ದು ಬ್ರಹ್ಮಕಳಶೋತ್ಸವದ ಅಂಗವಾಗಿ ಭಾನುವಾರದಿಂದ ವಿವಿಧ ಕಾರ್ಯಕ್ರಮಗಳು ನಡೆಯುತ್ತಲಿವೆ.

ಭಗವತಿ ದೇವಾಲಯದ ಅಷ್ಟಬಂಧ ಬ್ರಹ್ಮಕಳಶೋತ್ಸವದ ಅಂಗವಾಗಿ ಭಾನುವಾರ ಬೆಳಿಗ್ಗೆ 7ಗಂಟೆಗೆ ಗಣಪತಿ ಹೋಮದಿಂದ ಕಾರ್ಯಕ್ರಮ ಆರಂಭವಾಗಿದ್ದು ಕಳಶ ಪೂಜೆಗಳು ಹಾಗೂ ಪ್ರಾಯಶ್ಚಿತ್ತ ಹೋಮಗಳು ನಡೆದವು. ಸೋಮವಾರ ಬೆಳಿಗ್ಗೆ ಗಣಪತಿ ಹೋಮ, ಅಂಕುರ ಪೂಜೆ, ಹಾಗೂ ಶಾಂತಿ ಹೋಮಗಳು ನೆರವೇರಿದವು. ಮಂಗಳವಾರ ಸಂಜೆ ಅನುಜ್ಞಾಬಲಿ, ಅಂಕುರ ಪೂಜೆ, ಹಾಗೂ ರಾತ್ರಿ ದೇವಿಪೂಜೆಗಳು ನಡೆಯಲಿದ್ದು ಬುಧವಾರ ಸಂಜೆ ಪರಿಕಳಶ ಪೂಜೆಗಳು ಅಧಿವಾಸ ಹೋಮ, ಹಾಗೂ ಮಂಡಲ ಪೂಜೆ ಜರುಗಿದವು.

ಶುಕ್ರವಾರ ಬೆಳಿಗ್ಗೆ ದಿಕ್ಪಾಲಕ ಪ್ರತಿಷ್ಠೆ, ಮಾತ್ರಕಲ್ಲು ಪ್ರತಿಷ್ಠೆ, ಬಲಿಕಲ್ಲು ಪ್ರತಿಷ್ಠೆ, ಮಧ್ಯಾಹ್ನ ಮಹಾಪೂಜೆ, ನಂತರ ಪ್ರಸಾದ ವಿನಿಯೋಗ, ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದ್ದು ನಂತರ ದೇವಿಯ ದರುಶನ ಬಲಿ, ದೇವರ ಉತ್ಸವ– ದೇವಾಲಯದ ಸುತ್ತ ನೃತ್ಯ ಪ್ರದಕ್ಷಿಣೆ ಜರುಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.