ಮೈಸೂರು: ಇಲ್ಲಿನ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಎರಡು ದಿನ ನಡೆದ ದಕ್ಷಿಣ ವಲಯದ ಪೊಲೀಸ್ ಕರ್ತವ್ಯಕೂಟದಲ್ಲಿ ಮಂಡ್ಯ ಜಿಲ್ಲೆ ಸರ್ವೋತ್ತಮ ಪ್ರಶಸ್ತಿಗೆ ಭಾಜನವಾಯಿತು.
ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಯ 160 ಪೊಲೀಸರು ಹಾಗೂ 13 ಶ್ವಾನಗಳು ಕೂಟದಲ್ಲಿ ಭಾಗವಹಿಸಿದ್ದರು.
19 ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಮಂಡ್ಯ ಜಿಲ್ಲೆ 17, ಮೈಸೂರು ನಗರ ಪೊಲೀಸ್ ಕಮಿಷನರೇಟ್ 11, ಕೊಡಗು 9, ಚಾಮರಾಜನಗರ 8, ಹಾಸನ ಹಾಗೂ ಮೈಸೂರು ಜಿಲ್ಲಾ ಪೊಲೀಸರು ತಲಾ 7 ಪದಕಗಳನ್ನು ಗಳಿಸಿದರು. ಚಾಮರಾಜನಗರದ ಪೊಲೀಸ್ ಇನ್ಸ್ಪೆಕ್ಟರ್ ಕೆ.ಷಣ್ಮುಗ ವರ್ಮಾ ಅತಿ ಹೆಚ್ಚು ಪದಕ ಗೆದ್ದುಕೊಂಡರು.
ಬೆರಳಚ್ಚು, ವಿಧಿವಿಜ್ಞಾನ, ಬಾಂಬ್ ಪತ್ತೆ, ಕಂಪ್ಯೂಟರ್, ಫೋಟೊಗ್ರಫಿ, ವಿಡಿಯೊಗ್ರಫಿ ಸೇರಿ ಹಲವು ವಿಭಾಗಗಳಲ್ಲಿ ಪೊಲೀಸರು ಕೌಶಲಗಳನ್ನು ಪ್ರದರ್ಶಿಸಿದರು. ತನಿಖೆಯ ವಿಧಾನ, ಸಾಕ್ಷ್ಯ ಸಂಗ್ರಹ ರೀತಿಯನ್ನು ಕರಾರುವಕ್ಕಾಗಿ ಮಂಡಿಸಿದರು. ಇಲ್ಲಿ ಆಯ್ಕೆಯಾದವರು ಡಿಸೆಂಬರ್ನಲ್ಲಿ ನಡೆಯುವ ರಾಜ್ಯಮಟ್ಟ ಹಾಗೂ ಜನವರಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ‘ವೈಜ್ಞಾನಿಕ ರೀತಿಯಲ್ಲಿ ತನಿಖೆ ನಡೆದರೆ ಅಪರಾಧಿಗಳು ತಪ್ಪಿಸಿ ಕೊಳ್ಳಲು ಸಾಧ್ಯವಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರಕ ಸಾಕ್ಷ್ಯ ಸಂಗ್ರಹಿಸಲು ಸಾಧ್ಯವಾಗುತ್ತದೆ. ಆಗ ಜನಪ್ರತಿನಿಧಿಗಳು, ಸಚಿವರ ಒತ್ತಡಗಳಿಗೆ ಹಾಗೂ ಪ್ರಭಾವಗಳಿಗೆ ಮಣಿಯುವ ಪ್ರಶ್ನೆ ಉದ್ಭವಿಸದು’ ಎಂದರು.
ದಕ್ಷಿಣ ವಲಯದ ಐಜಿಪಿ ವಿಪುಲ್ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ ಹಾಗೂ ಇತರ ಅಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.