ಸಿದ್ದಾಪುರ: ಕಾವೇರಿ ನದಿಯಲ್ಲಿ ಮಾತ್ರ ಕಂಡುಬಂದಿರುವ ಅಪರೂಪ ಎನಿಸಿರುವ ಮಹಶೀರ್ ಮೀನು ಸಂರಕ್ಷಣೆಗೆ ಮೀನುಗಾರಿಕೆ ಇಲಾಖೆ ಮತ್ತು ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಮುಂದಾಗಿದೆ. ಈಚೆಗೆ ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ಮಹಶೀರ್ ಮೀನುಗಳ ವೀಕ್ಷಣೆ ಮತ್ತು ಮರಿಗಳನ್ನು ನದಿಗೆ ಬಿಡುವ ಕಾರ್ಯಕ್ರಮ ನಡೆಯಿತು. ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.
ಕಾವೇರಿ ನದಿಯಲ್ಲಿ ನೆಲ್ಯಹುದಿಕೇರಿ ಸೇತುವೆಯಿಂದ ಕುಶಾಲನಗರದ ಸೇತುವೆ ಅಂತರದಲ್ಲಿ ಮಹಶೀರ್ ಮೀನುಗಳು ಕಾಣಬರುತ್ತದೆ. ಶುದ್ಧ ನೀರು ಇರುವ ಪ್ರದೇಶದಲ್ಲಿ ಮಾತ್ರ ಈ ತಳಿಯ ಮೀನುಗಳು ಕಾಣಬರುತ್ತಿದೆ ಎನ್ನಲಾಗುತ್ತದೆ.
1986ರಿಂದ ಈ ಪ್ರದೇಶವನ್ನು ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಗುತ್ತಿಗೆ ಪಡೆದು ಮೀನು ಸಂರಕ್ಷಣೆಯಲ್ಲಿ ನಿರತವಾಗಿದೆ. ಪ್ರಸಕ್ತ ವರ್ಷ ಜಿಲ್ಲೆಯ ಗಡಿ ಭಾಗವಾದ ಶಿರಂಗಾಲದವರೆಗೆ ಗುತ್ತಿಗೆ ನೀಡಿದೆ. ಕೆಂಪು ಗರಿಯ ಗೋಲ್ಡ್ನ್ ಮಹಶೀರ್ ಮತ್ತು ನೀಲಿ ಗರಿಯ ಸಿಲ್ವರ್ ಮಹಶೀರ್ ಹೆಸರಿನ ಮೀನುಗಳು ಅಪರೂಪದ ತಳಿ ಎಂದು ಹೇಳಲಾಗಿದೆ. ಮಹಾಶೀರ್ ಎಂದರೆ ಸಂಸ್ಕೃತದಲ್ಲಿ ದೊಡ್ಡ ತಲೆ ಎಂದು ಅರ್ಥವಿದೆ.
ದೊಡ್ಡ ತಲೆ, ಬೃಹತ್ ಗಾತ್ರದಿಂದ ಮಹಶೀರ್ಎಂಬ ಹೆಸರು ಬಂದಿದೆ. ವಿವಿಧ ದೇಶಗಳ ಮತ್ಸ್ಯ ಸಂಶೋಧಕರು ವಾಲ್ನೂರು ತ್ಯಾಗತ್ತೂರಿಗೆ ಆಗಮಿಸಿ ತಳಿ ಸಂಶೋಧನೆಯಲ್ಲಿ ತೊಡಗಿದ್ದಾರೆ ಎಂದು ವೈಲ್ಡ್ ಲೈಫ್ನ ಚೇಂದಂಡ ಅಯ್ಯಪ್ಪ ಪ್ರಜಾವಾಣಿಗೆ ತಿಳಿಸಿದರು. ಮಹಶಿರ್ ಮೀನುಗಳಿವೆ ಎಂದು ಮೊದಲು ಗುರುತಿಸಿದ ಇಲ್ಲಿನ ಚೇಂದಂಡ ಪೊನ್ನಪ್ಪ ಅವರು, 45ಕೆಜಿ ತೂಕದ ಮೀನು ಹಿಡಿದು ಮಡಿಕೇರಿ ಕೋಟೆ ಆವರಣದಲ್ಲಿ ಪ್ರದರ್ಶಿಸಿದ್ದರು.
ಜಿಲ್ಲಾಡಳಿತ ಈ ವ್ಯಾಪ್ತಿ ಪ್ರದೇಶವನ್ನು ಸಂರಕ್ಷಿತ ಪ್ರದೇಶ ಎಂದು ಪರಿಗಣಿಸಿದೆ. ಇತ್ತೀಚೆಗೆ ಹೈ ಕೋರ್ಟ್ ಆದೇಶದಲ್ಲಿ ಈ ಪ್ರದೇಶವನ್ನು ಸೂಕ್ಷ್ಮ ವಲಯವೆಂದು ಪರಿಗಣಿಸಿದೆ ಎಂದು ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯ ಪ್ರಮುಖರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.