ಗೋಣಿಕೊಪ್ಪಲು: ವಿರಾಜಪೇಟೆ ಸೇಂಟ್ಆನ್ಸ್ ಪದವಿ ಕಾಲೇಜಿನ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳು ಭಾನುವಾರ ಚೆನ್ನಂಗಿ ಸಮೀಪದ ದೈಯದ ಹಾಡಿಗೆ ಭೇಟಿ ನೀಡಿ ಗಿರಿಜನರ ಸಂಸ್ಕೃತಿ, ವಸತಿ ವ್ಯವಸ್ಥೆ ಮೊದಲಾದವುಗಳನ್ನು ಕಂಡು ಬೆರಾಗಾದರು.
ಬೆಳಿಗ್ಗೆ 9.30ಕ್ಕೆ ಹಾಡಿಗೆ ತೆರಳಿದ ವಿದ್ಯಾರ್ಥಿಗಳಿಗೆ ಹಾಡಿಯ ಜನರು ಕಾಡಿನ ಹೂಗಳನ್ನು ನೀಡಿ, ದೀಪದಾರತಿ ಎತ್ತಿ, ದುಡಿಕೊಟ್ಟು ವಾಲಗದೊಂದಿಗೆ ಸ್ವಾಗತಿಸಿದರು.
ಶಿಬಿರಾರ್ಥಿಗಳು ಹಾಡಿಯ ಎಲ್ಲ ಮನೆಗಳನ್ನೂ ಸಂದರ್ಶಿಸಿ, ಅವರೊಂದಿಗೆ ಸಂವಾದ ನಡೆಸಿದರು.
ಅವರ ಆರ್ಥಿಕ ಪರಿಸ್ಥಿತಿ, ಜೀವನ ಪದ್ಧತಿ, ಸಂಪ್ರದಾಯ ಮೊದಲಾದವಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಅವರ ನೀಡಿದ ಉತ್ತರಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ನಿಸರ್ಗದ ನೆರಳಿನಲ್ಲಿ ಕುಳಿತು ವಿದ್ಯಾರ್ಥಿಗಳು ಗಿರಿಜನ ಮುಖಂಡ ಹಾಗೂ ತಿತಿಮತಿ ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಜೆ.ಕೆ.ರಾಮು ಅವರೊಂದಿಗೆ ಸಂವಾದ ನಡೆಸಿದರು.
ಜೆ.ಕೆ.ರಾಮು ಅವರು ಹಾಡಿದ ಜೇನುಕುರುಬರ ಹಾಡು ಹಾಗೂ ದುಡಿಕೊಟ್ಟು ವಾದ್ಯಕ್ಕೆ ಹಾಡಿಯ ಜನರೊಂದಿಗೆ ವಿದ್ಯಾರ್ಥಿಗಳು ಕುಣಿದು ಸಂಭ್ರಮಿಸಿದರು. ಹಾಡಿ ಯುವಕರಾದ ಸಿದ್ದಪ್ಪ, ರಮೇಶ್, ರಾಜು, ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗಾಯತ್ರಿ ಪಾಲ್ಗೊಂಡಿದ್ದರು.
ಆರು ದಿನಗಳಿಂದ ಚೆನ್ನಂಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿರುವ ವಾರ್ಷಿಕ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿ, ಗಿಡಗಂಟಿಗಳನ್ನು ಕಡಿದು ಅಂದಗೊಳಿಸಿದ್ದಾರೆ. ಶಾಲೆಯ ಸುತ್ತ ತಂತಿ ಬಳಿ ನಿರ್ಮಿಸಿದ್ದಾರೆ. ಆವರಣದಲ್ಲಿ ಒಣಗಿ ಹೋಗಿದ್ದ ಮರವನ್ನು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಕಡಿದು ಅದರಿಂದ ಕುಳಿತುಕೊಳ್ಳಲು ಆಸನ ನಿರ್ಮಿಸಿದ್ದಾರೆ.ಅಕ್ಷರ ದಾಸೋಹ ಕೊಠಡಿ ಸೇರಿದಂತೆ ಕಾಪೌಂಡ್ ಹಾಗೂ ಕಟ್ಟಡದ ಗೋಡೆ ಹಾಗೂ ಕಿಟಕಿ ಬಾಗಿಲುಗಳಿಗೆಲ್ಲ ಸುಣ್ಣಬಣ್ಣ ಬಳಿದರು.
ಕಸ ಹಾಕಲು ಗುಂಡಿ : ಭಾನುವಾರ ಕಸವನ್ನು ಒಂದೆಡೆ ಹಾಕಲು ಗುಂಡಿ ತೋಡಿದರು. ಮೈದಾನದಲ್ಲಿ ಥ್ರೋಬಾಲ್ ಕೋರ್ಟ್ ನಿರ್ಮಿಸಿಕೊಟ್ಟರು. ಗಂಡುಮಕ್ಕಳ ಜತೆಯಲ್ಲಿ ಹೆಣ್ಣು ಮಕ್ಕಳು ಕೂಡ ಹಾರೆ ಗುದ್ದಲಿ, ಕತ್ತಿ,ಬ್ರಷ್ ಹಿಡಿದು ಕೆಲಸಮಾಡುತ್ತಿದ್ದದ್ದು ಮೆಚ್ಚಗೆ ಗಳಿಸಿತು. ಶಿಬಿರಾಧಿಕಾರಿ ಎಚ್.ಆರ್.ಅರ್ಜುನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.