ಕೆಜಿಎಫ್: ‘ಅಶಕ್ತ ಸಾರ್ವಜನಿಕರು ತಮ್ಮ ಹಕ್ಕು ರಕ್ಷಿಸಿಕೊಳ್ಳಲು ಕಾನೂನು ಸೇವಾ ಸಮಿತಿ ಮೂಲಕ ನೇರವಾಗಿ ನ್ಯಾಯಾಧೀಶರನ್ನು ಭೇಟಿ ಮಾಡಲು ಅವಕಾಶವಿದೆ’ ಎಂದು 3ನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಎಂ.ಜಗದೀಶ್ವರ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಶಕ್ತರ ಹಕ್ಕು ಚ್ಯುತಿಗೆ ಅವಕಾಶವಿಲ್ಲ. ನ್ಯಾಯದಿಂದ ವಂಚಿತರಾದ ದುರ್ಬಲರಿಗೆ ನ್ಯಾಯ ಕೊಡಿಸುವುದು ಕಾನೂನು ಸೇವಾ ಪ್ರಾಧಿಕಾರದ ಗುರಿಯಾಗಿದೆ ಎಂದರು.
ಹೈಕೋರ್ಟ್ನಿಂದ ಸುಪ್ರೀಕೋರ್ಟ್ವರೆಗೂ ಉಚಿತ ವಕೀಲರ ಸಲಹೆ ಮತ್ತು ನೆರವು ನೀಡಲಾಗುವುದು. ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಕೆಜಿಎಫ್ ನ್ಯಾಯಾಲಯ ಸಂಕಿರಣದಲ್ಲಿ ವಕೀಲರ ನೇಮಕ ಮಾಡಲಾಗುವುದು. ನ್ಯಾಯ ಕೋರಿ ಬರುವ ಎಲ್ಲರಿಗೂ ಅವರು ಉಚಿತವಾಗಿ ಸಲಹೆ ನೀಡುತ್ತಾರೆ. ಶೀಘ್ರದಲ್ಲಿಯೇ ನ್ಯಾಯಾಲಯದ ಮುಂಭಾಗದಲ್ಲಿ ಈ ಘಟಕ ಪ್ರಾರಂಭಿಸಲಾಗುವುದು ಎಂದು ಹೇಳಿದರು.
‘ನ. 9ರಂದು ರಾಬರ್ಟಸನ್ಪೇಟೆ ಮತ್ತು ಆಂಡರಸನ್ಪೇಟೆಗಳಲ್ಲಿ ವಿದ್ಯಾರ್ಥಿಗಳಿಂದ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗುವುದು. ಈ ಮೂಲಕ ಜನಜಾಗೃತಿ ಮೂಡಿಸಲು ಯತ್ನಿಸಲಾಗುವುದು’ ಎಂದು ಅವರು ತಿಳಿಸಿದರು.
ರಾಬರ್ಟಸನ್ಪೇಟೆಯಲ್ಲಿರುವ ಗುರುಭವನ ಬಹು ವರ್ಷದಿಂದ ನಿರ್ಮಾಣದ ಹಂತದಲ್ಲಿದೆ. ಈಚೆಗೆ ಸ್ವಚ್ಛ ಭಾರತ್ ಕಾರ್ಯಕ್ರಮ ಸಹ ಅಲ್ಲಿ ಹಮ್ಮಿಕೊಳ್ಳಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿದೆ ಎಂದು ತಿಳಿಸಿದರರು.
ನ್ಯಾಯಾಧೀಶರಾದ ದಯಾನಂದ, ರೂಪಾ, ಎಚ್.ಆರ್.ರವಿ ಕುಮಾರ್, ಲೋಕೇಶ್, ನಾಗೇಶ್ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ ಕಾವಲಿ, ಶಿಕ್ಷಣಾಧಿಕಾರಿ ತಿಮ್ಮರಾಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿರೆಡ್ಡಿ, ಸರ್ಕಲ್ ಇನ್ಸ್ಪೆಕ್ಟರ್ ಶ್ರೀಕಂಠ, ಸಬ್ ಇನ್ಸ್ಪೆಕ್ಟರ್ ಹರೀಶ್, ವಕೀಲರ ಸಂಘದ ಎಸ್.ಎನ್.ರಾಜಗೋಪಾಲಗೌಡ ಮತ್ತು ಜ್ಯೋತಿಬಸು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.