ADVERTISEMENT

ಎತ್ತಿನಹೊಳೆ ಬೇಕು, ಡ್ಯಾಂ ಬೇಡ

12 ಗ್ರಾಮಸ್ಥರಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2014, 9:13 IST
Last Updated 16 ಸೆಪ್ಟೆಂಬರ್ 2014, 9:13 IST
ಎತ್ತಿನಹೊಳೆ ಯೋಜನೆಯಲ್ಲಿ ಬಫರ್‌ ಡ್ಯಾಂ ನಿರ್ಮಾಣ ಮಾಡಬಾರದೆಂದು ಒತ್ತಾಯಿಸಿ ಕೊರಟಗೆರೆ ತಾಲ್ಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಸೋಮವಾರ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು. ಶಾಸಕ ಸುಧಾಕರ್‌ಲಾಲ್‌, ಮುಖಂಡ ಮಹಾಲಿಂಗಪ್ಪ ಇನ್ನಿತರರು ಇದ್ದಾರೆ.
ಎತ್ತಿನಹೊಳೆ ಯೋಜನೆಯಲ್ಲಿ ಬಫರ್‌ ಡ್ಯಾಂ ನಿರ್ಮಾಣ ಮಾಡಬಾರದೆಂದು ಒತ್ತಾಯಿಸಿ ಕೊರಟಗೆರೆ ತಾಲ್ಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಸೋಮವಾರ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು. ಶಾಸಕ ಸುಧಾಕರ್‌ಲಾಲ್‌, ಮುಖಂಡ ಮಹಾಲಿಂಗಪ್ಪ ಇನ್ನಿತರರು ಇದ್ದಾರೆ.   

ತುಮಕೂರು:  ಎತ್ತಿನಹೊಳೆ ಯೋಜನೆ ಜಾರಿಯಿಂದ ಕೊರಟಗೆರೆ, ದೊಡ್ಡಬಳ್ಳಾ­ಪುರ ತಾಲ್ಲೂಕಿನ ಹತ್ತಕ್ಕೂ ಹೆಚ್ಚು ಗ್ರಾಮಗಳು ಮುಳುಗಡೆಯಾಗಲಿದ್ದು, ಯಾವುದೇ ಕಾರಣಕ್ಕೂ ಈಗಿನ ಯೋಜ­ನೆಯಂತೆ ‘ಬಫರ್‌ ಡ್ಯಾಂ’ ನಿರ್ಮಾಣ ಮಾಡಬಾರದು ಎಂದು ಒತ್ತಾಯಿಸಿ ಗ್ರಾಮಸ್ಥರು ಸೋಮವಾರ ಜಿಲ್ಲಾ­ಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಬೈರಗೊಂಡ್ಲು, ಬೆಲ್ಲದಹಳ್ಳಿ, ಸುಂಕದ­ಹಳ್ಳಿ, ಚಿನ್ನಹಳ್ಳಿ, ಗೆದಮೇನಹಳ್ಳಿ, ಲಕ್ಕಮುತ್ತನಹಳ್ಳಿ, ವೀರಸಾಗರ, ಗೊಲ್ಲರ­ಹಟ್ಟಿ, ಮಚ್ಚೇನಹಳ್ಳಿ, ಗರುಡಗಲ್ಲು, ಲೆಕ್ಕೇನಹಳ್ಳಿ, ವಡೇರಹಳ್ಳಿ, ಬೂಚನಹಳ್ಳಿ ಗ್ರಾಮಸ್ಥರು ನಗರದ ಟೌನ್‌ಹಾಲ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯರೆಗೆ ಮೆರವಣಿಗೆ ನಡೆಸಿದರು. ಜಿಲ್ಲಾ ರೈತ ಸಂಘ ರೈತರ ಪ್ರತಿಭಟನೆ ಬೆಂಬಲ ನೀಡಿತು.
ಎತ್ತಿನಹೊಳೆ ಯೋಜನೆ ರೈತರ ಹೋರಾಟ ಸಮಿತಿ (ಬೈರಗೊಂಡ್ಲು) ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ರೈತರ ಮೆರವಣಿಗೆಯಿಂದಾಗಿ ಅರ್ಧ­-ಗಂಟೆ ಕಾಲ ಸಂಚಾರ ಅಸ್ತವ್ಯಸ್ತ­ವಾಯಿತು.

ಜೀವಕೊಟ್ಟರೂ, ದುಡ್ಡು ಕೊಟ್ಟರೂ ಭೂಮಿ ಬಿಡೆವು, ನಮ್ಮ ಭೂಮಿ ನಮಗೆ ಬೇಕು, ರಕ್ತ ಕೊಟ್ಟರೂ ಗ್ರಾಮ ಬಿಡೆವು, ನಮ್ಮ ಊರು, ನಮ್ಮ ಸರ್ವಸ್ವ ಎಂಬ ಫಲಕಗಳನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಸುಧಾಕರ್‌­ಲಾಲ್‌, ಎತ್ತಿನಹೊಳೆ ಯೋಜನೆಯನ್ನು ವಿರೋಧ ಮಾಡುತ್ತಿಲ್ಲ. ನಮಗೂ ನೀರು ಬೇಕು. ಆದರೆ ಗ್ರಾಮಗಳು ಮುಳುಗ­ಡೆಯಾಗದಂತೆ ಯೋಜನೆ ಜಾರಿ-ಗೊಳಿಸಬೇಕು ಎಂದು ಒತ್ತಾ­ಯಿಸಿದರು.

ಯಾವುದೇ ಕಾರಣಕ್ಕೂ ಗ್ರಾಮ ಮುಳುಗಡೆ ಆಗಬಾರದು. ಪರ್ಯಾಯ ಕಾಲುವೆ ರೂಪಿಸುವಂತೆ ಮುಖ್ಯಮಂತ್ರಿ, ಸಚಿವರನ್ನು ಭೇಟಿ ಮಾಡಿ ಕೋರು­ವುದಾಗಿ ತಿಳಿಸಿದರು.

ಭೂಮಿಯ ಜೊತೆ ರೈತರು ಭಾವ­ನಾತ್ಮಕ ಸಂಬಂಧ ಹೊಂದಿದ್ದಾರೆ. ಗ್ರಾಮಸ್ಥರನ್ನು ಒಕ್ಕಲೆಬ್ಬಿಸಬಾರದು. ಮಾವತ್ತೂರು ಕೆರೆ, ತೀತಾ ಜಲಾ­ಶಯವನ್ನು ಆಳಪಡಿಸಿ ನೀರು ಬಳಸಬ­ಹುದು. ಒಂದೇ ಅಣೆಕಟ್ಟೆ ಕಟ್ಟುವ ಬದಲಿಗೆ ಸಣ್ಣ ಸಣ್ಣದಾಗಿ ನಾಲ್ಕೈದು ಡ್ಯಾಂ ಕಟ್ಟುವಂತೆ ಆಗ್ರಹಿಸಿದರು.

ಮುಖಂಡ ಮಹಾಲಿಂಗಪ್ಪ ಮಾತ­ನಾಡಿ, ಯಾವುದೇ ಕಾರಣಕ್ಕೂ ಒಕ್ಕಲೆ­ಬ್ಬಿಸಲು ಬಿಡುವುದಿಲ್ಲ. ಭೂಮಿ­ಯನ್ನು ಕೊಡಲು ಸಾಧ್ಯವಿಲ್ಲ ಎಂದರು.

ಚಿಕ್ಕತಿಮ್ಮಯ್ಯ ಮಾತನಾಡಿ, ಎತ್ತಿನಹೊಳೆ, ಭದ್ರಾ ಮೇಲ್ದಂಡೆ, ಲಿಂಗನಮಕ್ಕಿ ಯಾವ ಯೋಜನೆನಿಂದ ನೀರು ಕೊಟ್ಟರೂ ಸ್ವಾಗತಿಸುತ್ತೇವೆ. ಆದರೆ ದೊಡ್ಡದೊಡ್ಡ ಯೋಜನೆಗಳ ನಿರಾಶ್ರಿತರು ಸಮಸ್ಯೆ ನಮಗೆ ಹರಿವಿದೆ. ಗ್ರಾಮಗಳನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಹೇಳಿದರು.

ಪರಮಶಿವಯ್ಯ ವರದಿಯಲ್ಲಿ ಗ್ರಾಮ­ಗಳ ಮುಳುಗಡೆ ಸೇರಿರಲಿಲ್ಲ. 20 ಹಳ್ಳಿಗಳ ಮೇಲೆ ಪರಿಣಾಮ ಬೀರಲಿದೆ. ಏಕಾಏಕಿ ಗ್ರಾಮಗಳನ್ನು ಮುಳುಗಿಸಿ ಅಣೆಕಟ್ಟೆ ಕಟ್ಟುವ ಪ್ರಸ್ತಾವ ಸರಿ ಅಲ್ಲ ಎಂದರು.

ದೊಡ್ಡಬಳ್ಳಾಪುರ ತಾಲ್ಲೂಕಿನ ಲೆಕ್ಕೇನಹಳ್ಳಿಯ ಮುಖಂಡ ನಾಗಹನು­ಮಯ್ಯ ಮಾತನಾಡಿ, ಊರಿನಿಂದ 100 ಜನರು ಪ್ರತಿಭಟನೆಗೆ ಬಂದಿದ್ದೇವೆ. ಯೋಜ­ನೆಯಿಂದ ಮನೆ ಮಠ ಹೋಗ­ಲಿದೆ. ಯೋಜನೆಯೇ ಬೇಡ ಎಂದು ಆಗ್ರಹಿಸಿದರು. ಉಜ್ಜನಿ, ಹೊಸಳ್ಳಿಯಲ್ಲಿ 400 ಎಕರೆ ಅರಣ್ಯವಿದೆ. ಅಲ್ಲಿಯೇ ಡ್ಯಾಂ ಕಟ್ಟಬಹುದಲ್ಲ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.