ಕೋಲಾರ: ನಗರದ ಪೇಟೆಚಾಮನಹಳ್ಳಿಯಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಶಾಖೆ ಸ್ಥಳಾಂತರ ಮಾಡದಂತೆ ಒತ್ತಾಯಿಸಿ ನಾಗರಿಕರ ಹಿತ ರಕ್ಷಣಾ ವೇದಿಕೆ ಸದಸ್ಯರು ಬುಧವಾರ ಬ್ಯಾಂಕ್ ಮುಂದೆ ಧರಣಿ ನಡೆಸಿದರು.
ವೇದಿಕೆ ಅಧ್ಯಕ್ಷ ಗೋ.ರಂಗಪ್ಪ ಮಾತನಾಡಿ, ‘ಪಿಸಿ ಬಡಾವಣೆಯಲ್ಲಿ ಬ್ಯಾಂಕ್ ಶಾಖೆ ಆರಂಭವಾಗಿ 10 ವರ್ಷ ಗಳೇ ಕಳೆದಿವೆ. ಪ್ರತಿದಿನ ಸಾವಿರಾರು ಗ್ರಾಹಕರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶಾಖೆ ಸ್ಥಳಾಂತರ ಮಾಡಲು ಮುಂದಾಗಿರುವುದು ಎಷ್ಟು ಮಾತ್ರ ಸರಿ’ ಎಂದು ಪ್ರಶ್ನಿಸಿದರು.
‘ಬ್ಯಾಂಕ್ ಆರಂಭವಾದಾಗಿನಿಂದ ಇಲ್ಲಿವರೆಗೆ 30 ಸಾವಿರಕ್ಕೂ ಹೆಚ್ಚು ಮಂದಿ ಖಾತೆ ಮಾಡಿಸಿದ್ದಾರೆ. ವಾರ್ಷಿಕ ₹ 80 ಕೋಟಿಗೂ ಅಧಿಕ ವಹಿವಾಟು ನಡೆಯುತ್ತಿದೆ. ಈ ಶಾಖೆಯನ್ನು ಬಸ್ ನಿಲ್ದಾಣದ ಬಳಿ ಇರುವ ಸ್ಟೇಟ್ ಬ್ಯಾಂಕ್ ಇಂಡಿಯಾ ಕೇಂದ್ರ ಕಚೇರಿಗೆ ಸ್ಥಳಾಂತರಿಸುವ ನಿರ್ಧಾರ ಅವೈಜ್ಞಾನಿಕ ವಾಗಿದೆ’ ಎಂದು ದೂರಿದರು.
‘ಸ್ಥಳಾಂತರಗೊಳಿಸುವುದರಿಂದ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ವೃದ್ದರು ಹಿರಿಯ ನಾಗರಿಕರು ಪಿಂಚಣಿ ಪಡೆದುಕೊಳ್ಳುವವರು, ಉಳಿತಾಯ ಖಾತೆಗಳನ್ನು ನಿರ್ವಹಿಸಲು ಮತ್ತು ಸರ್ಕಾರಿ ನೌಕರರು, ವ್ಯಾಪಾರಸ್ಥರ ದೈನಂದಿನ ಆರ್ಥಿಕ ಚಟುವಟಿಕೆಗಳಿಗೆ ತೊಂದರೆ ಎದುರಾಗುತ್ತದೆ’ ಎಂದು ಹೇಳಿದರು.
‘ಶಾಖೆ ಸ್ಥಳಾಂತರ ಮಾಡುವ ನಿರ್ಧಾರವನ್ನು ಆಡಳಿತ ಮಂಡಳಿಯ ವರು ವಾಪಸ್ ಪಡೆಯಬೇಕು. ಇಲ್ಲವಾ ದರೆ ಹೋರಾಟ ತೀವ್ರಗೊಳಿಸುತ್ತೇವೆ’ ಎಂದು ಎಚ್ಚರಿಸಿದರು.
ನಗರಸಭೆ ಸದಸ್ಯರಾದ ರಾಧಾಕೃಷ್ಣ, ಎಸ್.ಆರ್.ಮುರಳೀಗೌಡ, ಮಾಜಿ ಸದಸ್ಯ ಮಂಜುನಾಥ್, ಹಿರಿಯ ನಾಗರಿಕರ ವೇದಿಕೆ ಕಾರ್ಯಾಧ್ಯಕ್ಷ ಎನ್.ಗೋವಿಂದಪ್ಪ, ಕಾರ್ಯದರ್ಶಿ ಎಸ್.ಪ್ರಮೋದ್ಕುಮಾರ್, ವಕೀಲ ಕೆ.ಆರ್.ಧನರಾಜ್, ಸ್ಥಳೀಯರಾದ ಪಿಳ್ಳಪ್ಪ, ರವಣಪ್ಪ, ನಾಗಣ್ಣ, ಶ್ರೀನಿವಾಸ ಮೂರ್ತಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.