ಕೋಲಾರ: ‘ಕವಿ ಡಿ.ವಿ.ಗುಂಡಪ್ಪನವರ ರಚನೆಯ ಮಂಕು ತಿಮ್ಮನ ಕಗ್ಗವು ಆಧುನಿಕ ಭಗವದ್ಗೀತೆ’ ಎಂದು ಸಾಹಿತಿ ವಿಜಯ ರಾಘವನ್ ಬಣ್ಣಿಸಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಿವಿಜಿ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ‘ಕನ್ನಡ ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿರುವ ಡಿವಿಜಿಯವರು ಆಧುನಿಕ ಸರ್ವಜ್ಞ’ ಎಂದು ಅಭಿಪ್ರಾಯಪಟ್ಟರು.
‘ಕವಿ, ಪತ್ರಕರ್ತ ಹಾಗೂ ಸಾಹಿತಿಯಾಗಿ ಹೆಸರು ಮಾಡಿದ ಡಿವಿಜಿಯವರು ಕೋಲಾರ ಜಿಲ್ಲೆಯವರು ಎಂಬುದು ಹೆಮ್ಮೆಯ ಸಂಗತಿ. ಬದುಕು ಕ್ಷಣಿಕ, ಬದುಕಿದಷ್ಟು ದಿನ ಸಾರ್ಥಕ ಸೇವೆಯ ಮೂಲಕ ನೋವು ಮರೆತು ಬದುಕು ಕಟ್ಟುವುದು ಒಳಿತು ಎಂಬ ಅವರ ಬರಹದ ತಾತ್ಪರ್ಯ ಅದ್ಭುತ’ ಎಂದು ಹೇಳಿದರು.
‘ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಡಿವಿಜಿ ಜನ್ಮ ದಿನ ಆಚರಿಸಬೇಕು. ಡಿವಿಜಿಯವರ ತತ್ವಾದರ್ಶವು ಜೀವನಕ್ಕೆ ದಾರಿ ದೀಪ. ಅವರ ಸಾಹಿತ್ಯದ ಒಂದೊಂದು ಸಾಲು ನುಡಿಮುತ್ತು’ ಎಂದು ಸ್ಮರಿಸಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಪಿ.ನಾರಾಯಣಪ್ಪ, ಸಾಹಿತಿಗಳಾದ ಟಿ.ನಾರಾಯಣಸ್ವಾಮಿ, ಕೃಷ್ಣಮೂರ್ತಿ, ಸರ್ವ ಶಿಕ್ಷಣ ಅಭಿಯಾನ ತಾಲ್ಲೂಕು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸವಿತಾ, ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸ್ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.