ಕೋಲಾರ: ಕೌಟುಂಬಿಕ ಕಲಹದ ಕಾರಣಕ್ಕೆ ಮಹಿಳೆಯೊಬ್ಬರು ಇಬ್ಬರು ಮಕ್ಕಳನ್ನು ಕೆರೆಗೆ ತಳ್ಳಿ ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಶೆಟ್ಟಿಮಾದಮಂಗಲದಲ್ಲಿ ನಡೆದಿದೆ.
ಜಿಲ್ಲೆಯ ಮಾಲೂರು ತಾಲ್ಲೂಕಿನ ವೀರಕಪುತ್ರ ಗ್ರಾಮದ ಜ್ಯೋತಿ (27), ಅವರ ಎರಡು ವರ್ಷದ ಮಗಳು ಬಿಂದು ಮತ್ತು ನಾಲ್ಕು ವರ್ಷದ ಮಗ ಬನ್ನಿ ಮೃತರು.
ಜ್ಯೋತಿ 7 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆಯ ಗೋವಿಂದಪ್ಪ ಎಂಬುವರನ್ನು ಮದುವೆಯಾಗಿದ್ದರು. ಬಳಿಕ ಜಗಳವಾಗಿ ಗೋವಿಂದಪ್ಪ ಪತ್ನಿಯಿಂದ ದೂರವಾಗಿದ್ದರು. ಹೀಗಾಗಿ ಜ್ಯೋತಿ ಮಕ್ಕಳೊಂದಿಗೆ ಮೂರು ತಿಂಗಳಿನಿಂದ ವೀರಕಪುತ್ರ ಗ್ರಾಮದಲ್ಲಿನ ತವರು ಮನೆಯಲ್ಲಿ ನೆಲೆಸಿದ್ದರು.
ಜ್ಯೋತಿ ಅವರು ಶನಿವಾರ (ಸೆ.9) ಮಕ್ಕಳೊಂದಿಗೆ ಗಂಡನ ಮನೆಗೆ ಹೋಗುವುದಾಗಿ ಪೋಷಕರಿಗೆ ತಿಳಿಸಿ ಮನೆಯಿಂದ ಹೊರ ಬಂದಿದ್ದರು. ನಂತರ ಅವರು ಸಮೀಪದ ಶೆಟ್ಟಿಮಾದಮಂಗಲಕ್ಕೆ ಬಂದು ಮಕ್ಕಳನ್ನು ಕೆರೆಗೆ ತಳ್ಳಿದ್ದಾರೆ.
ಬಳಿಕ ಅವರೂ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆರೆಯಲ್ಲಿ ಸೋಮವಾರ ಸಂಜೆ ಶವಗಳು ತೇಲುತ್ತಿರುವುದನ್ನು ನೋಡಿದ ಗ್ರಾಮಸ್ಥರು ಠಾಣೆಗೆ ಮಾಹಿತಿ ನೀಡಿದರು. ಆ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿತು ಎಂದು ಕೋಲಾರ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.