ADVERTISEMENT

ಮಾರುಕಟ್ಟೆಯಲ್ಲಿ ಗೌರಿಸುತನ ಕಾರುಬಾರು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2017, 9:01 IST
Last Updated 21 ಆಗಸ್ಟ್ 2017, 9:01 IST
ಕೋಲಾರದ ಟಿ.ಚನ್ನಯ್ಯ ರಂಗಮಂದಿರದ ಬಳಿಯ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿರುವ ಗಣೇಶ ಮೂರ್ತಿಗಳು.
ಕೋಲಾರದ ಟಿ.ಚನ್ನಯ್ಯ ರಂಗಮಂದಿರದ ಬಳಿಯ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿರುವ ಗಣೇಶ ಮೂರ್ತಿಗಳು.   

ಕೋಲಾರ: ನಗರದ ಪ್ರಮುಖ ರಸ್ತೆಗಳ ಬದಿಯಲ್ಲೆಲ್ಲಾ ಈಗ ಗೌರಿಸುತನದೇ ಕಾರುಬಾರು. ಗೌರಿ–ಗಣೇಶ ಹಬ್ಬಕ್ಕೆ ಮೂರು ದಿನ ಬಾಕಿ ಇರುವಾಗಲೇ ಎಲ್ಲೆಡೆ ಹಬ್ಬದ ವಾತಾವರಣ ಕಳೆಗಟ್ಟಿದೆ. ಹಬ್ಬದ ದಿನ ಸಮೀಪಿಸುತ್ತಿರುವಂತೆ ಕಠಾರಿಪಾಳ್ಯ, ಕುಂಬಾರಪೇಟೆ, ನಗರದ ಹೊರವಲಯದ ಶ್ರೀನಿವಾಸಪುರ ರಸ್ತೆ ಬದಿಯಲ್ಲಿ ಗೌರಿ–ಗಣೇಶ ಮೂರ್ತಿಗಳ ತಯಾರಿಕೆ ಜೋರಾಗಿದೆ. ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳ ಪ್ರತಿನಿಧಿಗಳು ಮೂರ್ತಿ ತಯಾರಕರಿಗೆ ಮುಂಗಡ ಹಣ ಕೊಟ್ಟು ಇಷ್ಟದ ಮೂರ್ತಿಗಳನ್ನು ಕಾಯ್ದಿರಿಸುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಗೌರಿ–ಗಣೇಶ ಮೂರ್ತಿಗಳ ವ್ಯಾಪಾರ ಚುರುಕುಗೊಂಡಿದ್ದು, ಯುವಕರ ಪಡೆ ವಠಾರ ಹಾಗೂ ಬೀದಿ ಬದಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಸಿದೆ. ಪ್ರಮುಖ ಬಡಾವಣೆಗಳಲ್ಲಿ ಮತ್ತು ರಸ್ತೆಗಳ ಬದಿಯಲ್ಲಿ ಪೆಂಡಾಲ್‌ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಬಟ್ಟೆ ಅಂಗಡಿಗಳಲ್ಲಿ ಗ್ರಾಹಕರ ದಂಡೇ ಕಂಡುಬರುತ್ತಿದೆ.

ಟಿ.ಚನ್ನಯ್ಯ ರಂಗಮಂದಿರ ಮುಂಭಾಗದ ರಸ್ತೆಯಲ್ಲಿ ಗೌರಿ–ಗಣೇಶ ಮೂರ್ತಿಯ ಅಂಗಡಿಗಳ ಸಾಲೇ ಎದುರಾಗುತ್ತದೆ. ನಂದಿ, ಹಂಸ, ಹುಲಿ, ಸಿಂಹ, ನವಿಲು, ಜಿಂಕೆ ಮೇಲೆ ಕುಳಿತ ಭಂಗಿಯ ಗಣೇಶ ಮೂರ್ತಿಗಳು ಕಣ್ಮನ ಸೆಳೆಯುತ್ತವೆ. ತಾಂಡವ ನೃತ್ಯ ಭಂಗಿಯ, ದರ್ಬಾರ್‌ ಭಂಗಿಯ, ರಥದ ಮೇಲೆ ಕುಳಿತ ಗಣೇಶ ಮೂರ್ತಿಗಳು ಪ್ರಮುಖ ಆಕರ್ಷಣೆಯಾಗಿವೆ.

ADVERTISEMENT

ಮೂರ್ತಿಯ ಗಾತ್ರ ಹಾಗೂ ವಿನ್ಯಾಸಕ್ಕೆ ಅನುಗುಣವಾಗಿ ದರ ನಿಗದಿಪಡಿಸಲಾಗಿದೆ. ಜಿಲ್ಲೆಯ ಕೆಂದಟ್ಟಿ, ಅರಹಳ್ಳಿ, ಶಿವಾರಪಟ್ಟಣ ಮತ್ತು ಬೆಂಗಳೂರಿನ ಕಲ್ಕೆರೆ, ಅಗರ ಕೆರೆಯ ಮಣ್ಣನ್ನು ಮೂರ್ತಿ ತಯಾರಿಕೆಗೆ ಬಳಸಲಾಗಿದೆ. ನಗರದಿಂದ ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ಮಂಡ್ಯ, ಹಾಸನ, ಚಿತ್ರದುರ್ಗ, ರಾಮನಗರ ಜಿಲ್ಲೆಗೆ ಗಣೇಶ ಮೂರ್ತಿಗಳನ್ನು ಖರೀದಿಸಿಕೊಂಡು ಹೋಗಲಾಗುತ್ತಿದೆ.

ಚಂದಾ ವಸೂಲಿ: ಗಣೇಶ ಮೂರ್ತಿಯ ಪ್ರತಿಷ್ಠಾಪನೆಗೆ ಸಾರ್ವಜನಿಕರಿಂದ ಚಂದಾ ವಸೂಲಿ ಮಾಡದಂತೆ ಪೊಲೀಸ್‌ ಇಲಾಖೆ ಆದೇಶ ಹೊರಡಿಸಿದ್ದರೂ ಬಡಾವಣೆಗಳಲ್ಲಿ ಚಂದಾ ವಸೂಲಿ ಎಗ್ಗಿಲ್ಲದೆ ನಡೆದಿದೆ. ಚಿಕ್ಕ ಮಕ್ಕಳ ದಂಡು ಚಂದಾ ವಸೂಲಿಗಾಗಿ ಮನೆ ಮನೆಗೆ ಅಲೆಯುತ್ತಿದೆ. ಮತ್ತೊಂದೆಡೆ ಯುವಕರ ಪಡೆ ಜನಪ್ರತಿನಿಧಿಗಳು ಹಾಗೂ ಉದ್ಯಮಿಗಳ ಬಳಿ ದೇಣಿಗೆ ಸಂಗ್ರಹಿಸುತ್ತಿದೆ. ರಸಸಂಜೆ (ಆರ್ಕೆಸ್ಟ್ರಾ) ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ತಯಾರಿ ನಡೆಸಿದೆ.

ಪಿಒಪಿ ನಿರ್ಬಂಧ: ಪರಿಸರ ಸ್ನೇಹಿಯಾದ ಮಣ್ಣಿನ ಗಣೇಶ ಮೂರ್ತಿಗಳನ್ನು ಮಾತ್ರ ಬಳಸುವಂತೆ ನಗರಸಭೆ ಆದೇಶ ಹೊರಡಿಸಿದೆ. ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ (ಪಿಒಪಿ) ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪರಿಸರಕ್ಕೆ ಹಾನಿಕಾರಕವಾಗಿರುವ ಪಿಒಪಿ ಮೂರ್ತಿಗಳನ್ನು ಮಾರಾಟ ಮಾಡಿದರೆ ದಂಡ ವಿಧಿಸುವುದಾಗಿಯೂ ಎಚ್ಚರಿಕೆ ನೀಡಿದೆ.

ಆದರೂ ಅಧಿಕಾರಿಗಳ ಕಣ್ತಪ್ಪಿಸಿ ಹಲವೆಡೆ ಪಿಒಪಿ ಗಣೇಶ ಮೂರ್ತಿಗಳನ್ನು ಮಾರಲಾಗುತ್ತಿದೆ. ಪಿಒಪಿ ಮೂರ್ತಿಗಳು ಮಣ್ಣಿನ ಮೂರ್ತಿಗಳಿಗಿಂತ ನೋಡಲು ಹೆಚ್ಚು ಆಕರ್ಷಕವಾಗಿವೆ. ಈ ಮೂರ್ತಿಗಳ ಬೆಲೆ ದುಬಾರಿಯಾದರೂ ಸಾಗಾಟಕ್ಕೆ ಅನುಕೂಲವೆಂಬ ಕಾರಣಕ್ಕೆ ಜನ ಪಿಒಪಿ ಮೂರ್ತಿಗಳನ್ನೇ ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಆದರೆ, ಪೂಜೆಗೆ ಮಣ್ಣಿನ ಮೂರ್ತಿಗಳೇ ಶ್ರೇಷ್ಠವೆಂದು ನಂಬಿರುವವರು ಪಿಒಪಿ ಮೂರ್ತಿಗಳ ಖರೀದಿಗೆ ಮನಸು ಮಾಡುತ್ತಿಲ್ಲ.

ಪರಿಸರಕ್ಕೆ ಹಾನಿಕಾರಕ: ‘ಹಲವೆಡೆ ನಿಯಮಬಾಹಿರವಾಗಿ ಪಿಒಪಿ ಗಣೇಶ ಮೂರ್ತಿಗಳನ್ನು ಮಾರಲಾಗುತ್ತಿದೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ಪಿಒಪಿ ಮೂರ್ತಿ ಮಾರಾಟ ಪತ್ತೆಗೆ ಕ್ರಮ ಕೈಗೊಳ್ಳಬೇಕು. ಪರಿಸರಕ್ಕೆ ಹಾನಿಕಾರಕವಾಗಿರುವ ಈ ಮೂರ್ತಿಗಳನ್ನು ಖರೀದಿಸದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಗಣೇಶ ಮೂರ್ತಿಗಳ ಮಾರಾಟಗಾರ ಶಶಿಕುಮಾರ್‌್ ‘ಪ್ರಜಾವಾಣಿ’ಗೆ ತಿಳಿಸಿದರು.

ತೊಟ್ಟಿ ನಿರ್ಮಾಣ: ನಗರಸಭೆಯು ಗೌರಿ– ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆಗೆ ಕುರುಬರಪೇಟೆಯ ಬಳಿಯ ಕೋಲಾರಮ್ಮ ಕೆರೆ ಅಂಗಳದಲ್ಲಿ ದೊಡ್ಡ ತೊಟ್ಟಿ ನಿರ್ಮಾಣ ಮಾಡಿದೆ. ಈ ತೊಟ್ಟಿಯನ್ನು ಸ್ವಚ್ಛಗೊಳಿಸಿ ಬಳಿಕ ಬಣ್ಣ ಬಳಿಯಲಾಗುತ್ತದೆ. ಆ ನಂತರ ತೊಟ್ಟಿಗೆ ನೀರು ತುಂಬಿಸಲಾಗುತ್ತದೆ.

ಸಾರ್ವಜನಿಕರು ಹಾಗೂ ವಾಹನಗಳ ಓಡಾಟಕ್ಕೆ ಅಡ್ಡಿಯಾಗದಂತೆ ರಸ್ತೆ ಬದಿಯಲ್ಲಿ ಪೆಂಡಾಲ್‌ ನಿರ್ಮಿಸುವಂತೆ ಪೊಲೀಸ್‌ ಇಲಾಖೆ ಸೂಚನೆ ನೀಡಿದೆ. ಜತೆಗೆ ಪೆಂಡಾಲ್‌ಗಳಲ್ಲಿ ಅಗ್ನಿ ಅನಾಹುತ ಹಾಗೂ ಅಪರಾಧ ಚಟುವಟಿಕೆಗಳ ತಡೆಗೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.