ADVERTISEMENT

ಲಾರಿ ಮೇಲೆ ಕಲ್ಲು ತೂರಿ ರೈತರ ಧರಣಿ

​ಪ್ರಜಾವಾಣಿ ವಾರ್ತೆ
Published 21 ಮೇ 2017, 10:37 IST
Last Updated 21 ಮೇ 2017, 10:37 IST

ಕೋಲಾರ: ಕೊಳವೆ ಬಾವಿ ಕೊರೆಯುವ ಲಾರಿಗಳು ವಿದ್ಯುತ್‌ ತಂತಿಗೆ ತಾಗುವುದರಿಂದ ಪಂಪ್‌ಸೆಟ್‌ಗಳು ಹಾಳಾಗುತ್ತಿವೆ ಎಂದು ಆರೋಪಿಸಿ ನಗರದ ಗಾಂಧಿನಗರ ಸುತ್ತಮುತ್ತಲಿನ ರೈತರು ಶನಿವಾರ ಸಂಜೆ ಲಾರಿಯೊಂದರ ಮೇಲೆ ಕಲ್ಲು ತೂರಿ ಧರಣಿ ನಡೆಸಿದರು.

ಗಾಂಧಿನಗರ ಸುತ್ತಮುತ್ತ ಕೃಷಿ ಜಮೀನುಗಳಿದ್ದು, ಈ ಜಮೀನುಗಳಲ್ಲಿನ ಕೊಳವೆ ಬಾವಿಗಳಿಗೆ ರಸ್ತೆಯ ಅಕ್ಕಪಕ್ಕದ ವಿದ್ಯುತ್‌ ಕಂಬಗಳಿಂದ ವಿದ್ಯುತ್‌ ಸಂಪರ್ಕ ಪಡೆಯಲಾಗಿದೆ. ಈ ರಸ್ತೆಗಳಲ್ಲಿ ಸಂಚರಿಸುವ ಕೊಳವೆ ಬಾವಿ ಕೊರೆಯುವ ಲಾರಿಗಳು ವಿದ್ಯುತ್‌ ತಂತಿಗೆ ತಾಗುವುದರಿಂದ ಶಾರ್ಟ್‌ ಸರ್ಕಿಟ್‌ ಆಗುತ್ತಿದೆ ಎಂದು ಧರಣಿನಿರತರು ದೂರಿದರು.

ಈ ಭಾಗದಲ್ಲಿ ಕೊಳವೆ ಬಾವಿ ಕೊರೆಯುವ ಲಾರಿಗಳ ಸಂಚಾರ ನಿರ್ಬಂಧಿಸುವಂತೆ ಪೊಲೀಸರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಅಲ್ಲದೇ, ಲಾರಿಗಳ ಚಾಲಕರಿಗೂ ಮನವಿ ಮಾಡಿದ್ದೇವೆ. ಆದರೂ ಲಾರಿಗಳ ಸಂಚಾರ ನಿಂತಿಲ್ಲ. ಲಾರಿಗಳಿಂದ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ ಸಂಭವಿಸಿ ಪಂಪ್‌ಸೆಟ್‌ಗಳು ಸುಟ್ಟು ಹೋಗುತ್ತಿವೆ ಎಂದು ಆರೋಪಿಸಿದರು.

ADVERTISEMENT

ಪಂಪ್‌ಸೆಟ್‌ಗಳಿಗೆ ಹಾನಿಯಾಗಿ ಸಾಕಷ್ಟು ನಷ್ಟು ಅನುಭವಿಸಿದ್ದೇವೆ. ಆದರೆ, ಅಧಿಕಾರಿಗಳು ಪರಿಹಾರ ಕೊಟ್ಟಿಲ್ಲ. ಮತ್ತೊಂದೆಡೆ ಲಾರಿ ಮಾಲೀಕರು ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಧರಣಿನಿರತರು ಕೊಳವೆ ಬಾವಿ ಕೊರೆಯುವ ಲಾರಿಯನ್ನು ಅಡ್ಡಗಟ್ಟಿದರು. ಈ ವೇಳೆ ಲಾರಿ ಚಾಲಕ ಮತ್ತು ಧರಣಿನಿರತರ ನಡುವೆ ವಾಗ್ವಾದ ನಡೆಯಿತು. ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಧರಣಿನಿರತರು ಲಾರಿ ಮೇಲೆ ಕಲ್ಲು ತೂರಿ ವಾಹನದ ಗಾಜನ್ನು ಪುಡಿ ಪುಡಿ ಮಾಡಿದರು.

ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಕೊಳವೆ ಬಾವಿ ಕೊರೆಯುವ ಲಾರಿಗಳ ಸಂಚಾರ ನಿರ್ಬಂಧಿಸುವುದಾಗಿ ಭರವಸೆ ನೀಡಿ ಧರಣಿನಿರತ ರೈತರ ಮನವೊಲಿಸಿದರು. ಬಳಿಕ ರೈತರು ಧರಣಿ ಹಿಂಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.