ಕೋಲಾರ: ಸಾಲ ವಸೂಲಾತಿಗೆ ಆದ್ಯತೆ ನೀಡಿ ಬ್ಯಾಂಕ್ ಅನ್ನು ಉತ್ತಮ ಸ್ಥಿತಿಗೆ ತರಲು ಸಹಕರಿಸಬೇಕು ಎಂದು ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಹೇಳಿದರು.
ನಗರದಲ್ಲಿ ಭಾನುವಾರ ಬ್ಯಾಂಕ್ ಏರ್ಪಡಿಸಿದ್ದ ವಿವಿಧ ಶಾಖೆಗಳ ಪ್ರಮುಖ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ವಿವಿಧ ಶಾಖೆಗಳಲ್ಲಿ ರೈತರಿಗೆ ನೀಡಲಾದ ₨ 5.86 ಕೋಟಿ ಸಾಲ ವಸೂಲಿ ಆಗಬೇಕಿದೆ. ಅದನ್ನು ವಸೂಲಿ ಮಾಡಿದರೆ ಇನ್ನಷ್ಟು ಸಾಲವನ್ನು ನೀಡಲು ಸಾಧ್ಯವಾಗುತ್ತದೆ. ಬ್ಯಾಂಕ್ಗೂ ಉತ್ತಮ ಹೆಸರು ಬರುತ್ತದೆ ಎಂದು ಹೇಳಿದರು.
ಕೋಲಾರ ಶಾಖೆಯಲ್ಲಿ ₨ 95 ಲಕ್ಷ, ಚಿಂತಾಮಣಿ ₨ 36 ಲಕ್ಷ, ಬಾಗೇಪಲ್ಲಿ ₨ 45 ಲಕ್ಷ, ಮುಳಬಾಗಲು ₨ 44 ಲಕ್ಷ, ಶಿಡ್ಲಘಟ್ಟ ₨ 54 ಲಕ್ಷ, ಬಂಗಾರಪೇಟೆ ₨ 65 ಲಕ್ಷ ಮತ್ತು ಗೌರಿಬಿದನೂರು ಶಾಖೆಯಲ್ಲಿ ₨ 88 ಲಕ್ಷ ಸಾಲ ವಸೂಲಿ ಆಗಬೇಕಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ತಾಲ್ಲೂಕು ಶಾಖೆಗಳ ಸಿಬ್ಬಂದಿ ಸಾಲ ವಸೂಲಾತಿ ವಿಷಯದಲ್ಲಿ ಗಂಭೀರ ಪ್ರಯತ್ನ ನಡೆಸದಿರುವುದು ವಿಷಾದನೀಯ. ಹೀಗಾಗಿ ಸಾಲ ವಸೂಲಾತಿಗೆ ಒಂದು ತಿಂಗಳ ಗಡುವನ್ನು ನೀಡಲಾಗುತ್ತಿದೆ. ಆ ಗಡುವಿನೊಳಗೆ ಸಾಲದ ಅಷ್ಟೂ ಮೊತ್ತವನ್ನು ಸಾಲಗಾರರಿಂದ ವಸೂಲಿ ಮಾಡಬೇಕು. ಇಲ್ಲವಾದರೆ ಬ್ಯಾಂಕ್ ನಿರಂತರವಾಗಿ ಸರ್ಕಾರಕ್ಕೆ ಬಡ್ಡಿ ಪಾವತಿಸುತ್ತಲೇ ಇರಬೇಕಾಗುತ್ತದೆ ಎಂದು ಅವರು ಹೇಳಿದರು.
ಗಣಕೀಕರಣ: ಬ್ಯಾಂಕ್ ವಹಿವಾಟು ಗಣಕೀಕರಣಗೊಳಿಸಲಾಗಿದೆ. ಸಿಬ್ಬಂದಿಗೆ ಸಮವಸ್ತ್ರಗಳನ್ನು ವಿತರಿಸಲಾಗಿದೆ. 6ನೇ ವೇತನ ಆಯೋಗದ ಶಿಫಾರಸಿನಂತೆ ಸಿಬ್ಬಂದಿಗೆ ವೇತನವೂ ಹೆಚ್ಚಾಗಲಿದೆ. ಹೀಗಾಗಿ ಸಿಬ್ಬಂದಿ ಇನ್ನಷ್ಟು ಉತ್ಸಾಹ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶಪ್ಪ ಮತ್ತು ಉಪಾಧ್ಯಕ್ಷ ಹನುಮಂತರೆಡ್ಡಿ ಉಪಸ್ಥಿತರಿದ್ದರು. ಬ್ಯಾಂಕ್ನ ಎಲ್ಲ ಶಾಖೆಗಳ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.