ADVERTISEMENT

ಸಿನಿಮಾ ಸೆಟ್‌ನಿಂದ ದೂಳು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 5:40 IST
Last Updated 18 ಏಪ್ರಿಲ್ 2017, 5:40 IST
ಕೆಜಿಎಫ್‌: ನಗರದ ಸೈನೈಡ್‌ ಗುಡ್ಡದ ಮೇಲೆ ಹಾಕಲಾಗಿರುವ ಸಿನಿಮಾ ಸೆಟ್‌ನಿಂದಾಗಿ ರಾಬರ್ಟಸನ್‌ಪೇಟೆಗೆ  ದೂಳು ಹೆಚ್ಚಾಗಿತ್ತಿದೆ ಎಂದು ದೂರು ಕೇಳಿಬಂದಿವೆ.
 
ನಟ ಯಶ್‌ ನಟಿಸುತ್ತಿರುವ ‘ಕೆಜಿಎಫ್‘ ಚಿತ್ರಕ್ಕಾಗಿ ನಗರದ ಕೆನಡೀಸ್‌ ಲೈನಿನಲ್ಲಿರುವ ಸೈನೈಡ್‌ ಗುಡ್ಡದ ಮೇಲೆ ಬೃಹತ್‌ ಸೆಟ್‌ ಹಾಕಲಾಗಿದೆ. ಚಿನ್ನದ ಗಣಿಯ ಶಾಫ್ಟ್‌, ವಾಟರ್‌ ಟ್ಯಾಂಕ್‌, ವಾಸದ ಮನೆಗಳುಳ್ಳ ಕಾಲೊನಿಗಳ ಸೆಟ್‌ ಹಾಕಲಾಗಿದೆ. 
 
‘ಎರಡು ವಾರಗಳಿಂದ ನಡೆಯುತ್ತಿರುವ ಚಿತ್ರೀಕರಣಕ್ಕಾಗಿ ನೂರಾರು ಮಂದಿ ಕಾರ್ಮಿಕರು ಕೆಲಸ ಮಾಡಿದ್ದರು. ಅನೇಕ ವಾಹನಗಳು ಗುಡ್ಡದ ಮೇಲೆ ಎಡಬಿಡದೆ ಓಡಾಡುತ್ತಿರುವುದರಿಂದ ದೂಳು ಹೆಚ್ಚಾಗುತ್ತಿದೆ’ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
 
‘ಗುಡ್ಡದ ವೈಶಿಷ್ಟ್ಯಗಳಿಂದ ಇತ್ತೀಚಿನ ವರ್ಷಗಳಲ್ಲಿ ಅನೇಕ ಚಲನಚಿತ್ರಗಳು  ಚಿತ್ರೀಕರಣವಾಗುತ್ತಿದೆ. ಈ ಸಂದರ್ಭದಲ್ಲಿ ದೂಳು ಬರುವುದು ಸಾಮಾನ್ಯವಾಗಿತ್ತು.  ಸತತವಾಗಿ ಚಿತ್ರೀಕರಣವಾಗುತ್ತಿರುವುದರಿಂದ ದೂಳು ನಿಯಂತ್ರಣಕ್ಕೆ ಬರುತ್ತಿಲ್ಲ’ ಎಂದು ಎಂ.ಜಿ.ಮಾರುಕಟ್ಟೆ ವರ್ತಕರೊಬ್ಬರು ಹೇಳುತ್ತಾರೆ.
 
‘ಚಿತ್ರೀಕರಣ ತಂಡಗಳಾದರೂ ನೀರು ಸಿಂಪಡಿಸಿ ಶೂಟಿಂಗ್ ಮಾಡಿದರೆ ದೂಳು ತಡೆಗಟ್ಟಬಹುದು’ ಎಂದರು. ‘ಪ್ರತಿದಿನ 20 ಟ್ಯಾಂಕರ್‌ ನೀರು ಹಾಕಲಾಗುತ್ತಿದೆ. ದೂಳು ಏಳಲು ಹೆಲಿಕ್ಯಾಪ್ಟರ್‌ ಉಪಯೋಗಿಸುತ್ತಿಲ್ಲ.

ಪರಿಸರ ಮಾಲಿನ್ಯ ಕಾಪಾಡುವುದಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಬಿಜಿಎಂಎಲ್‌ಗೆ ಎರಡು ಲಕ್ಷ ರೂಪಾಯಿ ಠೇವಣಿ ಸಹ ಕಟ್ಟಲಾಗಿದೆ’ ಎಂದು ಚಿತ್ರೀಕರಣಕ್ಕೆ ಸ್ಥಳೀಯ ಉಸ್ತುವಾರಿಯಾಗಿರುವ ದಾಮೋದರ್‌ ಹೇಳುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.