ಹನುಮಸಾಗರ: ಹಿಂಗಾರು ಬಿತ್ತನೆಯ ಆರಂಭದಲ್ಲಿ ಕೊಂಚ ಸುರಿದಿದ್ದ ಮಳೆಗೆ ಕಡಲೆ ಬಿತ್ತನೆ ಮಾಡಿದ್ದ ರೈತರು ಮಳೆಗಾಗಿ ಕಾತರಿಸಿದ್ದರು. ಆದರೆ ಹನಿ ಮಳೆಯಾಗದಿದ್ದರೂ ಕಪ್ಪು ಮಣ್ಣಿನಲ್ಲಿ ಬಿತ್ತನೆಯಾಗಿದ್ದ ಕಡಲೆ ಸಣ್ಣ ಪ್ರಮಾಣದಲ್ಲಿ ಬೆಳವಣಿಗೆಯಾಗಿ ಸದ್ಯ ಹೂವು, ಹೀಚಿನಿಂದ ತುಂಬಿಕೊಂಡಿದೆ. ಆದರೆ ಬೆಳೆ ಚನ್ನಾಗಿ ಕಾಣುತ್ತಿದ್ದರೂ ಎಲೆಗಳಲ್ಲಿ ಕೀಡೆ ಹಾವಳಿ ಹೆಚ್ಚು ಕಂಡು ಬರುತ್ತಿದೆ.
ಹೆಚ್ಚಿನ ಪ್ರಮಾಣದಲ್ಲಿ ಚಳಿ ಬಿದ್ದರೆ ಅಲ್ಪ ಪ್ರಮಾಣದಲ್ಲಿ ಬೆಳೆ ದಕ್ಕುವ ಸಾಧ್ಯತೆ ಇದ್ದು, ರೈತರಿಗ ಚಳಿಗಾಗಿ ಮೊರೆ ಇಡುತ್ತಿದ್ದಾರೆ. ವಾರದ ಹಿಂದೆ ಮೋಡ ಕವಿದ ವಾತಾವರಣದಿಂದಾಗಿ ಕಡಲೆ ಬೆಳೆಗೆ ಕೀಡೆಗಳ ಬಿದ್ದಿದ್ದು, ರೈತರು ಬಾರದ ಬೆಳೆಗೆ ಕೈಸುಟ್ಟುಕೊಂಡು ಕ್ರಿಮಿನಾಶಕ ಸಿಂಪಡಿಸುತ್ತಿರುವುದು ಕಂಡು ಬರುತ್ತಿದೆ. ಈ ಭಾಗದ ಹೂಲಗೇರಿ, ಅಡವಿಭಾವಿ, ಹನುಮನಾಳ, ಯರಿಗೋನಾಳ, ಮೀಯಾಪುರ ಭಾಗಗಳಲ್ಲಿ ವರ್ಷದ ವಾಡಿಕೆಗಿಂತ ಈ ಬಾರಿ ಹೆಚ್ಚಿಗೆ ಬಿತ್ತನೆಯಾಗಿದೆ.
ವಾತಾವರಣದಲ್ಲಿ ತೇವಾಮಶವಿಲ್ಲ, ಮಳೆಯ ಮೇಲಿನ ಭರವಸೆಯಂತೂ ಇಲ್ಲವೆ ಇಲ್ಲ, ಉತ್ತಮ ರೀತಿಯಲ್ಲಿ ಚಳಿ ಬಿದ್ದರೆ ನಾಲ್ಕು ಕಾಳು ಬಲಿಯುತ್ತವೆ. ಅಷ್ಟೊ ಇಷ್ಟೊ ಬೆಳೆ ಉಳಿಸಿಕೊಳ್ಳುವುದಕ್ಕೆ ಅನಿವಾರ್ಯವಾಗಿ ನಾವು ತುಟ್ಟಿ ಬೆಲೆಯ ಕ್ರಿಮಿನಾಶಕ ತಂದು ಸಿಂಪರಣೆ ಮಾಡಬೇಕಾಗಿದೆ ಎಂದು ರೈತ ಯಂಕಪ್ಪ ನಾಯಕ ಅಳಲನ್ನು ತೊಡಿಕೊಂಡರು.
ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅರಣಕುಮಾರ ಮಾಹಿತಿ ನೀಡಿ, ಹದಿನೈದು ದಿನಗಳಿಂದ ಮೋಡಕವಿದ ವಾತಾವರಣ ಇರುವುದರಿಂದ ಸಹಜವಾಗಿ ಕಾಯಿಕೊರಕ ಹಾಗೂ ಎಲೆತಿನ್ನುವ ಕೀಡೆಯ ಹಾವಳಿ ಸದ್ಯ ಕಂಡು ಬಂದಿದೆ. ಕೂಡಲೆ ಉಪಶಮನ ಕಾರ್ಯಕ್ಕೆ ಮುಂದಾದರೆ ಪ್ರಾಥಮಿಕ ಹಂತದಲ್ಲಿರುವ ಕೀಡೆಬಾಧೆ ನಿಯಂತ್ರಿಸಬಹುದಾಗಿದೆ ಎಂದರು.
ಇಂತಹ ಬಾಧೆ ಕಂಡುಬಂದ ರೈತರು ಪ್ರತಿ ಲೀಟರ್ ನೀರಿಗೆ 2ಎಂ.ಎಲ್ ಕ್ಲೋರೊಫಾಸ್ ಇಲ್ಲವೆ ಪ್ರಪೊನೋಪಾಸ್ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು. ಅಧಿಕ ಇಳುವರಿಗಾಗಿ ಬೆಳೆ ಶೇ. 50ರಷ್ಟು ಭಾಗ ಹೂಕಟ್ಟಿದ ನಂತರದಲ್ಲಿ ಪ್ರತಿ ಎಕರೆಗೆ 2ಕೆ.ಜಿ ಪಲ್ಸ್ಮ್ಯಾಜಿಕ್ ಸಿಂಪರಣೆ ಮಾಡಬೇಕು ಎಂದು ತಿಳಿಸಿದರು.
ಈ ಭಾಗದಲ್ಲಿ ಎರೆ ಭೂಮಿ ಹೊಂದಿರುವ ರೈತರು ಹಿಂಗಾರು ಹಂಗಾಮಿನಲ್ಲಿ ಕಡಲೆ ಬೀಜದ ಜೊತೆ ಜೋಳದ ಬೀಜ ಮಿಶ್ರಮಾಡಿ ಬಿತ್ತುವುದು ಸಂಪ್ರದಾಯ. ವಾಣಿಜ್ಯ ಬೆಳೆಯಾಗಿರುವ ಕಡಲೆ ಬೆಳೆ ಕೈಗೊಂದಿಷ್ಟು ಕಾಸು ಸಂಪಾದನೆ ಮಾಡಿಕೊಟ್ಟರೆ ಜೋಳದ ಬೆಳೆ ವರ್ಷಕ್ಕಾಗುಷ್ಟು ಅನ್ನ ದೊರಕಿಸುತ್ತದೆ ಎಂಬುದು ರೈತರ ಲೆಕ್ಕಾಚಾರವಾಗಿದೆ. ರೈತರು ಹೆಚ್ಚಿನ ಮಾಹಿತಿಗೆ 95386 05485 ಸಂಪರ್ಕಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.