ADVERTISEMENT

ಕನಕಗಿರಿ: ಉತ್ತಮ ಮಳೆ ಭರ್ಜರಿ ಖರೀದಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 5:46 IST
Last Updated 6 ಸೆಪ್ಟೆಂಬರ್ 2017, 5:46 IST

ಕನಕಗಿರಿ: ಪಟ್ಟಣ ಸೇರಿದಂತೆ ನವಲಿ, ಹುಲಿಹೈದರ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸೋಮವಾರ ರಾತ್ರಿ ಮತ್ತು ಮಂಗಳವಾರ ಮುಂಜಾನೆ ಉತ್ತಮ ಮಳೆಯಾಗಿದೆ. ಧಾರಾಕಾರವಾಗಿ ಸುರಿದ ಮಳೆಯಿಂದ ಪಟ್ಟಣದ ಸರ್ಕಾರಿ ಪ್ರೌಢಶಾಲೆ, ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಮೈದಾನಗಳಲ್ಲಿ ನೀರು ನಿಂತ ಪರಿಣಾಮ ಮಕ್ಕಳ ಆಟೋಟಕ್ಕೆ ಸಮಸ್ಯೆಯಾಯಿತು.

ಬಂಕಾಪುರ, ಸೂಳೇಕಲ್, ಕಲಕೇರಿ, ಬೆನಕನಾಳ, ಮಲ್ಲಿಗೆವಾಡ, ಜೀರಾಳ ಇತರೆ ಗ್ರಾಮಗಳಲ್ಲಿನ ಜಮೀನು ಹಾಗೂ ರಸ್ತೆಗಳಲ್ಲಿ ಮಳೆ ನೀರು ನಿಂತಿರುವುದು ಕಂಡು ಬಂತು.
ಮಳೆಯಿಂದ ಹರ್ಷಿತಗೊಂಡ ರೈತರು ಮಂಗಳವಾರ ಹೊಲದಲ್ಲಿನ ಬೆಳೆಗಳನ್ನು ಪರಿಶೀಲಿಸಿದರು. ಉತ್ತಮ ಮಳೆ ಸುರಿದ ಕಾರಣ ಪಟ್ಟಣಕ್ಕೆ ಧಾವಿಸಿದ ವಿವಿಧ ಗ್ರಾಮಗಳ ರೈತರು ಬಿತ್ತನೆ ಬೀಜ, ಕ್ರಿಮಿಕೀಟ ನಾಶಕ ಔಷಧಿ ಖರೀದಿಯಲ್ಲಿ ತೊಡಗಿದ್ದರು.

ಬಸರಿಹಾಳ, ಸೋಮಸಾಗರ, ರಾಂಪುರ, ಮುಸಲಾಪುರ ಗ್ರಾಮಗಳಲ್ಲಿ ವಿಪರೀತವಾಗಿ ಸುರಿದ ಮಳೆಯಿಂದ ಇಲ್ಲಿನ ತ್ರಿವೇಣಿ ಸಂಗಮ ತುಂಬಿ ಹರಿಯುತ್ತಿತು. ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ ತ್ರಿವೇಣಿ ಸಂಗಮದ ಹೂಳು ಎತ್ತುವ ಕಾಮಗಾರಿ ಅರೆಬರೆ ಮಾಡಿದ ಕಾರಣ ನೀರು ಸಂಗ್ರಹವಾಗದೆ ಪೋಲಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

ADVERTISEMENT

ಅಧಿಕಾರಿಗಳು, ಜನಪ್ರತಿನಿಧಿಗಳು ನೀರು ಸಂಗ್ರಹಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳದೆ ಕಾಲಹರಣ ಮಾಡಿದ್ದಾರೆ ಎಂದು ಯುವಕರಾದ ಕೊಟ್ರೇಶ ಮಡಿವಾಳ, ಮಾಬುಸಾಬ ಗೊರಳ್ಳಿ ದೂರಿದರು. ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿನ ರಸ್ತೆಗಳಲ್ಲಿ ಮಳೆ ನೀರು ನಿಂತ ಪರಿಣಾಮ ರಸ್ತೆಗಳು ತೀರ ಹದಗೆಟ್ಟಿದ್ದು ಸಂಚಾರಕ್ಕೆ ಅಡಚಣೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.