ADVERTISEMENT

ಕೊಪ್ಪಳ ಸಾಹಿತ್ಯ ಭವನಕ್ಕೆ ಹೊಸ ಮೆರುಗು

ಶರತ್‌ ಹೆಗ್ಡೆ
Published 17 ಜುಲೈ 2017, 5:46 IST
Last Updated 17 ಜುಲೈ 2017, 5:46 IST
ಕೊಪ್ಪಳದ ನವೀಕೃತ ಸಾಹಿತ್ಯ ಭವನದ ಒಳಾಂಗಣದ ನೋಟ
ಕೊಪ್ಪಳದ ನವೀಕೃತ ಸಾಹಿತ್ಯ ಭವನದ ಒಳಾಂಗಣದ ನೋಟ   

ಕೊಪ್ಪಳ: ನಗರದ ಸಾಹಿತ್ಯ ಭವನ ನವೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಜುಲೈ 17ರಂದು ಉಪವಿಭಾಗಾಧಿಕಾರಿ ಕಚೇರಿಗೆ ಹಸ್ತಾಂತರಗೊಳ್ಳಲಿದೆ. ಜನವರಿಯಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ಆರಂಭವಾದ ಕಾಮಗಾರಿ 6 ತಿಂಗಳ ಕಾಲ ನಡೆದಿದೆ. ಸಣ್ಣಪುಟ್ಟ ಕಾಮಗಾರಿ ಹೆಸರಿನಲ್ಲಿ ವಿಳಂಬವಾಗಿದ್ದು ಕಾರ್ಯಕ್ರಮ ಸಂಘಟಕರ ಬೇಸರಕ್ಕೂ ಕಾರಣವಾಗಿತ್ತು.

ಇದೀಗ ಕಾಮಗಾರಿ ಮುಕ್ತಾಯಗೊಂಡಿದ್ದು ನಾಳೆ (ಸೋಮವಾರ) ಉಪವಿಭಾಗಾಧಿಕಾರಿಯವರಿಗೆ ಹಸ್ತಾಂತರಿಸ ಲಾಗುವುದು ಎಂದು ನಿರ್ಮಿತಿ ಕೇಂದ್ರದ ಎಂಜಿನಿಯರ್‌ ಪರಶುರಾಮ ಗಾಳಿ ತಿಳಿಸಿದರು.

ಧ್ವನಿ ನಿರೋಧಕ ಗೋಡೆ, ಅತ್ಯಾಧುನಿಕ ಧ್ವನಿ, ಬೆಳಕಿನ ವ್ಯವಸ್ಥೆ, ಒಳಾಂಗಣ ಅಲಂಕಾರ ಇತ್ಯಾದಿ ನಡೆದಿದೆ. ನಗರದ ಹೃದಯ ಭಾಗದ ಈ ಭವನ ಮತ್ತೆ ತೆರೆಯುತ್ತಿರುವುದಕ್ಕೆ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.

ADVERTISEMENT

ಏಕೆ ವಿಳಂಬ?: ಪರಶುರಾಮ ಅವರು ಹೇಳುವ ಪ್ರಕಾರ, ಕಾಮಗಾರಿ ಎಲ್ಲವೂ ನಿಗದಿತ ಸಮಯಕ್ಕೆ ಮುಗಿದಿದೆ. ಆದರೆ, ಮೂರನೇ ವ್ಯಕ್ತಿಯ ಪರಿಶೀಲನೆ (ಥರ್ಡ್‌ ಪಾರ್ಟಿ ಇನ್‌ಸ್ಪೆಕ್ಷನ್‌) ಬಾಕಿ ಇತ್ತು. ಕಲಬುರ್ಗಿಯ ಎಂಜಿನಿಯರ್‌ ಭರತ್‌ ಭೂಷಣ್‌  ಪರಿಶೀಲಿಸಿ ವರದಿ ನೀಡಿದ್ದಾರೆ. ನಾಳೆ ಭವನವನ್ನು ಸ್ವಚ್ಛಗೊಳಿಸಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಿದ್ದೇವೆ ಎಂದು ಹೇಳಿದರು.

ಟೊಂಕ ಕಟ್ಟಿದ ಸಂಘಟನೆಗಳು: ಸಾಹಿತ್ಯ ಭವನ ಸಿದ್ಧವಾಗುವುದನ್ನೇ ಹಲವು ಸಂಘಟನೆಗಳು ಎದುರು ನೋಡುತ್ತಿವೆ. ಜುಲೈ 20ರಂದು ಜಿಲ್ಲಾಡಳಿತವು ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಜನ್ಮ ವರ್ಷಾಚರಣೆಯ ಅಂಗವಾಗಿ ನಿಮಗಿದೋ ನಮನ ಕಾರ್ಯಕ್ರಮ ಹಮ್ಮಿಕೊಂಡಿದೆ. ಆಗಸ್ಟ್‌ನಲ್ಲಿ ಹೋಟೆಲ್‌ ಮಾಲೀಕರ ಸಂಘ  ಯಕ್ಷಗಾನ ಹಮ್ಮಿಕೊಂಡಿದೆ. ಉಳಿದಂತೆ ಜಿಲ್ಲಾ ಉತ್ಸವ, ತಿರುಳ್ಗನ್ನಡ ಸಾಹಿತ್ಯ ಸಮ್ಮೇಳನ ಇತ್ಯಾದಿ ಕಾರ್ಯಕ್ರಮಗಳ ಸಿದ್ಧತೆಗಳೂ ನಡೆದಿವೆ.

ಸುಧಾರಣೆ ಆಗಬೇಕಿರುವುದು
ಸಾಹಿತ್ಯ ಭವನದ ಕುರಿತು ನಾಗರಿಕರು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

* ಖಾಸಗಿ ಧ್ವನಿವರ್ಧಕ ಅಂಗಡಿಯವರು ಭವನದ ಕೀಲಿ ಇಟ್ಟುಕೊಳ್ಳುವುದು, ಧ್ವನಿವರ್ಧಕ, ವೇದಿಕೆ ಅಲಂಕಾರದ ಗುತ್ತಿಗೆ ವಹಿಸಿಕೊಳ್ಳುವ ಲಾಬಿ ನಿಲ್ಲಬೇಕು ಉಪವಿಭಾಗಾಧಿಕಾರಿ ಇಂಥ ಲಾಭಿಗೆ ಕಡಿವಾಣ ಹಾಕಬೇಕು.
* ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ, ಗ್ರಂಥಾಲಯ ಈ ಭವನಕ್ಕೆ ಸ್ಥಳಾಂತರಗೊಳ್ಳಬೇಕು ಶೌಚಾಲಯ ವ್ಯವಸ್ಥಿತವಾಗಿರಬೇಕು
* ಯಾವುದೇ ಕಾರಣಕ್ಕೂ ಬಾಡಿಗೆ ಹೆಚ್ಚಳ ಮಾಡಬಾರದು ಅವಕಾಶವಿದ್ದರೆ ನಗರಸಭೆಗೆ ಜವಾಬ್ದಾರಿ ವಹಿಸಬೇಕು
* ಸಭಾಭವನಕ್ಕೆ ಕಾಯಂ ವ್ಯವಸ್ಥಾಪಕರು/ ನಿರ್ವಾಹಕರನ್ನು, ಸ್ವಚ್ಛಗೊಳಿಸುವವರನ್ನು ನೇಮಿಸಬೇಕು.
* ಭವನದ ವಸ್ತುಗಳನ್ನು ಕೆಡಿಸಿದವರಿಗೆ, ವಿರೂಪಗೊಳಿಸಿದವರಿಗೆ ದುಬಾರಿ ದಂಡ/ ಶಿಕ್ಷೆ ವಿಧಿಸಬೇಕು. ಇಂಥ ಘಟನೆಗಳಿಗೆ ಸಂಘಟಕರನ್ನೇ ಜವಾಬ್ದಾರರನ್ನಾಗಿಸಬೇಕು
* ಭವನದ ಬಳಿ ಇರುವ ಪಾರ್ಕಿಂಗ್‌ ಸೌಲಭ್ಯವನ್ನು ಪುನರುಜ್ಜೀವನಗೊಳಿಸಬೇಕು.

ನವೀಕರಣ ಕಾಮಗಾರಿ ವಿವರ
₹72 ಲಕ್ಷ ನವೀಕರಣ ಕಾಮಗಾರಿಯ ವೆಚ್ಚ

ಹಸ್ತಾಂತರ ಭವನದ ಕಾಮಗಾರಿ ಸಂಪೂರ್ಣ ಮುಗಿದಿದೆ.  17ರಂದು  ಹಸ್ತಾಂತರಿ ಸುತ್ತೇವೆ ಎಂದು ಪರಶುರಾಮ ಹೇಳಿದರು.

300 ಸಾಹಿತ್ಯ ಭವನದ ಆಸನಗಳ ಸಾಮರ್ಥ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.