ಕೊಪ್ಪಳ: ಹಿಂದುಳಿದವರು, ದುರ್ಬಲರು ಮಾತ್ರ ದೌರ್ಜನ್ಯಕ್ಕೆ ಒಳಗಾಗುತ್ತಾರೆ ಹೊರತು ಬಲಿಷ್ಠರಲ್ಲ ಎಂದು ಹೊಸದುರ್ಗ ತಾಲ್ಲೂಕಿನ ಮಧುರೆಯ ಬ್ರಹ್ಮವಿದ್ಯಾನಗರ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೇಳಿದರು.
ನಗರದಲ್ಲಿ ಶನಿವಾರ ಡಿ.ವೈ.ಉಪ್ಪಾರ್ ಶೈಕ್ಷಣಿಕ ಮತ್ತು ಸಾಮಾಜಿಕ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ರಾಜ್ಯದ ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ಉತ್ತಮ ವ್ಯಕ್ತಿತ್ವ ನಿರ್ಮಾಣ, ನಾಯಕತ್ವ ಗುಣ ಅಳವಡಿಕೆಯ ತರಬೇತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ, ಸಿದ್ಧತೆ ನಡೆಸಲು ಪ್ರೇರೆಪಣೆ ಹಾಗೂ ಯುವ ಜನತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಸಿದ್ಧತೆ ತರಬೇತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ದೇವರ ಹರಕೆಗೆ ಎಂದು ಯಾರು ಹುಲಿ, ಸಿಂಹದಂತಹ ಬಲಿಷ್ಠ ಪ್ರಾಣಿಗಳನ್ನು ಬಲಿ ಕೊಡುವುದಿಲ್ಲ. ಆದರೆ, ಮೇಕೆ, ಕುರಿ ಹಾಗೂ ಕೋಳಿಗಳಂತಹ ಸಾಕು ಪ್ರಾಣಿಗಳನ್ನು ಮಾತ್ರ ದೇವರಿಗೆ ಹರಕೆ ರೂಪದಲ್ಲಿ ಬಲಿ ಕೊಡುತ್ತೇವೆ. ಅದೇ ರೀತಿಯಲ್ಲಿ ಸಮಾಜದಲ್ಲಿರುವ ಬಲಿಷ್ಠರನ್ನು ಯಾರು ಮುಟ್ಟುವುದಿಲ್ಲ. ದಲಿತರು, ಮಹಿಳೆಯರಂತಹ ಅಶಕ್ತರು, ದುರ್ಬಲರು, ಹಿಂದುಳಿದವರ ಮೇಲೆ ದಬ್ಬಾಳಿಕೆ, ದೌರ್ಜನ್ಯ ಮಾಡಲಾಗುತ್ತದೆ. ಅದಕ್ಕಾಗಿ ಸಮಾಜದ ಎಲ್ಲರಲ್ಲಿಯೂ ಬುದ್ಧಿಶಕ್ತಿ ಇದೆ. ಎಲ್ಲ ರೀತಿಯ ಶಕ್ತಿಯನ್ನು ಪಡೆದು ಸಾಧನೆ ಮಾಡಬೇಕು. ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದರು.
ಸಮಾಜದಲ್ಲಿ ಯಾರು ಕೀಳಲ್ಲ. ಅಶಕ್ತರು, ಹಿಂದುಳಿದವರು ಎನ್ನುವ ಕೀಳರಿಮೆ ಬೇಡ. ಭಗವಂತ ಎಲ್ಲರಲ್ಲಿಯೂ ಇದ್ದಾನೆ. ನಾವು ಸಾಕ್ಷಾತ್ ದೇವರ ಸ್ವರೂಪರು. ಎಲ್ಲರೂ ಶ್ರಮವಹಿಸಬೇಕು. ದೊಡ್ಡ ಸಾಧನೆ ಮಾಡಿ, ಉನ್ನತ ಹುದ್ದೆ ಅಲಂಕರಿಸಬೇಕು. ಇದರಿಂದ ಸಮಾಜಕ್ಕೆ ಹೆಮ್ಮೆ ತಂದಂತಾಗುತ್ತದೆ ಎಂದರು.
ಹರೆಯದ ವಯಸ್ಸು ಬಹಳ ಸೂಕ್ಷ್ಮವಾದದ್ದು, ಈ ವಯಸ್ಸಿನಲ್ಲಿ ಎಚ್ಚರಿಕೆಯಿಂದ ಒಳ್ಳೆಯ ರೀತಿಯಲ್ಲಿ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.
ಚಿತ್ರದುರ್ಗದ ಮುರುಘಾ ಸ್ವಾಮೀಜಿ ನೇತೃತ್ವದಲ್ಲಿ 200 ಪ್ರಗತಿಪರ ಮಠಾಧೀಶರನ್ನು ಒಳಗೊಂಡ ಟ್ರಸ್ಟ್ ಮಾಡಿ, ಅದರ ಮೂಲಕ ಹಿಂದುಳಿದವರನ್ನು ಮೇಲೆತ್ತುವ ಕೆಲಸ ಆಗಬೇಕಿದೆ ಎಂದು ಸ್ವಾಮೀಜಿ ಸಲಹೆ ನೀಡಿದರು. ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎಚ್.ಬಿಲ್ಲಪ್ಪನವರ ಕಾರ್ಯಕ್ರಮ ಉದ್ಘಾಟಿಸಿದರು.
ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪಿ.ಶಿವಶಂಕರ, ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಜಿಲ್ಲಾ ಭಗೀರಥ ಉಪ್ಪಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನೇಮಣ್ಣ ಮೇಲ್ಸಕ್ರಿ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಲಕ್ಷ್ಮಣ ಸಿದ್ದಪ್ಪ ಬಬಲಿ, ಬಳ್ಳಾರಿ ಕಾರಾಗೃಹಗಳ ಪೊಲೀಸ್ ಸೂಪರಿಟೆಂಡೆಂಟ್ ಬಾಳಪ್ಪ ಹಂದಿಗುಂದ, ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಯಂಕಣ್ಣ ಕಟ್ಟಿಮನಿ, ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಎ.ವಿ ಲೋಕೇಶಪ್ಪ, ಶಂಕರ ಬಿಸ್ನಹಳ್ಳಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.