ADVERTISEMENT

ನಗರಸಭೆ: ಎಸ್ಎಫ್‌ಸಿಗೆ ₹29 ಕೋಟಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 6:15 IST
Last Updated 8 ಜುಲೈ 2017, 6:15 IST

ಗಂಗಾವತಿ: ‘ನಗರಸಭೆಗೆ 2017–18ನೇ ಸಾಲಿಗೆ ವಿಶೇಷ ಅನುದಾನ ಯೋಜನೆಯಲ್ಲಿ (ಎಸ್ಎಫ್‌ಸಿ) ₹29 ಕೋಟಿ ಲಭಿಸಿದ್ದು, ಕ್ರಿಯಾಯೋಜನೆ ತಯಾರಿಸಿ ಅನುಮೋದನೆಗೆ ಸಲ್ಲಿಸಬೇಕಿದೆ’ ಎಂದು ನಗರಸಭೆಯ ಕಾರ್ಯಪಾಲಕ ಎಂಜಿನಿಯರ್ ಆರ್.ಆರ್. ಪಾಟೀಲ ಹೇಳಿದರು.

ಹಂಗಾಮಿ ಅಧ್ಯಕ್ಷ ಕಮಲಿಬಾಬಾ ಅವರ ನೇತೃತ್ವದಲ್ಲಿ ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದರು. ಮಾರ್ಚ್‌ ತಿಂಗಳಲ್ಲಿ ನಡೆದ ಸಾಮಾನ್ಯಸಭೆ ನಡವಳಿಗಳನ್ನು ಅನುಮೋದಿಸಲಾಯಿತು. ನಗರಸಭೆಯ ₹5 ಲಕ್ಷ ಅನುದಾನದಲ್ಲಿ ಅಗತ್ಯ ಇರುವ ವಾರ್ಡ್‌ಗಳಲ್ಲಿ ಬೋರ್‌ವೆಲ್ ಕೊರೆದು ಕುಡಿಯುವ ನೀರು ಒದಗಿಸಲು ನಿರ್ಣಯ ಕೈಗೊಳ್ಳಲಾಯಿತು.

‘ಸತತ ಬರಗಾಲವಿದ್ದು, ಯಾವ ಕಾರಣಕ್ಕೂ ಈ ವರ್ಷ ಕುಡಿಯುವ ನೀರಿನ ಶುಲ್ಕ ಪರಿಷ್ಕರಿಸಬಾರದು’ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಮನೋಹರಸ್ವಾಮಿ ಸೂಚನೆ
ನೀಡಿದರು. ವಿವಿಧ ವಿಷಯಗಳನ್ನು ಸದಸ್ಯ ಹುಸೇನಪ್ಪ ಹಂಚಿನಾಳ ಗಮನ ಸೆಳೆದರು.

ADVERTISEMENT

ನಗರದ ಪುಟ್ಟರಾಜ ಸಂಗೀತ ಶಾಲೆಗೆ ಸರ್ವೆ ನಂಬರ್ 53ರಲ್ಲಿ ನಿವೇಶನ, ಸರ್ವೆ ನಂಬರ್ 74ರಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡುವುದು ಸೇರಿದಂತೆ ಇನ್ನಿತರ ವಿಚಯಗಳ ಬಗ್ಗೆ ಹಿರಿಯ ಸದಸ್ಯ ಶಾಮೀದ ಮನಿಯಾರ ಸಭೆಯಲ್ಲಿ ಪ್ರಸ್ತಾಪಿಸಿದರು.

ನಗರಸಭೆಯ ಆಡಳಿತ ಮಂಡಳಿ ಕರೆದಿದ್ದ ಸಾಮಾನ್ಯಸಭೆಗೆ ಕಾಂಗ್ರೆಸ್, ಬಿಜೆಪಿ ಎಲ್ಲ ಸದಸ್ಯರು ಗೈರಾಗಿದ್ದರು. ಶಾಸಕ ಇಕ್ಬಾಲ್ ಅನ್ಸಾರಿ ಅವರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ರಾಘವೇಂದ್ರ ಶೆಟ್ಟಿ, ಕೆ.ವೆಂಕಟೇಶ ಹಾಗೂ ರಾಮಚಂದ್ರ ಗೈರಾಗಿದ್ದರು.

ಅಧ್ಯಕ್ಷೆ ಸಣ್ಣ ಹುಲಿಗೆಮ್ಮ ಅವರ ಸದಸ್ಯತ್ವ ರದ್ದಾದ ಬಳಿಕ ನಡೆದ ಮೊದಲ ಸಭೆಯಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ಬೆಂಬಲಿತ 11 ಸದಸ್ಯರಿದ್ದ ಕಾರಣ ಕೋರಂ ಸಮಸ್ಯೆ ಉದ್ಭವಿಸಲಿಲ್ಲ. ಪೌರಾಯುಕ್ತ ಖಾಜಾಮೋಹಿನುದ್ದೀನ್ ಸೇರಿದಂತೆ ವಿವಿಧ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.