ಕೊಪ್ಪಳ: ಜಿಲ್ಲೆಯಲ್ಲಿ ವಿವಿಧ ವಸತಿ ಯೋಜನೆಗಳ ಅಡಿ ನಿರ್ಮಿತಿ ಕೇಂದ್ರವು ನಡೆಸಿದ ಕಾಮಗಾರಿಗಳ ದಾಖಲಾತಿ ಪರಿಶೀಲನೆ ಶುಕ್ರವಾರ ನಡೆಯಿತು.
ಬೆಂಗಳೂರಿನ ರಾಜೀವ ಗಾಂಧಿ ವಸತಿ ನಿಗಮದ ಪ್ರಧಾನ ವ್ಯವಸ್ಥಾಪಕ ಎಂ.ಗಂಗಾಧರ ಸ್ವಾಮಿ, ಅಧಿಕಾರಿಗಳಾದ ರವಿಕುಮಾರ್, ಪ್ರಕಾಶ್, ದತ್ತಾತ್ರೇಯ ಶಿಂಧೆ ಅವರು ದಾಖಲೆಗಳ ಪರಿಶೀಲನೆ ನಡೆಸಿದರು.
ನಿರ್ಮಿತಿ ಕೇಂದ್ರಕ್ಕೆ ವಹಿಸಲಾದ ವಸತಿ ಯೋಜನೆ ಕಾಮಗಾರಿಗಳು ಅವುಗಳ ಪ್ರಗತಿ, ಕಾಮಗಾರಿ ಗುಣಮಟ್ಟ, ಖರ್ಚಾದ ಹಣ ಇತ್ಯಾದಿ ಬಗ್ಗೆ ಅಧಿಕಾರಿಗಳ ತಂಡ ದಾಖಲೆ ಪರಿಶೀಲಿಸಿದೆ. ನಾಳೆ (ಶನಿವಾರ) ಆಯಾ ವಸತಿ ಕಾಮಗಾರಿಗಳು ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದೆ ಎಂದು ಕೇಂದ್ರದ ಯೋಜನಾ ವ್ಯವಸ್ಥಾಪಕ ಶಶಿಧರ ಹೇಳಿದರು.
ರಾಜ್ಯಮಟ್ಟದಲ್ಲಿ ನಿಗಮದಿಂದ ಪರಿಶೀಲನೆ ನಡೆಯುತ್ತಿದೆ. ಇಂದು ಕೊಪ್ಪಳ ಮತ್ತು ಯಾದಗಿರಿಯಲ್ಲಿ ಪರಿಶೀಲನೆ ನಡೆದಿದೆ. ಎಲ್ಲ ಜಿಲ್ಲೆಗಳಲ್ಲೂ ಪರಿಶೀಲನೆ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ದಾಖಲೆ ಪರಿಶೀಲನೆ ಬಗ್ಗೆ ಮಾಹಿತಿಗಾಗಿ ನಿರ್ಮಿತಿ ಕೇಂದ್ರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರನ್ನು ಸಂಪರ್ಕಿಸಿದರೂ ಕರೆ ಸ್ವೀಕರಿಸಲಿಲ್ಲ.
ನಿರ್ಮಿತಿ ಕೇಂದ್ರದ ಮೇಲೆ ಅವ್ಯವಹಾರದ ಆರೋಪ ಹೊರಿಸಿ ಭೀಮ ಬಸವ ವಿಕಾಸ ಬಳಗವು ನಿಗಮದ ಆಯುಕ್ತ ಮನೀಶ್ ಮೌದ್ಗಿಲ್ ಅವರಿಗೆ 2016ರ ಡಿಸೆಂಬರ್ನಲ್ಲಿ ದೂರು ಸಲ್ಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.