ಕೊಪ್ಪಳ: ‘ರೈತರು ಹಣ್ಣುಗಳನ್ನು ನೈಸರ್ಗಿಕವಾಗಿ ಮಾಗಿಸಿ ಮಾರಾಟ ಮಾಡಬೇಕು’ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ನಗರದ ತೋಟಗಾರಿಕೆ ಇಲಾಖೆಯ ಕಚೇರಿ ಆವರಣದಲ್ಲಿ ಗುರುವಾರ ಮಾವು ಪ್ರದರ್ಶನ ಮತ್ತು ಮಾರಾಟ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ರಾಸಾಯನಿಕವಾಗಿ ಮಾಗಿಸಿದ ಹಣ್ಣು ತಿನ್ನುವುದು ಆರೋಗ್ಯ ಹಾನಿಕರ. ಆದ್ದರಿಂದ ಹಣ್ಣುಗಳನ್ನು ನೈಸರ್ಗಿಕವಾಗಿ ಮಾಗಿಸಬೇಕು. ಗುಣಮಟ್ಟದ ಆಹಾರದಿಂದ ಆರೋಗ್ಯವಾಗಿ ಇರುತ್ತೇವೆ. ಆಗ ನಮ್ಮ ವಿಚಾರಗಳೂ ಆರೋಗ್ಯಕರವಾಗಿ ಇರುತ್ತವೆ’ ಎಂದರು.
‘ರೈತರು ರಫ್ತುದಾರರನ್ನು ಪರಿಚಯಿಸಿಕೊಂಡು ಅಧಿಕ ಆದಾಯ ಪಡೆಯಬೇಕು. ರೈತ ಸಮೃದ್ಧಿಯಾದರೆ ದೇಶ ಸಮೃದ್ಧಿ ಆದಂತೆ’ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ‘ನಾನು ಕೂಡಾ ಮಾವು ಬೆಳೆಗಾರ.
ಬೇರೆ ಬೇರೆ ದೇಶಗಳಿಗೆ ಮಾವು ಮಾರಾಟ ಮಾಡುತ್ತೇನೆ. ಸಾವಯವ ಪದ್ಧತಿಯಿಂದ ಬೆಳೆದ ಗಿಡದಲ್ಲಿ 500ರಿಂದ 600 ಕಾಯಿಗಳು ಬಿಡುತ್ತವೆ. ಪ್ರತಿ ಎಕರೆಗೆ ₹ 70–80 ಸಾವಿರ ಆದಾಯ ಬರುತ್ತದೆ’ ಎಂದರು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ ಪ್ರಾಸ್ತಾವಿಕವಾಗಿ ಮಾತನಾಡಿ, ರೈತರಿಗೆ ಸಾಮಾನ್ಯ ಮಾರುಕಟ್ಟೆಯಲ್ಲಿ ಸಿಗುವ ಬೆಲೆಗಿಂತಲೂ ಹೆಚ್ಚಿನ ಬೆಲೆಗೆ ಹಣ್ಣುಗಳು ಮಾರಾಟವಾಗಿವೆ. ಗ್ರಾಹಕರಿಗೂ ಯೋಗ್ಯ ಬೆಲೆಗೆ ಸಿಕ್ಕಿವೆ.
ಮಧ್ಯವರ್ತಿಗಳ ಹಾವಳಿಯಿಂದ ರೈತರು ಮುಕ್ತರಾಗಿದ್ದಾರೆ. ನೈಸರ್ಗಿಕವಾಗಿ ಮಾಗಿಸಿದ ಹಣ್ಣಿನ ಸೇವನೆಯಿಂದಾಗುವ ಲಾಭಗಳ ಅರಿವೂ ಮೂಡಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಬೆಳೆಯುವ 120ಕ್ಕೂ ಹೆಚ್ಚಿನ ತಳಿಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕೆ ಇಡಲಾಗಿದೆ ಎಂದರು. ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅಧ್ಯಕ್ಷತೆ ವಹಿಸಿದ್ದರು. ವಿಷಯ ತಜ್ಞ ವಾಮನಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ನಜೀರ್ ಅಹ್ಮದ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.