ಕೊಪ್ಪಳ: ಭೂಮಿಗೆ ಮನುಷ್ಯನ ಅವಶ್ಯಕತೆ ಇಲ್ಲ. ನೈಸರ್ಗಿಕವಾಗಿ ಬಿಟ್ಟಾಗ ಸಮೃದ್ಧಿಯಾಗುತ್ತದೆ. ಆಗ ಮನುಷ್ಯ ತನಗೆ ಬೇಕಾದದ್ದನ್ನು ಪಡೆಯಬಹುದು ಎಂದು ಬಿಕನಳ್ಳಿ ನೈಸರ್ಗಿಕ ಕೃಷಿಕ ಜಯಂತ್ ಹೇಳಿದರು.
ನಗರದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಸೋಮವಾರ ರಾಯಚೂರು ಕೃಷಿ ವಿಶ್ವವಿದ್ಯಾಲಯ, ಕೃಷಿ ಇಲಾಖೆ ಆಶ್ರಯದಲ್ಲಿ ಪ್ರಗತಿಪರ ರೈತರ ಆವಿಷ್ಕಾರಗಳನ್ನು ರೈತರಿಗೆ ತಲುಪಿಸುವ ಯೋಜನೆ ಅಡಿ ನಡೆದ ‘ಪರಿಸರ ಸ್ನೇಹಿ ಕೃಷಿ’ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಮಸಾರಿ ಹೊಲಗಳಲ್ಲಿ ವರ್ಷಕ್ಕೆ ನಾಲ್ಕು ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಆದರೆ ಈಗ ಅವು ಕಾಣದಾಗಿವೆ. ಆಧುನಿಕ ಕೃಷಿ ಪದ್ಧತಿಯಿಂದ ರೈತನ ಪ್ರಗತಿ ಸಾಧ್ಯವಾಗುತ್ತಿಲ್ಲ. ರೈತರು ಹೊರಗಿನ ಬಣ್ಣಕ್ಕೆ ಮಾರು ಹೋಗುತ್ತಿದ್ದಾರೆ. ಬೀಜ, ಗೊಬ್ಬರ ಮಾರುಕಟ್ಟೆಯಲ್ಲಿ ಇದನ್ನು ಕಾಣಬಹುದಾಗಿದೆ. ಇದರಿಂದ ರೈತನ ಸ್ಥಿತಿ ಇಳಿಜಾರಿನಿಂದ ತಗ್ಗಿಗೆ ಕುಸಿದಂತಾಗಿದೆ.
ಸರ್ಕಾರ ಉಚಿತವಾಗಿ ಧಾನ್ಯ ನೀಡುತ್ತಿರುವುದೂ ಇಂದು ಕೃಷಿಕರು ಬೇಸಾಯದಿಂದ ದೂರ ಉಳಿಯಲು ಕಾರಣವಾಗಿದೆ. ರೈತರು ನೈಸರ್ಗಿಕ ಕೃಷಿಗೆ ಒಗ್ಗಿಕೊಳ್ಳಬೇಕಿದೆ.ನೈಸರ್ಗಿಕ ಕೃಷಿಯಲ್ಲಿ ರೈತರು ಹಣದ ರೂಪದಲ್ಲಿ ದುಡಿಮೆ ಮಾಡುವುದು ಸೂಕ್ತವಲ್ಲ ಎಂದರು.
ಕೃಷಿ ವಿಸ್ತರಣಾ ಮುಂದಾಳು ಎಂ.ಬಿ.ಪಾಟೀಲ ಮಾತನಾಡಿ, ಯುವಜನತೆ ನಗರದೆಡೆಗೆ ಮುಖ ಮಾಡಿ ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದರು. ಕೇಂದ್ರದ ವೈಜ್ಞಾನಿಕ ಅಧಿಕಾರಿ ಡಾ.ಚಿತ್ತಾಪುರ, ಸರ್ವೋದಯ ಸಂಸ್ಥೆ ಅಧ್ಯಕ್ಷ ನಾಗರಾಜ ದೇಸಾಯಿ, ಶಂಕ್ರಪ್ಪ, ಮಹಿಳಾ ಪ್ರತಿನಿಧಿ ದೀಪಾ, ಕಾರ್ಯಕ್ರಮ ಸಂಯೋಜಕಿ ಡಾ.ಕವಿತಾ, ಶ್ವೇತಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.