ಕೊಪ್ಪಳ: ಬಣ್ಣ ಬಣ್ಣದ ಬಟ್ಟೆ ತೊಟ್ಟು ಸಂಭ್ರಮಿಸಿದ ಚಿಣ್ಣರು. ಧ್ವನಿವರ್ಧಕದ ಹಾಡಿಗೆ ಹೆಜ್ಜೆ ಹಾಕಿದರು. ದಿನವಿಡೀ ಸಂಭ್ರಮದಲ್ಲಿ ಕಳೆದರು.
ಇದು ನಗರದ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೆಂಗಳೂರಿನ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಬಾಲಮಂದಿರದ ಆಶ್ರಯದಲ್ಲಿ ನಡೆದ ಮಕ್ಕಳ ದಿನಾಚರಣೆಯ ನೋಟ.
ಬಾಲಮಂದಿರದ ಮಕ್ಕಳು ಯಾರೂ ಅನಾಥರಲ್ಲ. ನಿಮ್ಮ ಕಾಳಜಿಗೆ ನಾವಿದ್ದೇವೆ ಎಂಬ ಭರವಸೆಯನ್ನು ಕಾರ್ಯಕ್ರಮ ಮೂಡಿಸಿತು. ಮಕ್ಕಳ ಸಂರಕ್ಷಣೆ ಕುರಿತ ಚೈಲ್ಡ್ಲೈನ್ ದೋಸ್ತಿ ಬ್ಯಾಂಡನ್ನು ಅಧಿಕಾರಿಗಳು ಪರಸ್ಪರ ಕಟ್ಟಿಕೊಂಡರು. ಮಕ್ಕಳ ರಕ್ಷಣೆಗಾಗಿ ಇರುವ ಸಹಾಯವಾಣಿ - 1098 ಬಗ್ಗೆ ಮಾಹಿತಿ ನೀಡಲಾಯಿತು. ಸಭಾಂಗಣದ ಹೊರಗಿದ್ದ ಫಲಕದಲ್ಲಿ ಮಕ್ಕಳ ರಕ್ಷಣೆಗೆ ನಾವು ಬದ್ಧ ಎಂಬ ಫಲಕದ ಮೇಲೆ ಎಲ್ಲರೂ ಸಹಿ ಮಾಡಿದರು.
ಪರಿತ್ಯಕ್ತ ಮಕ್ಕಳ ರಕ್ಷಣೆಗೆ ರೂಪಿಸಲಾದ ಮಮತೆಯ ತೊಟ್ಟಿಲಿಗೆ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಚಾಲನೆ ನೀಡಿ 'ಮಕ್ಕಳನ್ನು ಎಲ್ಲೆಂದರಲ್ಲಿ ಎಸೆಯಬೇಡಿ ಬಾಲ ಮಂದಿರಗಳಲ್ಲಿರುವ ಮಮತೆಯ ತೊಟ್ಟಿಲಿಗೆ ಹಾಕಿ. ಈ ದಿಸೆಯಲ್ಲಿ ಅಧಿಕಾರಿಗಳು ಒಳ್ಳೆಯ ಮನೋಭಾವ ಬೆಳೆಸಿಕೊಳ್ಳಬೇಕು' ಎಂದು ಕೋರಿದರು.
ಯುನಿಸೆಫ್ ಜಿಲ್ಲಾ ಸಂಯೋಜಕ ಹರೀಶ್ ಜೋಗಿ ಮಾತನಾಡಿ, 'ದತ್ತು ಮಕ್ಕಳು ಬೇಕು ಎಂದು ಕಾಯುವ ಜನರು ಇದ್ದಾರೆ. ಒಟ್ಟಿನಲ್ಲಿ ಮಕ್ಕಳನ್ನು ಸಂರಕ್ಷಿಸುವುದು ನಮ್ಮ ಉದ್ದೇಶ' ಎಂದರು.
ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ಅಧ್ಯಕ್ಷೆ ನಿಲೋಫರ್ ಎಸ್.ರಾಂಪುರಿ, ಬಾಲ ನ್ಯಾಯ ಮಂಡಳಿಯ ಸದಸ್ಯ ಶೇಖರಗೌಡ ರಾಮತ್ನಾಳ, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯೆ ಸರೋಜಾ ಬಾಕಳೆ, ಬಾಲ ನ್ಯಾಯ ಮಂಡಳಿ ಸದಸ್ಯೆ ಉಮಾ ಹಿರೇಮಠ, ಮುಖಂಡರಾದ ಮಹಾಲಿಂಗಪ್ಪ ದೋಟಿಹಾಳ, ಹನುಮಂತಪ್ಪ ಬಿಜಕಲ್, ಶಾಂತಮ್ಮ ಕಟ್ಟಿಮನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.