ADVERTISEMENT

ಪುಟ್ಟ ಜಮೀನಿನಲ್ಲಿ ಸಮೃದ್ಧ ಫಸಲು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 7:12 IST
Last Updated 11 ಸೆಪ್ಟೆಂಬರ್ 2017, 7:12 IST
ಕೊಪ್ಪಳ ತಾಲ್ಲೂಕು ಬೆಟಗೇರಿಯ ರೈತ ಮುದಿಯಪ್ಪ ತಳವಾರ ಅವರ ಒಂದೇ ಹೊಲದಲ್ಲಿ ಬೆಳೆದ ಸಜ್ಜೆ, ಎಳ್ಳು, ನವಣೆ, ರಾಗಿ ಬೆಳೆ
ಕೊಪ್ಪಳ ತಾಲ್ಲೂಕು ಬೆಟಗೇರಿಯ ರೈತ ಮುದಿಯಪ್ಪ ತಳವಾರ ಅವರ ಒಂದೇ ಹೊಲದಲ್ಲಿ ಬೆಳೆದ ಸಜ್ಜೆ, ಎಳ್ಳು, ನವಣೆ, ರಾಗಿ ಬೆಳೆ   

ಕೊಪ್ಪಳ: ಪುಟ್ಟ ಜಮೀನಿನಲ್ಲಿ ಬಹು ವಿಧದ ಬೆಳೆ ಮಾಡಿ ಯಶಸ್ವಿಯಾಗಿದ್ದಾರೆ ಬೆಟಗೇರಿಯ ರೈತ ಮುದಿಯಪ್ಪ ತಳವಾರ. ಬೆಟಗೇರಿಯಿಂದ ಮತ್ತೂರಿಗೆ ಹೋಗುವ ದಾರಿಯಲ್ಲಿ ಸ್ವಲ್ಪ ಬಲಕ್ಕೆ ಸರಿದರೆ ತಳವಾರ ಅವರ ಸಮಗ್ರ ಕೃಷಿ ಕಣ್ಣಿಗೆ ಬೀಳುತ್ತದೆ. ಅಂದಹಾಗೆ ಇದು ಬರೀ ಮಳೆಯನ್ನೇ ನಂಬಿ ಮಾಡಿದ ಕೃಷಿ. ಈ ಬಾರಿ ಮಳೆಯೂ ಅವರ ಪಾಲಿಗೆ ಒಲಿದಿದೆ.

ತಳವಾರ ಅವರಿಗಿರುವುದು 2 ಎಕರೆ ಸ್ವಂತ ಜಮೀನು. ಸುಮಾರು 18 ಎಕರೆ ಜಮೀನನ್ನು ವೆಂಕಟೇಶ ಗುಡಿಗೇರ ಅವರಿಂದ ಒಪ್ಪಂದದ ಆಧಾರದಲ್ಲಿ ಪಡೆದರು. ಇವರ ನಡುವೆ ಶೇ 50;50ರ ಒಪ್ಪಂದ. ಬೇಸಾಯದ ಹೂಡಿಕೆ ಮತ್ತು ಇಳುವರಿಯಲ್ಲಿ ಎಲ್ಲವೂ ಸಮಪಾಲು.

ತಳವಾರ ಅವರು ಭೂಮಿಯಲ್ಲೇ ಶ್ರಮ ಪಡುತ್ತಾರೆ. ವೆಂಕಟೇಶ ಅವರು ದೂರದ ಊರುಗಳಿಂದ ಬೇಕಾದ ಬಿತ್ತನೆ ಬೀಜ, ಕೃಷಿ ಪರಿಕರಗಳನ್ನು ತರುತ್ತಾರೆ. ಈ ಬಾರಿ ಬಿತ್ತನೆ ಬೀಜವನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯದಿಂದ ತಂದಿದ್ದಾರೆ. ಅಲ್ಪ ಪ್ರಮಾಣದಲ್ಲಿ ತಂದದ್ದಾದರೂ ಫಸಲು ಮಾತ್ರ ಅದ್ಭುತವಾಗಿ ಬಂದಿದೆ ಎಂದರು ತಳವಾರ.
ಈ ವರ್ಷ ಮುಂಗಾರು ಹೊಸ ಆಶಯ ಮೂಡಿಸಿದೆ. ಇದೇ ರೀತಿ ಮಳೆ ಆದರೆ ಪ್ರತಿ ಎಕರೆಗೆ 8ರಿಂದ 10 ಕ್ವಿಂಟಲ್‌ ಇಳುವರಿ ಪಡೆಯಬಹುದು ಎಂದರು ಅವರು.

ADVERTISEMENT

ಯಾವ ಯಾವ ಬೆಳೆಗಳು: ಸುಮಾರು 5 ಎಕರೆಯಷ್ಡು ಪ್ರದೇಶದಲ್ಲಿ ರಾಗಿ, ನವಣೆ ನಡುವೆ ಅಕ್ಕಡಿ ಬೆಳೆಯಾಗಿ ತೊಗರಿ ಬಿತ್ತಿದ್ದಾರೆ. ಬದುಗಳಲ್ಲಿ ಸಜ್ಜೆ ಬೆಳೆದಿದ್ದಾರೆ. ಉಳಿದ ಜಮೀನಿನಲ್ಲಿ ಮೆಕ್ಕೆಜೋಳ ಸಮೃದ್ಧವಾಗಿ ಬೆಳೆದಿದೆ.

ಮಿತವೆಚ್ಚ, ಸಮೃದ್ಧ ಫಸಲು: ಹೆಚ್ಚು ಸಾಲ ಮಾಡಿಲ್ಲ. ಕೇವಲ ಬೀಜ, ಗೊಬ್ಬರ ಖರೀದಿಗೆ ಒಟ್ಟು ರೂ 1 ಲಕ್ಷದಷ್ಟು ಸಾಲ ಇದೆ. ಕುರಿಹಿಂಡನ್ನು ಜಮೀನಿನಲ್ಲಿ ನಿಲ್ಲಿಸಿದ್ದೇನೆ. ಅವುಗಳ ಹಿಕ್ಕೆಯೇ ಗೊಬ್ಬರ, ಕಾಲಕಾಲಕ್ಕೆ ಕಳೆ ತೆಗೆದಿದ್ದೇನೆ. ಸುಧಾರಿತ ತಳಿ ಆದ್ದರಿಂದ ಕೀಟನಾಶಕದ ಖರ್ಚು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಉತ್ತಮ ಇಳುವರಿ ಬರುವ ನಿರೀಕ್ಷೆ ಇದೆ ಎಂದರು ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.