ಯಲಬುರ್ಗಾ: ಬಾಕಿ ವೇತನ ಪಾವತಿಸುವುದು, ದಿನಗೂಲಿ ನೌಕರರನ್ನು ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ತಾಲ್ಲೂಕು ಘಟಕದ ಸದಸ್ಯರು ಮಂಗಳವಾರ ಪಟ್ಟಣ ಪಂಚಾಯತಿ ಕಚೇರಿ ಎದುರು ಧರಣಿ ನಡೆಸಿದರು.
ಸಂಘದ ಅಧ್ಯಕ್ಷ ಬಸವಲಿಂಗಪ್ಪ ಭಾಸ್ಕರ ಮಾತನಾಡಿ ‘ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಗುತ್ತಿಗೆ ಸಿಬ್ಬಂದಿ ವೇತನ ತ್ವರಿತವಾಗಿ ನೀಡುವಂತೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಈವರೆಗೂ ಕಾರ್ಯಗತವಾಗಿಲ್ಲ. ಸಕಾಲದಲ್ಲಿ ವೇತನ ನೀಡದ ಕಾರಣ ಕುಟುಂಬ ನಿರ್ವಹಣೆಗೆ ತೊಂದರೆಯಾಗಿದೆ. ಒಂದು ತಿಂಗಳ ವೇತನ ಹಿಡಿದಿಡುವ ಮೂಲಕ ನೌಕರರ ಪರಿಶ್ರಮಕ್ಕೆ ಹಾಗೂ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ.
ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಇತರೆ ದೈನಂದಿನ ಖರ್ಚು ವೆಚ್ಚ ನಿಭಾಯಿಸಲು ಸಾಧ್ಯವಾಗದೇ ಸಾಲ ಮಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ’ ಎಂದರು.ಸಂಘದ ಮುಖಂಡರಾದ ಶಿವಕುಮಾರ ಸರ್ಗಣಾಚಾರ ಹಾಗೂ ಯಂಕಣ್ಣ ಜೋಷಿ ಮಾತನಾಡಿದರು. ಐ.ಪಿ.ಡಿ ಸಾಲಪ್ಪನವರ ವರದಿ ಅನ್ವಯ ಸರ್ಕಾರ ಪೌರ ನೌಕರರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡದೇ ನಿರ್ಲಕ್ಷ್ಯ ವಹಿಸಿದ್ದು ಕಾರ್ಮಿಕರಿಗೆ ಮಾಡಿದ ದ್ರೋಹ ಮಾಡುತ್ತಿರುವುದು ಸರಿಯಲ್ಲ, ಕೂಡಲೇ ಸಾರಪ್ಪನವರ ವರದಿ ಅನುಷ್ಠಾನಗೊಳಿಸಬೇಕು. ದಿನಗೂಲಿ ನೌಕರರನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
ಪಟ್ಟಣ ಪಂಚಾಯತಿ ಅಧ್ಯಕ್ಷೆ ಜಯಶ್ರೀ ಅರಕೇರಿ ಪ್ರತಿಭಟನಾಕಾರಿಂದ ಮನವಿ ಸ್ವೀಕರಿಸಿ ಮಾತನಾಡಿದರು. ಪೌರ ನೌಕರ ರಮೇಶ ಬೇಲೇರಿ, ಸುಭಾಶ ಭಾವಿಮನಿ, ನಾರಾಯಣ ಗಂಗಾಖೇಡ, ರವಿ ತಾಳಿಕೋಟಿ, ಜಗದೀಶ ಚಲವಾದಿ, ಬಸವರಾಜ, ಬಸವಲಿಂಗಪ್ಪ ಗಡಾದ, ಯಲವ್ವ ಛಲವಾದಿ, ಶಿವವ್ವ, ನಾಗವ್ವ, ನೀಲವ್ವ ಚಲವಾದಿ, ಮರಬಸಪ್ಪ, ಶಾರವ್ವ, ಬಸವರಾಜ, ಯಲ್ಲಪ್ಪ ಚಲವಾದಿ, ರೇಣುಕಪ್ಪ ಕಮ್ಮಾರ, ಸೀಮಣ್ಣ ಬನ್ನಿಮರದ, ಯಲ್ಲಪ್ಪ ಸೂಡಿ,ರೇಣುಕಪ್ಪ ಹರಿಜನ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.