ಗಂಗಾವತಿ: ತಾಲ್ಲೂಕಿನ ವೆಂಕಟಗಿರಿ ಗ್ರಾಮದ ಮೂಲಕ ಅನಧಿಕೃತವಾಗಿ ಅಧಿಕ ಭಾರದ ಲಾರಿಗಳು ಮೊರಂ ಸಾಗಿಸುತ್ತಿರುವುದರಿಂದ ಗ್ರಾಮದ ರಸ್ತೆ ಹಾಳಾಗಿದೆ ಎಂದು ಆರೋಪಿಸಿ ಯುವಕನೊಬ್ಬ ಕೆಸರಿನ ರಸ್ತೆಯಲ್ಲಿ ಹೊರಳಾಡುವ ಮೂಲಕ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆಯಿತು.
ಗ್ರಾಮದ ಬಸವರಾಜ ಎಂಬ ಯುವಕ ಗ್ರಾಮದ ರಸ್ತೆಯಲ್ಲಿ ಸಂಗ್ರಹವಾಗಿದ್ದ ಕೆಸರು ಮಿಶ್ರಿತ ಮಣ್ಣಿನಲ್ಲಿ ಹೊರಳಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಯುವಕನ ಈ ಪ್ರತಿಭಟನೆಯಿಂದಾಗಿ ಸುಮಾರು ಎರಡು ಗಂಟೆಗೂ ಅಧಿಕ ಕಾಲ ಲಾರಿಗಳ ಓಡಾಟ ಸ್ಥಗಿತವಾಗಿತ್ತು.
ಗ್ರಾಮದ ಮೂಲಕ ನಿತ್ಯ ನೂರಾರು ಲಾರಿಗಳು ಅತ್ಯಧಿಕ ಭಾರದ ಮೊರಂ, ಕಲ್ಲು, ಮಣ್ಣು ಹೇರಿಕೊಂಡು ಹೋಗುತ್ತಿವೆ. ಸರ್ಕಾರಕ್ಕೆ ನಯಾಪೈಸೆ ತೆರಿಗೆ ಪಾವತಿಸದೇ ಅಕ್ರಮವಾಗಿ ಮೊರಂ, ಕಲ್ಲು ಸಾಗಿಸಲಾಗುತ್ತಿದೆ. ಇದರಿಂದಾಗಿ ಗ್ರಾಮದ ರಸ್ತೆ ಸಂಪೂರ್ಣ ಹಾಳಾಗಿದೆ ಎಂದು ಯುವಕ ಆರೋಪಿಸಿದರು.
ಗ್ರಾಮದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ದ್ವಿಚಕ್ರ ವಾಹನ ಓಡಾಡಲು ಸಾಧ್ಯವಿಲ್ಲದಂತಹ ಸ್ಥಿತಿ ಇದೆ. ರಸ್ತೆಯುದ್ದಕ್ಕೂ ಎರಡು, ಮೂರು ಅಡಿ ಆಳದ ಗುಂಡಿಗಳು ನಿರ್ಮಾಣವಾಗಿದ್ದು, ಮಳೆಗಾಲದಲ್ಲಿ ವಾಹನ ಸವಾರರಿಗೆ ಪ್ರಾಣಾಂತಕವಾಗುತ್ತಿದೆ.
ಕೂಡಲೆ ರಸ್ತೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಯುವಕನ ವಿನೂತನ ಪ್ರತಿಭಟನೆ ನಡೆಸುತ್ತಿದ್ದ ದೃಶ್ಯವನ್ನು ಗ್ರಾಮದ ಕೆಲ ಯುವಕರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿಯುವಲ್ಲಿ ನಿರತರಾಗಿದ್ದರು. ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರ ಸ್ಥಗಿತವಾಗಿತ್ತು. ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.