ಕೊಪ್ಪಳ: ವಿದ್ಯಾರ್ಥಿ ದೆಸೆಯಲ್ಲಿಯೇ ಹಣ ಉಳಿತಾಯ, ಬ್ಯಾಂಕಿಂಗ್ ವ್ಯವಹಾರದ ಅರಿವು ಮೂಡಿಸಲು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ನಿಂದ ವಿದ್ಯಾರ್ಥಿಗಳಿಗೆ ಎಟಿಎಂ ಕಾರ್ಡ್ ವಿತರಿಸುವ ‘ಜೂನಿಯರ್ ಡೆಬಿಟ್ ಕಾರ್ಡ್’ ಯೋಜನೆ ಜ. 29ರಂದು ಜಾರಿಗೆ ಬರಲಿದೆ.
ರಿಸರ್ವ್ ಬ್ಯಾಂಕಿನ ಯೋಜನೆ ಅನುಗುಣವಾಗಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ 10 ರಿಂದ 18 ವರ್ಷದೊಳಗಿನ ಶಾಲಾ, ಕಾಲೇಜುಗಳ 10ರಿಂದ 18ರ ವಯೋಮಾನದ ಸುಮಾರು 5 ಸಾವಿರ ಮಕ್ಕಳಿಗೆ ಎಟಿಎಂ/ಡೆಬಿಟ್ ಕಾರ್ಡ್ ವಿತರಿಸಲಿದೆ. ವಿದ್ಯಾರ್ಥಿಗಳು, ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಉಳಿತಾಯ ಖಾತೆ ತೆರೆದು, ಪ್ರಗತಿ ಕೃಷ್ಣಾ ರೂಪೇ ಜೂನಿಯರ್ ಎಟಿಎಂ ಕಾರ್ಡ್ಗಳನ್ನು ಪಡೆಯಬಹುದು.
ಶಾಲಾ ಮಕ್ಕಳು ಶೂನ್ಯ ಠೇವಣಿಯೊಂದಿಗೆ ಬ್ಯಾಂಕ್ ಖಾತೆ ತೆರೆಯಲು ಅವಕಾಶವಿದೆ. ವಿದ್ಯಾರ್ಥಿ ವೇತನ, ಬಹುಮಾನ ಮೊತ್ತ, ಇತರ ನೆರವಿನ ಮೊತ್ತವನ್ನು ಜಮಾ ಮಾಡಲು ಅಥವಾ ಯಾವುದೇ ಬ್ಯಾಂಕಿನ ಎಟಿಎಂಗಳಲ್ಲಿ ಹಣ ಪಡೆಯಲು ಅನುಕೂಲವಾಗಲಿದೆ. ಎಟಿಎಂ ಕಾರ್ಡ್ ಬಳಸಿ, ಯಾವುದೇ ಎಟಿಎಂ ಮೂಲಕ ದಿನಕ್ಕೆ ಗರಿಷ್ಠ ₨ 5 ಸಾವಿರ ಹಣ ಪಡೆಯಬಹುದು.
ಹಣವಿಲ್ಲದ ಖರೀದಿಗಳನ್ನು ಆಯ್ದ ಅಂಗಡಿಗಳಲ್ಲಿ ಕಾರ್ಡ್ ಸ್ವೈಪ್ ಮಾಡುವ ಮೂಲಕ ಗರಿಷ್ಠ 2 ಸಾವಿರ ಮೊತ್ತದ ಸಾಮಗ್ರಿ ಖರೀದಿಸಲು ಅವಕಾಶವಿದೆ. 18 ವರ್ಷ ಮೀರಿದ ನಂತರ ಖಾತೆಯನ್ನು ಸಾಮಾನ್ಯ ಖಾತೆಯಾಗಿ ಸುಲಭದಲ್ಲಿ ಬದಲಿಸಬಹುದು. ಪೋಷಕರಿಗೆ ಎಸ್ಎಂಎಸ್: ಶಾಲಾ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಪಾಲಕರು/ಪೋಷಕರ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡುವು ದರಿಂದ, ವಿದ್ಯಾರ್ಥಿಗಳ ಬ್ಯಾಂಕ್ ಖಾತೆಯಲ್ಲಿ ನಡೆಯುವ ವ್ಯವಹಾರದ ಬಗ್ಗೆ ಪಾಲಕರು/ಪೋಷಕರ ಮೊಬೈಲ್ಗೆ ಎಸ್ಎಂಎಸ್ ರವಾನೆಯಾಗುತ್ತದೆ. ಖಾತೆಯ ಮೇಲೆ ಪಾಲಕರು ನಿಗಾ ವಹಿಸಲು ಅನುಕೂಲವಿದೆ.
ಖಾತೆ ತೆರಯಲು ಬೇಕಾದ ದಾಖಲೆ: ಖಾತೆ ತೆರಯಲು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ನ ಯಾವುದೇ ಶಾಖೆಯಲ್ಲಿ ನಿಗದಿತ ನಮೂನೆಯನ್ನು ಭರ್ತಿ ಮಾಡಿ, ಮಾದರಿ ಸಹಿಯ ಕಾರ್ಡ್ ಹಾಗೂ ಪಾಸ್ಪೋರ್ಟ್ ಅಳತೆಯ ಫೋಟೋಗಳು, ಬ್ಯಾಂಕ್ ಖಾತೆ ತೆರೆಯಲು ಪಾಲಕರು/ ಪೋಷಕರ ಸಮ್ಮತಿ ಪತ್ರ ಹಾಗೂ ಅವರ ಮೊಬೈಲ್ ಸಂಖ್ಯೆ ಮತ್ತು ಗುರುತಿನ ಚೀಟಿ, ಶಾಲೆ/ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ಶಾಲಾ, ಕಾಲೇಜಿನ ಮುಖ್ಯಸ್ಥರಿಂದ ಪ್ರಮಾಣಪತ್ರ.
ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪ್ರಗತಿ ಕೃಷ್ಣಾ ಬ್ಯಾಂಕಿನ ಕೊಪ್ಪಳ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಪ್ರಬಂಧಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.