ADVERTISEMENT

ಸಿರಿಧಾನ್ಯ ಮೌಲ್ಯವರ್ಧನೆ ಆರ್ಥಿಕ ಸ್ವಾವಲಂಬನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 6:50 IST
Last Updated 8 ಸೆಪ್ಟೆಂಬರ್ 2017, 6:50 IST

ಕುಷ್ಟಗಿ: ‘ಸಿರಿಧಾನ್ಯ ಬೆಳೆಗಳಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದ್ದು, ರೈತರು ನೂತನ ತಾಂತ್ರಿಕ ಆವಿಷ್ಕಾರಗಳೊಂದಿಗೆ ಅವುಗಳನ್ನು ಬೆಳೆಯಲು ಮುಂದಾಗಬೇಕು’ ಎಂದು ಜಿಲ್ಲಾ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿ ಡಾ.ಎಂ.ಬಿ.ಪಾಟೀಲ ಹೇಳಿದರು.

ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ತಾಲ್ಲೂಕಿನ ನಿಡಶೇಸಿ ಮತ್ತು ಹಂಚಿನಾಳ ಗ್ರಾಮಗಳಲ್ಲಿ ನವಣೆ ಬೆಳೆಯುವಲ್ಲಿ ತಾಂತ್ರಿಕತೆ ಕುರಿತು ರೈತರಿಗೆ ಏರ್ಪಡಿಸಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

'ಬೆಳೆ ಮತ್ತು ಆಹಾರದಲ್ಲಿ ವೈವಿಧ್ಯತೆ ಇರಬೇಕು. ಮಣ್ಣಿನ ಮತ್ತು ದೈಹಿಕ ಆರೋಗ್ಯದಲ್ಲಿ ಸಮತೋಲನ ಸಾಧಿಸಬೇಕಾದರೆ ಪರ್ಯಾಯ ಬೆಳೆ, ಆಹಾರಗಳತ್ತ ಗಮನಹರಿಸಬೇಕು. ನವಣೆ, ಹಾರಕ, ಬರಗು, ಸಾಮೆ, ಕೊರಲೆ ಮೊದಲಾದ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚುತ್ತಿದ್ದರೂ ಬೆಳೆಯುವವರ ಸಂಖ್ಯೆ ಕಡಿಮೆ ಇದೆ. ಭವಿಷ್ಯದಲ್ಲಿ ಉತ್ತಮ ಮಾರುಕಟ್ಟೆ ಸೃಷ್ಟಿಯಾಗಲಿದ್ದು, ಸಿರಿಧಾನ್ಯಗಳನ್ನು ಮೌಲ್ಯವರ್ಧನೆಗೊಳಿಸಿದರೆ ರೈತರು ಆರ್ಥಿಕವಾಗಿಯೂ ಸದೃಢರಾಗಬಹುದು' ಎಂದರು.

ADVERTISEMENT

ಅದೇ ರೀತಿ ರೈಜೋಬಿಯಂ, ಪಿಎಸ್‍ಬಿ, ಟ್ರೈಕೋಡರ್ಮಾ, ಜೀವಾಣು ಗೊಬ್ಬರಗಳ ಬಳಕೆಯಿಂದ ಬೆಳೆಗಳಿಗೆ ಬರುವ ಶಿಲೀಂಧ್ರ ರೋಗಗಳ ನಿಯಂತ್ರಣ, ವಾತಾವರಣದಲ್ಲಿನ ಸಾರಜನಕವನ್ನು ಭೂಮಿಗೆ ಸ್ಥಿರೀಕರಣಗೊಳಿಸಲು ಸಾಧ್ಯವಾಗುತ್ತದೆ' ಎಂದರು. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ತಾಂತ್ರಿಕ ಸಲಹೆಗಾರ ಮಾರುತಿ ಪೂಜಾರ, ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ಕಮತರ ಮಾತನಾಡಿದರು.

ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ದೊಡ್ಡಪ್ಪ ಜ್ಯೋತಿ, ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಿಂದ ಆಗುವ ಪ್ರಯೋಜನಗಳು ಮತ್ತು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳು ಹಾಗೂ ಆದಾಯದ ಮಿತಿಯಲ್ಲಿ ಬದುಕುವ ರೀತಿ ಕುರಿತು ವಿವರಿಸಿದರು. ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಕಾಶ ತಾರಿವಾಳ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.