ADVERTISEMENT

17 ಮಂದಿಯ ಜಾತಿ ಪ್ರಮಾಣಪತ್ರ ವಾಪಸ್

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2015, 11:28 IST
Last Updated 5 ಸೆಪ್ಟೆಂಬರ್ 2015, 11:28 IST

ಗಂಗಾವತಿ: ಆಂಧ್ರಪ್ರದೇಶದಿಂದ ವಲಸೆ ಬಂದ ಬಾಪಿರೆಡ್ಡಿಕ್ಯಾಂಪಿನ ಕಾಪು ಜನಾಂಗದವರಿಗೆ ನಕಲಿ ದಾಖಲೆಗಳ ಮೂಲಕ ‘ಕೊಂಡಕಾಪು’ ಎಂದು ನೀಡಲಾಗಿದ್ದ ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರವನ್ನು ಕಂದಾಯ ಇಲಾಖೆಯ ಅಧಿಕಾರಿಗಳು ವಾಪಸ್ ಪಡೆದಿದ್ದಾರೆ.

ಮರಳಿ ಕಂದಾಯ ಹೋಬಳಿಯ ನಾಡ ಕಚೇರಿಯಿಂದ ದಿನಾಂಕ 05.08.2015ರಿಂದ 31.07.2015 ವರೆಗೆ ನೀಡಲಾಗಿದ್ದ ಸುಮಾರು 26ಕ್ಕೂ ಹೆಚ್ಚು ಜಾತಿ ಪ್ರಮಾಣಪತ್ರಗಳ ಪೈಕಿ ಬಹುತೇಕರಿಗೆ ನಕಲಿ ದಾಖಲೆ ಸೃಷ್ಟಿಸಿ ಕೊಂಡಕಾಪು ಎಂದು ಪರಿಶಿಷ್ಟ ಪಂಗಡದ ಪ್ರಮಾಣಪತ್ರ ನೀಡಲಾಗಿತ್ತು.

ಪ್ರಕರಣದ ಬಗ್ಗೆ ಆ. 25ರಂದು ’ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ನಾಯಕ ಸಮಾಜದ ಮುಖಂಡರು ಸೆ. 9ರಂದು ಗಂಗಾವತಿ ಬಂದ್‌ಗೆ ಕರೆ ನೀಡಿದ್ದರು. ತಕ್ಷಣ ಎಚ್ಚೆತ್ತ ಕಂದಾಯ ಇಲಾಖೆಯ ಅಧಿಕಾರಿಗಳು ಬಾಪಿರೆಡ್ಡಿಕ್ಯಾಂಪ್‌ಗೆ ತೆರಳಿ ನಕಲಿ ದಾಖಲೆ ಮೂಲಕ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರ ಪಡೆದ ಅಭ್ಯರ್ಥಿಗಳಿಂದ ವಾಪಾಸ್ ಪ್ರಮಾಣಪತ್ರ ಪಡೆದಿದ್ದಾರೆ.

ದಿವ್ಯಶ್ರೀ, ಮಮತಾದುರ್ಗ, ಅನ್ನಪೂರ್ಣ, ತೇಜಸ್ವಿನಿ, ಲಕ್ಷ್ಮಿಶ್ರೀಜಾ, ದುರ್ಗಾ, ನಂದಿನಿ, ನವ್ಯಾ, ಅಭಿಷೇಕ, ಮಣಿಕಂಠ, ಸೂರ್ಯವೆಂಕಟೇಶ, ಸತ್ಯನಾರಾಯಣ, ಎಸ್. ಶ್ರೀನಿವಾಸ, ಎನ್. ಗಾಂಧಿ, ಆದಿನಾರಾಯಣ, ಎಂ. ಸತ್ಯನಾರಾಯಣ ಎಂಬುವವರಿಂದ ಜಾತಿ ಪ್ರಮಾಣಪತ್ರ ವಾಪಾಸ್ ಪಡೆಯಲಾಗಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

ತಪ್ಪಿತಸ್ಥ ಅಧಿಕಾರಿ ಮತ್ತು ಫಲಾನುಭವಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ನಾಯಕ ಸಮಾಜದ  ಎ.ಜೆ. ರಂಗನಾಥ ಒತ್ತಾಯಿಸಿದ್ದಾರೆ. ಈ ಬಗ್ಗೆ ಪತ್ರಿಕ್ರಿಯೆ ಪಡೆಯಲು ತಹಶೀಲ್ದಾರ ಎಲ್‌.ಡಿ. ಚಂದ್ರಕಾಂತ ಅವರನ್ನು ಸಂಪಕಿರ್ಸಿದರೂ ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.