ADVERTISEMENT

ಅಧಿಕಾರಿಗಳಿಗೆ ಇಸ್ರೇಲ್ ದೇಶ ಮಾದರಿಯಾಗಲಿ

‘ಜಲ ಬಿಕ್ಕಟ್ಟು- ಕಾರಣಗಳು ಹಾಗೂ ಪರ್ಯಾಯಗಳು’ ವಿಚಾರ ಸಂಕಿರಣ: ಕೃಷ್ಣ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 7:54 IST
Last Updated 9 ಮಾರ್ಚ್ 2017, 7:54 IST
ಕೆ.ಆರ್.ಪೇಟೆ: ಪುಟ್ಟ ದೇಶ ಇಸ್ರೇಲ್ ವ್ಯವಸಾಯಕ್ಕೆ ಯೋಗ್ಯವಲ್ಲದ ತುಂಡು ಭೂಮಿಯಲ್ಲಿ ಅಳವಡಿಸಿಕೊಂಡಿರುವ ಕೃಷಿ ಪದ್ಧತಿ ನಮ್ಮ ರೈತರಿಗೆ ಮಾದರಿ ಯಾಗಬೇಕು ಎಂದು ವಿಧಾನಸಭೆಯ ಮಾಜಿ ಅಧ್ಯಕ್ಷ ಕೃಷ್ಣ ಅಭಿಪ್ರಾಯಪಟ್ಟರು.
 
ಪಟ್ಟಣದ ಎಸ್.ಎಂ.ಲಿಂಗಪ್ಪ ಸಮುದಾಯಭವನದಲ್ಲಿ ರಾಜ್ಯ ರೈತ ಸಂಘ, ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್, ಮಂಡ್ಯ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಕೃಷಿ ಇಲಾಖೆಗಳ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ‘ಜಲ ಬಿಕ್ಕಟ್ಟು- ಕಾರಣಗಳು ಹಾಗೂ ಪರ್ಯಾಯಗಳು’ ಹಾಗೂ ‘ಜಾಗತಿಕ ತಾಪಮಾನ ಮತ್ತು ಅದನ್ನು ತಡಗಟ್ಟುವಲ್ಲಿ ರೈತರ ಪಾತ್ರ’ ಕುರಿತ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 
ನಮ್ಮಲ್ಲಿ ಭೂಸಂಪತ್ತು – ಜಲಸಂಪತ್ತು ಹೇರಳವಾಗಿದೆ. ಆದರೆ, ಅದರ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಇಲ್ಲ. ಸರ್ಕಾರದ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಆ ಬಗ್ಗೆ ಚಿಂತನೆಯೇ ಇಲ್ಲ. ಯಾವ ಭೂಮಿಯಲ್ಲಿ ಯಾವ ಬೆಳೆ ತೆಗೆಯಬೇಕು, ಮಣ್ಣಿನ ಫಲವತ್ತತೆ ಹೇಗೆ ಎಂಬ ಬಗ್ಗೆ ಜನರಿಗೆ ತಿಳುವಳಿಕೆ ಇಲ್ಲ. ನಮ್ಮಲ್ಲಿ ದೊಡ್ಡ ಪ್ರಮಾಣದ ಕೃಷಿ ಇಲಾಖೆಯೇನೋ ಇದೆ. ಆದರೆ ಅದರ ಪ್ರಯೋಜನ ರೈತರಿಗೆ ಸಮರ್ಪಕವಾಗಿ ಸಿಗುತ್ತಿಲ್ಲ  ಎಂದು ವಿಷಾದಿಸಿದರು.
 
ಇಸ್ರೇಲ್ ದೇಶದ ಕೃಷಿ ಇಲಾಖೆಯ ಅಧಿಕಾರಿಗಳು  ಪ್ರತಿವರ್ಷ ಪ್ರತಿ ರೈತರ ಭೂಮಿಯ ಮಣ್ಣಿನ ಆರೋಗ್ಯದ ಬಗ್ಗೆ ಪರಿಶೀಲನೆ ನಡೆಸಿ ಕೃಷಿ ಬೆಳೆಯ ಬಗ್ಗೆ ಮಾಹಿತಿ ನೀಡುತ್ತಾರೆ. ಇಂತಹ ಬದಲಾವಣೆ ನಮ್ಮಲ್ಲೂ ಆಗಬೇಕು ಎಂದರು. 
 
ಚಿತ್ರದುರ್ಗದ ಜಲತಜ್ಞ ಡಾ.ದೇವರಾಜರೆಡ್ಡಿ ಅಂತರ್ಜಲ ಮರು ಜೋಡನೆ ಕುರಿತು ಮಾತನಾಡಿದರು. ಮೈಸೂರಿನ ಸಹಜ ಸಮೃದ್ಧಿ ದೇಶೀಯ ಬೀಜಗಳ ಸಂರಕ್ಷಕ ಕೃಷ್ಣಪ್ರಸಾದ್ ದೇಶಿ ಬೀಜಗಳ ಸಂರಕ್ಷಣೆಯ ಅಗತ್ಯತೆ ಬಗ್ಗೆ ಮಾತನಾಡಿದರು.
 
ರಾಜ್ಯ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಜಯರಾಂ ಜಾಗತಿಕ ತಾಪಮಾನ ಮತ್ತು ಅದನ್ನು ತಡಗಟ್ಟುವಲ್ಲಿ ರೈತರ ಪಾತ್ರ ಕುರಿತು ಮಾತನಾಡಿದರು. 
ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ, ರಾಜ್ಯ ರೈತಸಂಘದ ಉಪಾಧ್ಯಕ್ಷ ಕೆ.ಆರ್.ಜಯರಾಂ, ತಾಲ್ಲೂಕು ಘಟಕದ ಅಧ್ಯಕ್ಷ ಮರು ವನಹಳ್ಳಿ ಶಂಕರ್, ಮುಖಂಡರಾದ ಗೂಡೇಹೊಸಹಳ್ಳಿ ಜವರಾಯಿಗೌಡ, ಚನ್ನಿಂಗೇಗೌಡ, ನಾಯಕನಹಳ್ಳಿ ಬಿ.ನಂಜಪ್ಪ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಕೆಂಚೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.