ಮದ್ದೂರು: ಸರ್ಕಾರದಿಂದ ಹಾಲು ಉತ್ಪಾದಕರಿಗೆ ನೀಡಲಾಗುವ ₹ 5 ಪ್ರೋತ್ಸಾಹ ಧನವನ್ನು ಪಡೆಯಲು ಜಿಲ್ಲೆಯ ಎಲ್ಲ ಹಾಲು ಉತ್ಪಾದಕರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ನೋಂದಣಿ ಮಾಡಿಸಬೇಕು ಎಂದು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಕದಲೂರು ರಾಮಕೃಷ್ಣ ಮನವಿ ಮಾಡಿದರು.
ಸಮೀಪದ ಶಿವಪುರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ತಾಲ್ಲೂಕಿನ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಿಲ್ಲೆಯ ಹಾಲು ಉತ್ಪಾದಕರಿಗ ಸರ್ಕಾರದಿಂದ ಒಟ್ಟು ಮಾಸಿಕ ₹ 170 ಕೋಟಿ ಪ್ರೋತ್ಸಾಹ ಧನ ದೊರಕುತ್ತಿದೆ. ಮದ್ದೂರು ತಾಲ್ಲೂಕೊಂದಕ್ಕೆ ₹ 24 ಕೋಟಿ ದೊರಕುತ್ತಿದೆ. ಆಧಾರ್ ಸಂಖ್ಯೆ ನೋಂದಾಯಿಸದ ಕಾರಣ ₹ 7.5 ಕೋಟಿ ಸರ್ಕಾರಕ್ಕೆ ವಾಪಸ್ ಆಗಿದೆ. ತಾಲ್ಲೂಕಿನಲ್ಲಿ ₹ 85 ಲಕ್ಷ ಪ್ರೋತ್ಸಾಹ ಧನ ಉತ್ಪಾದಕರ ಖಾತೆಗೆ ಜಮಾ ಆಗಿಲ್ಲ ಎಂದರು.
ಜಿಲ್ಲೆಯಲ್ಲಿ 18,519 ಹಾಲು ಉತ್ಪಾದಕರಿದ್ದಾರೆ. ಸರಿ ಸುಮಾರು 1,352 ಉತ್ಪಾದಕರಿಗೆ ಹಣ ತಲುಪುತ್ತಿಲ್ಲ.
ಹೀಗಾಗಿ ಹಾಲು ಉತ್ಪಾದಕರು ಕೂಡಲೇ ತಮ್ಮ ಡೇರಿಯ ಕಾರ್ಯದರ್ಶಿಗಳ ಮೂಲಕ ಆಧಾರ್ ಲಿಂಕ್ ಮಾಡಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಉಪವ್ಯವಸ್ಥಾಪಕ ರಾಮಕೃಷ್ಣ, ಪುಟ್ಟಸ್ವಾಮಿ, ಕೃಷಿ ಅಧಿಕಾರಿ ಪ್ರಸಾದ್, ಡೇರಿ ವಿಸ್ತರಣಾ ಅಧಿಕಾರಿಗಳಾದ ರಶ್ಮಿ, ಆರ್. ಶಿವಶಂಕರ್, ತೇಜಸ್ವಿನಿ ಈ ಸಂದರ್ಭದಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.