ADVERTISEMENT

ಆಹಾರ ಉದ್ಯಮದಲ್ಲಿ ಹೇರಳ ಉದ್ಯೋಗಾವಕಾಶ

ಸಿದ್ಧ, ಪೌಷ್ಟಿಕ ಆಹಾರ ಉತ್ಪಾದನೆ, ಮಾರಾಟ ಮಳಿಗೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2017, 9:15 IST
Last Updated 3 ಜನವರಿ 2017, 9:15 IST

ಶ್ರೀರಂಗಪಟ್ಟಣ: ಆಹಾರ ಉತ್ಪಾದನೆ ಮತ್ತು ಮಾರಾಟ ಉದ್ಯಮದಲ್ಲಿ ಹೇರಳ ಉದ್ಯೋಗಾವಕಾಶ ಇದ್ದು, ಯುವ ಉದ್ಯಮಿಗಳು ಈ ಕ್ಷೇತ್ರದತ್ತ ಮುಖ ಮಾಡಬೇಕು ಎಂದು ಮಂಡ್ಯ ಜಿಲ್ಲಾ ಲೀಡ್‌ ಬ್ಯಾಂಕ್‌ ಆಗಿರುವ ವಿಜಯ ಬ್ಯಾಂಕ್‌ನ ವಿಬ್‌ಸಿಟಿ ನಿರ್ದೇಶಕ ಬಸವರಾಜು ಸಲಹೆ ನೀಡಿದರು.

ಸಮೀಪದ ಗಂಜಾಂನಲ್ಲಿ ಭಗವತಿ ಮಹಿಳಾ ಮತ್ತು ಯುವತಿ ಮಂಡಳಿ ಸೋಮವಾರ ಏರ್ಪಡಿಸಿದ್ದ ಸಿದ್ಧ ಮತ್ತು ಪೌಷ್ಟಿಕ ಆಹಾರ ಉತ್ಪಾದನೆ ಮತ್ತು ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗೃಹೋಪಯೋಗಿ ಉತ್ಪನ್ನಗಳಿಗೆ ಸದಾ ಕಾಲವೂ ಬೇಡಿಕೆ ಇರುತ್ತದೆ. ಉತ್ಪನ್ನದ ಗುಣಮಟ್ಟ ಕಾಯ್ದುಕೊಂಡರೆ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ನಡೆಸಬಹುದು. ಜನರ ಅಭಿರುಚಿಗೆ ಅಗತ್ಯವಾದ ವಸ್ತುಗಳನ್ನು ಉತ್ಪಾದಿಸಬೇಕು. ಗ್ರಾಹಕರ ಕೈಗೆ ಸುಲಭವಾಗಿ ಸಿಗುವಂತೆ ನೋಡಿಕೊಳ್ಳಬೇಕು ಗ್ರಾಹಕರನ್ನು ಕೇಂದ್ರವಾಗಿ ಇಟ್ಟುಕೊಂಡು ಯಾರು ಉದ್ಯಮ ನಡೆಸುತ್ತಾರೋ ಅವರೆಲ್ಲರೂ ಯಶಸ್ವಿಯಾಗಿದ್ದಾರೆ ಎಂದು ಅವರು ಹೇಳಿದರು.

ಮಹಿಳೆಯರು ಬಿಡುವಿನ ವೇಳೆಯಲ್ಲಿ ಹಪ್ಪಳ, ಉಪ್ಪಿನಕಾಯಿ, ಪುಳಿಯೋಗರೆ, ಚಿತ್ರಾನ್ನ ಮಸಾಲೆ, ವಡ, ಬಜ್ಜಿ ಇತರ ತಿನಿಸುಗಳನ್ನು ಉತ್ಪಾದಿಸಿ ಸ್ಥಳೀಯವಾಗಿ, ಜನದಟ್ಟಣೆ ಇರುವ ಸ್ಥಳದಲ್ಲಿ ಮಾರಾಟ ಮಾಡುವ ಮೂಲಕ ಲಾಭದ ಮಾರ್ಗ ಕಂಡುಕೊಳ್ಳಬೇಕು ಎಂದರು ಸಲಹೆ ನೀಡಿದರು.

ನೆಹರೂ ಯುವ ಕೇಂದ್ರದ ಸಮನ್ವಯಾಧಿಕಾರಿ ಎಸ್‌.ಸಿದ್ದರಾಮಪ್ಪ ಮಾತನಾಡಿ, ಮಹಿಳೆಯರು ಕಿರು ಉದ್ಯಮ ಆರಂಭಿಸಿದರೆ ಬ್ಯಾಂಕ್‌ಗಳು ಸುಲಭವಾಗಿ ಸಾಲ ಸೌಲಭ್ಯ ನೀಡುತ್ತವೆ. ವಿವಿಧ ಸರ್ಕಾರದ ಯೋಜನೆಗಳಡಿ ಸಬ್ಸಿಡಿ ಸಹಿತ ಸಾಲವೂ ಸಿಗುತ್ತದೆ. ಅದರ ಪ್ರಯೋಜನ ಪಡೆದು ಸ್ವಾವಲಂಬನೆ ಸಾಧಿಸಬೇಕು. ಆಸಕ್ತಿಯುಳ್ಳ ಕ್ಷೇತ್ರದಲ್ಲಿ ತರಬೇತಿ ಪಡೆದು ಉದ್ಯಮ ಆರಂಭಿಸಬೇಕು ಎಂದರು ಹೇಳಿದರು.

ಭಗವತಿ ಮಹಿಳಾ ಮತ್ತು ಯುವತಿ ಮಂಡಳಿ ಅಧ್ಯಕ್ಷೆ ಶೀಲಾ ನಂಜುಂಡಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳಾ ಮಂಡಳಿಯ ವತಿಯಿಂದ ಮಹಿಳೆಯರೇ ಉತ್ಪಾದಿಸುವ ತಿನಿಸುಗಳನ್ನು ಗಂಜಾಂ ನಿಮಿಷಾಂಬಾ ದೇವಾಲಯದ ಬಳಿ ಮಂಗಳವಾರದಿಂದ ನಿರಂತರವಾಗಿ ಮಾರಾಟ ಮಾಡಲಾಗುವುದು ಎಂದರು. ತರಬೇತುದಾರರಾದ ರಾಣಿ ಚಂದ್ರಶೇಖರ್‌, ಪ್ರಕಾಶ್‌ ಪಾಟೀಲ್‌ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.