ಹಲಗೂರು(ಮಳವಳ್ಳಿ): ಸರ್ಕಾರಿ ಶಾಲೆ, ವಿದ್ಯಾರ್ಥಿನಿಲಯಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ತಾಲ್ಲೂಕಿನ ಹಲಗೂರು ಹೋಬಳಿಯ ನಿಟ್ಟೂರು ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ನಿರ್ವಹಿಸುತ್ತಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯ ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯ ನೀಡಿದ್ದು ಈ ಭಾಗದ ಜನರ ಗಮನ ಸೆಳೆಯುತ್ತಿದೆ.
ನಿಟ್ಟೂರು ಗ್ರಾಮದ ಹೊರವಲಯದಲ್ಲಿ ಸರ್ಕಾರಿ ಪ್ರೌಢಶಾಲೆ ಪಕ್ಕದಲ್ಲೇ ವಿದ್ಯಾರ್ಥಿ ನಿಲಯವೂ ಇದ್ದು 2002ರಲ್ಲಿ ಬಿ.ಸೋಮಶೇಖರ್ ಅವರು ಶಾಸಕರಾಗಿದ್ದಾಗ ಪ್ರಾರಂಭವಾಗಿದ್ದು ಪ್ರಸ್ತುತ ಉತ್ತಮ ವಿದ್ಯಾರ್ಥಿ ನಿಲಯ ಎನಿಸಿಕೊಂಡಿದೆ. ವಿದ್ಯಾರ್ಥಿ ನಿಲಯದ ಆವರಣದಲ್ಲಿ ಸುತ್ತಲೂ ಹಸಿರು ವಾತಾವರಣ ಕಂಗೊಳಿಸುತ್ತಿದ್ದು ಪಪ್ಪಾಯ ಮರ, ಕರಿಬೇವಿನ ಗಿಡ, ನುಗ್ಗೆ ಸೊಪ್ಪಿನ ಮರ ಹಲವು ವೈವಿಧ್ಯಮಯ ಮರಗಿಡಗಳಿವೆ. ಈ ಸುಂದರ ತೋಟ ಮಕ್ಕಳು ಉತ್ತಮವಾಗಿ ಓದಲು ಪ್ರೇರೇಪಣೆ ನೀಡುತ್ತಿದೆ.
ಸುಸಜ್ಜಿತ ಕಟ್ಟಡ, ಊಟಕ್ಕೆ ಟೇಬಲ್ ವ್ಯವಸ್ಥೆ, ಮಲಗಲು ಕಬ್ಬಿಣದ ಮಂಚ, ಚಾಪೆ, ದಿಂಬು, ಸ್ನಾನಕ್ಕೆ ಸೋಲಾರ್ ವ್ಯವಸ್ಥೆಯ ಮೂಲಕ ಬಿಸಿನೀರು, ದೂರದರ್ಶನ ವ್ಯವಸ್ಥೆ ಎಲ್ಲವೂ ಇದೆ. ಇದರ ಜೊತೆಗೆ ಊಟದ ಹಾಲ್ನಲ್ಲಿ ಹಿಂದುಳಿದ ವರ್ಗಗಳ ಸಚಿವರು, ರಾಷ್ಟ್ರಪತಿಗಳು, ಪ್ರಧಾನಮಂತ್ರಿ ಸೇರಿದಂತೆ ಇತಿಹಾಸ ನೆನಪಿಸುವ ಹಲವರ ಭಾವಚಿತ್ರಗಳನ್ನು ಅಳವಡಿಸಲಾಗಿದೆ. ವಿದ್ಯಾರ್ಥಿ ನಿಲಯದಲ್ಲಿ ಒಟ್ಟು 40 ವಿದ್ಯಾರ್ಥಿಗಳಿದ್ದು ಪ್ರತಿದಿನ ಒಂದೊಂದು ರೀತಿಯ ಉಪಹಾರ, ಬೋಜನದ ವ್ಯವಸ್ಥೆ, ಮೊಟ್ಟೆ ವಿತರಿಸಲಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಬೇಕಾದ ಸವಲತ್ತುಗಳಾಗಿವೆ.
‘ಐದಾರು ವರ್ಷಗಳ ಹಿಂದೆ ಈ ವಿದ್ಯಾರ್ಥಿನಿಲಯದಲ್ಲಿ ಸವಲತ್ತುಗಳ ಕೊರತೆ ಇತ್ತು. ಆದರೆ ಈಗ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡಲಾಗುತ್ತಿದೆ’ ಎಂದು ವಿದ್ಯಾರ್ಥಿನಿಲಯದ ಅಧೀಕ್ಷಕ ರವಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.