ಶ್ರೀರಂಗಪಟ್ಟಣ: ತಾಲ್ಲೂಕು ಕೆಆರ್ಎಸ್ನಲ್ಲಿ ಉಪ್ಪರಿಕೆ ಬಸವೇಶ್ವರಸ್ವಾಮಿ ದನಗಳ ಜಾತ್ರೆ ಭಾನುವಾರ ಆರಂಭವಾಯಿತು. 35ನೇ ವರ್ಷದ ಈ ಜಾತ್ರೆಗೆ ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಕೊಡಗು ಇತರ ಜಿಲ್ಲೆಗಳಿಂದ ರಾಸುಗಳು ಬರಲಾರಂಭಿಸಿವೆ.
ಹಾಲು ಹಲ್ಲು, ಎರಡು ಹಲ್ಲು, ನಾಲ್ಕು ಹಲ್ಲು, 6 ಹಲ್ಲು ಮತ್ತು ಬಾಯಿ ಕೂಡಿದ ದನಗಳನ್ನು ಜಾತ್ರೆಗೆ ಕರೆ ತರಲಾಗಿದೆ. ಹಳ್ಳಿಕಾರ್ ಮತ್ತು ಅಮೃತ ಮಹಲ್ ತಳಿಯ ರಾಸುಗಳು ಹೆಚ್ಚಾಗಿ ಬಂದಿವೆ. ಮಲ್ನಾಡ್ ಗಿಡ್ಡ, ಸೀಮೆ ಹಸುಗಳ ಹೋರಿಗಳು ಬೆರಳೆಣಿಕೆಯಷ್ಟು ಬಂದಿವೆ.
₹ 50 ಸಾವಿರ ಬೆಲೆಯ ರಾಸುಗಳಿಂದ ₹ 3 ಲಕ್ಷವರೆಗೆ ಬೆಲೆ ಬಾಳುವ ರಾಸುಗಳನ್ನು ತರಲಾಗಿದೆ. ಹೋರಿ ಬೆಲೆ ₹ 1.5 ಲಕ್ಷ: ತಾಲ್ಲೂಕಿನ ಕಾರೇಕುರ ಗ್ರಾಮದ ರೈತ ಪ್ರದೀಪ್ ಎಂಬವರು ₹ 1.5 ಲಕ್ಷ ರೂಪಾಯಿ ಬೆಲೆಯ ಒಂದು ಹೋರಿಯನ್ನು ಜಾತ್ರೆಗೆ ಮಾರಾಟಕ್ಕಾಗಿ ತಂದಿದ್ದಾರೆ.
ಕೆಆರ್ಎಸ್ ಜಲಾಶಯದ ಹಿನ್ನೀರಿನಲ್ಲಿ. ಜಾತ್ರೆ ನಡೆಯುವ ಸ್ಥಳದಲ್ಲಿ ಮೂಲಸೌಕರ್ಯ ಕಲ್ಪಿಸಲಾಗಿದೆ. 50 ಸಾವಿರ ರಾಸು ಕಟ್ಟುವಷ್ಟು ಬಯಲು ಸಿದ್ಧಗೊಂಡಿದೆ. ದನಗಳಿಗೆ ನೀರಿನ ಸೌಕರ್ಯ ಮಾಡಲಾಗಿದೆ.
ಎರಡು ದಿನಗಳಲ್ಲಿ 25 ಸಾವಿರಕ್ಕೂ ಹೆಚ್ಚು ದನಗಳು ಬರುವ ನಿರೀಕ್ಷೆಯಿದೆ ಎಂದು ಉಪ್ಪರಿಕೆ ದನಗಳ ಜಾತ್ರಾ ಮಹೋತ್ಸವ ಸಮಿತಿ ಸದಸ್ಯ ರಾಮೇಗೌಡ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.