ADVERTISEMENT

ಟಿಪ್ಪು ಜಯಂತಿಗೆ ಅಡ್ಡಿಪಡಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಿಪಿಐ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 9:12 IST
Last Updated 8 ನವೆಂಬರ್ 2017, 9:12 IST
ಪಾಂಡವಪುರ ಪಟ್ಟಣದಲ್ಲಿ ಟಿಪ್ಪು ಜಯಂತಿ ಯಶಸ್ಸಿಗಾಗಿ ಮಂಗಳವಾರ ಸಿಪಿಐ ದೀಪಕ್‌ ನೇತೃತ್ವದಲ್ಲಿ ವಿವಿಧ ಪಕ್ಷ ಮತ್ತು ಸಂಘಟನೆಗಳ ಮುಖಂಡರ ಸಭೆ ನಡೆಯಿತು
ಪಾಂಡವಪುರ ಪಟ್ಟಣದಲ್ಲಿ ಟಿಪ್ಪು ಜಯಂತಿ ಯಶಸ್ಸಿಗಾಗಿ ಮಂಗಳವಾರ ಸಿಪಿಐ ದೀಪಕ್‌ ನೇತೃತ್ವದಲ್ಲಿ ವಿವಿಧ ಪಕ್ಷ ಮತ್ತು ಸಂಘಟನೆಗಳ ಮುಖಂಡರ ಸಭೆ ನಡೆಯಿತು   

ಪಾಂಡವಪುರ: ನ.10ರಂದು ತಾಲ್ಲೂಕು ಆಡಳಿತ ಆಯೋಜಿಸಿರುವ ಟಿಪ್ಪು ಜಯಂತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಹಕರಿಸುವುದಾಗಿ ವಿವಿಧ ಸಂಘಟನೆಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿದರು. ಟಿಪ್ಪು ಜಯಂತಿ ವೇಳೆ ತಾಲ್ಲೂಕಿನಲ್ಲಿ ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ಸಿಪಿಐ ದೀಪಕ್‌ ಸಭೆ ಕರೆದಿದ್ದರು. ಜೆಡಿಎಸ್‌, ರೈತ ಸಂಘ, ಸ್ವರಾಜ್‌ ಇಂಡಿಯಾ, ದಲಿತ ಸಂಘರ್ಷ ಸಮಿತಿ, ಆಟೊ ಮಾಲೀಕರ ಮತ್ತು ಚಾಲಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಭಾಗವಹಿಸಿದ್ದವು.

ಮಸ್ಚದೇ ಆಲಾ ಮಸೀದಿ ಅಧ್ಯಕ್ಷ ಮಹಮ್ಮದ್‌ ಹನೀಫ್‌ ಮಾತನಾಡಿ, ‘ಕಳೆದ ಬಾರಿ ಟಿಪ್ಪು ಜಯಂತಿ ಕಾರ್ಯಕ್ರಮದ ವೇಳೆ ಬಿಜೆಪಿ ಕಾರ್ಯಕರ್ತರು ಮಿನಿ ವಿಧಾನಸೌಧದ ಸಭಾಂಗಣದ ಗೇಟ್‌ ಬಳಿ ಬಂದು ಪ್ರತಿಭಟನೆ ನಡೆಸಿದರು. ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣಕ್ಕೆ ನುಗ್ಗಲು ಯತ್ನಿಸಿದರು. ಉಪಾಹಾರ ಸೇವನೆಗೂ ಅಡ್ಡಿಪಡಿಸಿದರು. ಉಪಾಹಾರದಲ್ಲಿ ಗೋಮಾಂಸ ಇದೆ ಎಂದು ಸುಳ್ಳು ವದಂತಿ ಹಬ್ಬಿಸಿದರು. ಈ ಬಾರಿ ಇಂತಹದಕ್ಕೆ ಅವಕಾಶ ನೀಡಬೇಡಿ’ ಎಂದು ಮನವಿ ಮಾಡಿದರು.

ಯಾವುದೇ ಕಾರಣಕ್ಕೂ ಈ ಬಾರಿ ಇಂತಹ ಘಟನೆಗೆ ಅವಕಾಶ ನೀಡುವುದಿಲ್ಲ. ಶಾಂತಿಭಂಗಕ್ಕೆ ಯತ್ನಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ದೀಪಕ್‌ ಹೇಳಿದರು.

ADVERTISEMENT

ಸಭೆಯಲ್ಲಿ ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಧರ್ಮರಾಜು, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಗೋವಿಂದರಾಜು, ಸ್ವರಾಜ್‌ ಇಂಡಿಯಾದ ಎಚ್.ಎನ್.ವಿಜಯಕುಮಾರ್‌, ಆಟೊ ಮಾಲೀಕರ ಸಂಘದ ಅಧ್ಯಕ್ಷ ಹಿರೇಮರಳಿ ಯೋಗೇಶ್‌, ಮುಸ್ಲಿಂ ಮುಖಂಡರಾದ ಇಲಿಯಾಸ್‌ ಜಾನ್‌, ಸಮಿಯುಲ್ಲಾ, ನಜೀರ್‌ ಅಹಮದ್‌, ಮುಜಾಹಿದ್‌ ಹಾಜಿ ಹಾಗೂ ದಸಂಸ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.