ADVERTISEMENT

ದಿನೇಶ್ ಗುಂಡೂರಾವ್ ಹೇಳಿಕೆ ಖಂಡಿಸಿ ಪ್ರತಿಭಟನೆ

ಬಹಿರಂಗ ಕ್ಷಮೆಯಾಚನೆಗೆ ಒತ್ತಾಯ, ಸಚಿವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 9:56 IST
Last Updated 17 ಏಪ್ರಿಲ್ 2018, 9:56 IST

ಮಂಡ್ಯ: ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ಖಂಡಿಸಿ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಬಿಜೆಪಿ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.

ಸಿಚಿವ ಸ್ಥಾನದಲ್ಲಿರುವ ದಿನೇಶ್‌ ಗುಂಡೂರಾವ್‌, ಅನಕ್ಷರಸ್ಥರಂತೆ ಮಾತನಾಡಿದ್ದಾರೆ. ಕೀಳುಮಟ್ಟದ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ನಾಥ ಸಂಪ್ರದಾಯವನ್ನು ಪೂಜಿಸುವ ಬಹುಸಂಖ್ಯಾತ ಒಕ್ಕಲಿಗರು ಇರುವ ಮಂಡ್ಯ ಜಿಲ್ಲೆ ಜನತೆಗೆ ಅವರ ಮಾತಿನಿಂದ ನೋವುಂಟಾಗಿದೆ. ಸಚಿವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗಣ್ಣಗೌಡ, ಮುಖಂಡರಾದ ಸುಜಾತಾ ಸಿದ್ದಯ್ಯ, ಅರವಿಂದ್, ನರಸಿಂಹಮೂರ್ತಿ, ಸತೀಶ್, ಕೆಂಪಬೋರಯ್ಯ, ಶಿವಕುಮಾರ್ ಆರಾಧ್ಯ, ಮಂಜುನಾಥ್ ಇದ್ದರು.

ಇದಕ್ಕೂ ಮೊದಲು ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಮುಖಂಡ ಪ್ರೊ.ಬಿ.ಶಿವಲಿಂಗಯ್ಯ ‘ದಿನೇಶ್‌ ಗುಂಡೂರಾವ್‌ ಅವರು ಯೋಗಿ ಆದಿತ್ಯನಾಥ್ ಕುರಿತ ಹೇಳಿಕೆ ಖಂಡಿಸಿ ಮಾತನಾಡಿರುವುದು ಖಂಡನೀಯ’ ಎಂದರು.

ADVERTISEMENT

‘ಒಬ್ಬ ಮಂತ್ರಿಯಾಗಿ ಬೇರೆ ರಾಜ್ಯದ ಮುಖ್ಯಮಂತ್ರಿ ವಿರುದ್ಧ ಹಗುರವಾದ ಮಾತನಾಡಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ.  ಚುನಾವಣೆ ಹಿನ್ನೆಲೆಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುವ ಗುಂಡಾರಾವ್ ಅವರ ಮೇಲೆ ಚುನಾವಣಾ ಆಯೋಗ ಸೂಕ್ತ ಕ್ರಮ ಜರುಗಿಸಬೇಕು. ಜಿಲ್ಲೆಯಲ್ಲಿ ಬಿಜೆಪಿ ವಿವಿಧ ಪಕ್ಷಗಳ ಮುಖಂಡರು ಸೇರ್ಪಡೆಯಾಗುತ್ತಿದ್ದು ಚಂದಗಾಲು ಎನ್‌.ಶಿವಣ್ಣ ಸೇರ್ಪಡೆಯಾಗಿದ್ದಾರೆ. ಮುಂದೆ ಡಾ.ಶಂಕರೇಗೌಡರು ಪಕ್ಷ ಸೇರ್ಪಡೆಯಾಗಲಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿನ ಖಾತೆ ತೆರೆಯುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡರಾದ ಪ.ನಾ.ಸುರೇಶ್, ಡಿ.ಎಚ್.ಹನುಮಂತು, ಸಿ.ಜವರೇಗೌಡ, ಎಮ್.ಸಿ.ವರದರಾಜು, ಎಸ್.ಶಿವಕುಮಾರ್ ಆರಾಧ್ಯ, ಹೊಸಹಳ್ಳಿ ಶಿವು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.