ADVERTISEMENT

ನಾಗಮಂಗಲ: ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 8:49 IST
Last Updated 11 ಸೆಪ್ಟೆಂಬರ್ 2017, 8:49 IST
ನಾಗಮಂಗಲ ತಾಲ್ಲೂಕಿನ ಹಾಲತಿ ಗ್ರಾಮದಲ್ಲಿ ಧಾರಾಕಾರ ಮಳೆಗೆ ಕುಸಿದು ಬಿದ್ದಿರುವ ಉಮೇಶ ಅವರಮನೆ
ನಾಗಮಂಗಲ ತಾಲ್ಲೂಕಿನ ಹಾಲತಿ ಗ್ರಾಮದಲ್ಲಿ ಧಾರಾಕಾರ ಮಳೆಗೆ ಕುಸಿದು ಬಿದ್ದಿರುವ ಉಮೇಶ ಅವರಮನೆ   

ನಾಗಮಂಗಲ: ತಾಲ್ಲೂಕಿನಾದ್ಯಂತ ಶನಿವಾರ ರಾತ್ರಿ ಬಿದ್ದ ಮಳೆಯಿಂದಾಗಿ ಹಲವು ಮನೆ ಹಾಗೂ ಮರಗಳು ಧರೆಗುರುಳಿವೆ. ಶನಿವಾರ ಮಧ್ಯರಾತ್ರಿ ಆರಂಭವಾದ ಮಳೆ ಭಾನುವಾರ ಬೆಳಿಗ್ಗೆಯವರೆಗೂ ಮುಂದುವರಿದಿತ್ತು. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ತಾಲ್ಲೂಕಿನ ಹಲವು ಕೆರೆ–ಕಟ್ಟೆಗಳು ತುಂಬಿ ಕೋಡಿ ಬಿದ್ದಿದ್ದು ಕೆಲವೆಡೆ ಹಳ್ಳಕೊಳ್ಳಗಳಿಗೆ ನೀರು ಬಂದಿದೆ.

ಬರದಿಂದಾಗಿ ಕಳೆಗುಂದಿದ್ದ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ. ಹೊಲಗಳಲ್ಲಿ ಬಿತ್ತಿರುವ ರಾಗಿ, ಅವರೆ, ಜೋಳ, ಅಲಸಂದೆ ಬೆಳೆಗಳು ನಳನಳಿಸುತ್ತಿದ್ದು ಭೂಮಿ ಹಸಿರಿನಿಂದ ಕಂಗೊಳಿಸುತ್ತಿದೆ.

ಧಾರಾಕಾರ ಮಳೆಗೆ ಹಾಲತಿ ಗ್ರಾಮದ ಉಮೇಶ್ ಎಂಬುವವರ ಮನೆ ಕುಸಿದು ಬಿದ್ದಿದ್ದು, ಯಾವುದೇ ಪ್ರಾಣಾಪಾಯ ಆಗಿಲ್ಲ. ಕಳೆದ ಏಳೆಂಟು ವರ್ಷಗಳಿಂದ ಬತ್ತಿಹೋಗಿದ್ದ ಗ್ರಾಮದ ಮುಂದಿನ ಕೆರೆ ಕೋಡಿ ಬಿದ್ದಿದೆ. ಕೆಂದನಳ್ಳಿ, ಬ್ಯಾಡರಹಳ್ಳಿ, ತೊಳಲಿ, ಮೈಲಾರಪಟ್ಟಣ ಇನ್ನಿತರ ಗ್ರಾಮಗಳ ಕೆರೆಗಳು ಭಾಗಶಃ ತುಂಬಿದ್ದು ಮಳೆ ಹೀಗೆಯೇ ಮುಂದುವರಿದರೆ ಒಂದೆರಡು ದಿನಗಳಲ್ಲಿ ಕೋಡಿ ಬೀಳುತ್ತವೆ.

ADVERTISEMENT

ಬೀದರ್–ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯ ಚಿಣ್ಯ ಗ್ರಾಮದ ವಿದ್ಯಾರ್ಥಿಗಳ ಹಾಸ್ಟೆಲ್ ಬಳಿ ರಸ್ತೆ ಮೇಲೆ ಮರ ಉರುಳಿಬಿದ್ದಿದೆ. ಇದರಿಂದ ಕೆಲ ಹೊತ್ತು ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.