ಕೆ.ಆರ್.ಪೇಟೆ: ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಯಾವಾಗಲೂ ಕಸದ ರಾಶಿ ಕಂಡು ಬರುತ್ತಿದೆ. ಕಸದೊಂದಿಗೆ ನೀರು ನಿಂತು ಗಬ್ಬು ನಾರುತ್ತಿದೆ. ಪ್ರತಿ ದಿನ ನೂರಾರು ಬಸ್ಸುಗಳು, ಸಾವಿರಾರು ಪ್ರಯಾಣಿಕರು ಬಂದು ಹೋಗುವ ಇಲ್ಲಿನ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯ ಸರಿಯಾಗಿ ಆಗುತ್ತಿಲ್ಲ ಎಂದು ದೂರುತ್ತಾರೆ ಸಮಾಜಸೇವಕ ಎಚ್.ಬಿ.ಮಂಜುನಾಥ್.
ಬಸ್ ನಿಲ್ದಾಣದ ಪಕ್ಕದಲ್ಲಿಯೇ ಮಾಂಸದಂಗಡಿ ಇದ್ದು ಅಲ್ಲಿಂದು ಎಲುಬಿನ ತುಂಡುಗಳು, ಅನುಪಯುಕ್ತ ಮಾಂಸದ ವಸ್ತುಗಳನ್ನೂ ಇಲ್ಲಿಯ ಚರಂಡಿ ಪಕ್ಕದಲ್ಲಿ ರಾಶ ಹಾಕಲಾಗುತ್ತಿದೆ.
ಘನ ತ್ಯಾಜ್ಯವನ್ನು ಪಟ್ಟಣದಿಂದ ಹೊರಸಾಗಿಸಬೇಕು ಎಂಬ ನಿಯಮವಿದ್ದರೂ ಅಲ್ಲಿಯೇ ಬೆಂಕಿ ಹಾಕಿ ಸುಡುವುದು ಕಂಡುಬರುತ್ತಿದೆ. ಬಸ್ ನಿಲ್ದಾಣವನ್ನು ಸ್ವಚ್ಛ ಗೊಳಿಸಲು ಇರುವವರು ಕೇವಲ ಮೂವರು ಪೌರ ಕಾರ್ಮಿಕರು. ಇದರಿಂದಾಗಿ ಸೂಕ್ತ ಸ್ವಚ್ಛತೆ ಸಾಧ್ಯವಾಗುತ್ತಿಲ್ಲ. ಮೇಲಾಧಿಕಾರಿಗೆ ಈ ಬಗ್ಗೆ ಪತ್ರ ಬರೆಯಲಾಗಿದೆ ಎಂದು ಸಂಚಾರ ನಿಯಂತ್ರಕರು ತಿಳಿಸಿದರು.
ಸಾವಿರಾರು ಜನ ಬಂದು ಹೋಗುವ ಬಸ್ ನಿಲ್ದಾಣನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ. ಅಧಿಕಾರಿಗಳು ಸಬೂಬು ಹೇಳುವುದನ್ನು ಬಿಟ್ಟು ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಪುರಸಭಾ ಸದಸ್ಯ ಎಚ್.ಆರ್.ಲೋಕೇಶ್ ಅಭಿಪ್ರಾಯಪಡುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.