ನಾಗಮಂಗಲ: ಒಂದೆಡೆ ಶ್ರವಣಬೆಳಗೊಳ ಮಹಾಮಸ್ತಾಭಿಷೇಕಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಮತ್ತೊಂದೆಡೆ ಅಲ್ಲಿಗೆ ತೆರಳಲು ಇರುವ ರಸ್ತೆಯ ಅವ್ಯವಸ್ಥೆಯಿಂದಾಗಿ ವಾಹನ ಸಂಚಾರಕ್ಕೆ ಸಂಚಕಾರ ಬಂದಿದೆ.
ಶ್ರವಣಬೆಳಗೊಳ– ನಾಗಮಂಗಲ ರಸ್ತೆಯಲ್ಲಿ ಎಲ್ಲಿ ನೋಡಿದರೂ ಗುಂಡಿ ಗಳೇ ರಾರಾಜಿಸುತ್ತಿವೆ. ಮಳೆ ಸುರಿದರೆ ಇಲ್ಲಿ ವಾಹನಗಳು ಓಡಾಡಲು ಸಾಧ್ಯವಾಗದಷ್ಟು ನೀರು ನಿಂತು ರಸ್ತೆ ರಾಡಿಯಾಗುತ್ತದೆ. ತಾಲ್ಲೂಕಿನ ಕಂಬದಹಳ್ಳಿ, ಬಿಂಡಿಗನವಿಲೆಗೆ ತಾಲ್ಲೂಕು ಕೇಂದ್ರದಿಂದ ಸಂಚರಿಸಲು ಪ್ರಯಾಣಿಕರು ಪ್ರಯಾಸ ಪಡಬೇಕಿದೆ.
ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ನಾಗಮಂಗಲ– ಶ್ರವಣಬೆಳಗೊಳ ರಸ್ತೆ, ಪಟ್ಟಣದ ಟಿ.ಬಿ. ಬಡಾವಣೆಯಿಂದ– ಕೆಂಚಗೋನಹಳ್ಳಿ ವರೆಗೆ ಇತ್ತೀಚೆಗಷ್ಟೆ ಡಾಂಬರೀಕರಣ ಮಾಡಲಾಗಿದೆ, ಇದರ ಮಧ್ಯೆ ಬರುವ ಹೂವಿನಹಳ್ಳಿ ಹಳ್ಳದ ಬಳಿ ರಸ್ತೆಗೆ ಮಣ್ಣನ್ನು ಸುರಿದಿದ್ದು ಪ್ರಯಾಣಿಕರು ಅದರಲ್ಲೂ ದ್ವಿಚಕ್ರ ವಾಹನ ಸವಾರರು, ಕಾರು ಮತ್ತು ಆಟೊ ಸಂಚರಿಸಲು ತೀವ್ರ ತೊಂದರೆ ಅನುಭವಿಸಬೇಕಾಗಿದೆ.
ರಸ್ತೆಯಲ್ಲಿರುವ ಹಳ್ಳವು ಸುಮಾರು ಐದು ಅಡಿ ರಸ್ತೆಗಿಂತಲೂ ದೊಡ್ಡದಾಗಿದೆ. ದಿನನಿತ್ಯ ಬಿಂಡಿಗನವಿಲೆಯಿಂದ, ತಾಲ್ಲೂಕು ಕೇಂದ್ರಕ್ಕೆ ಎಡತಾಕುತ್ತಿದ್ದು ಕಷ್ಟ ಹೇಳತೀರದಾಗಿದೆ. ಮಹಾ ಮಸ್ತಕಾಭಿಷೇಕ ನೆಪದಲ್ಲಾದರೂ ಕೆಂಚಗೋನಹಳ್ಳಿಯಿಂದ ತಾಲ್ಲೂಕಿನ ಗಡಿವರೆಗೆ ರಸ್ತೆ ಅಭಿವೃದ್ಧಿಪಡಿಸಿ ಎಂದು ನಾಗರಿಕರು ಒತ್ತಾಯಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.