ADVERTISEMENT

ಸಮತೋಲಿತ ಆಹಾರ ಪದ್ಧತಿ ಅನುಸರಿಸಿ

ಮೃತರ ಕುಟುಂಬಗಳಿಗೆ ಮರಣನಿಧಿ ವಿತರಣೆ; ‘ಮನ್‌ಮುಲ್‌’ ಅಧ್ಯಕ್ಷ ಕದಲೂರು ರಾಮಕೃಷ್ಣ ಸಲಹೆ

​ಪ್ರಜಾವಾಣಿ ವಾರ್ತೆ
Published 22 ಮೇ 2017, 7:05 IST
Last Updated 22 ಮೇ 2017, 7:05 IST

ಮದ್ದೂರು: ಸಮತೋಲಿತ ಆಹಾರ ಪದ್ಧತಿ ಅನುಸರಿಸುವ ಮೂಲಕ ಹಾಲು ಉತ್ಪಾದಕರು ಗುಣಮಟ್ಟದ ಹಾಲು ಪೂರೈಕೆಗೆ ಸಹಕರಿಸಬೇಕು ಎಂದು ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಕದಲೂರು ರಾಮಕೃಷ್ಣ ಸಲಹೆ ನೀಡಿದರು.

ಸಮೀಪದ ಮನ್‌ಮುಲ್‌ ಉಪ ಕಚೇರಿಯಲ್ಲಿ ಶನಿವಾರ ಮೃತ ಹಾಲು ಉತ್ಪಾದಕರ ಕುಟುಂಬಗಳಿಗೆ ಮರಣ ನಿಧಿ ವಿತರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 200 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪಶು ಆಹಾರ ಸಮತೋಲನಾ ಪದ್ಧತಿ ಬಗ್ಗೆ ತಿಳಿವಳಿಕೆ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ.

ಇದಕ್ಕಾಗಿ 30 ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳನ್ನು ನೇಮಕ ಮಾಡಲಾಗಿದೆ. ಇವರು ತಮ್ಮ ಗ್ರಾಮದ ಸಂಘದ ವ್ಯಾಪ್ತಿಯಲ್ಲಿರುವ ಹಾಲು ಉತ್ಪಾದಕರಿಗೆ ಕಡಿಮೆ ಆಹಾರ ನೀಡಿ ಹೆಚ್ಚು ಗುಣಮಟ್ಟದ ಹಾಲು ಪಡೆಯುವ ಕೌಶಲ ತಿಳಿಸಿಕೊಡುವರು ಎಂದರು.

ರೈತರು ಸಂಪನ್ಮೂಲ ವ್ಯಕ್ತಿಗಳಿಂದ ಅಗತ್ಯ ಮಾಹಿತಿ ಪಡೆದು ಪಶುಗಳಿಗೆ ಸಮತೋಲಿತ ಆಹಾರ ನೀಡಲು ಮುಂದಾಗಬೇಕು. ಈ ಪದ್ಧತಿ ಅನುಸರಿಸುವುದರಿಂದ ಹಣ ಹಾಗೂ ಶ್ರಮ ಉಳಿತಾಯವಾಗಲಿದೆ ಎಂದರು.  

ವೈದ್ಯಕೀಯ, ಎಂಜಿನಿಯರಿಂಗ್‌, ಡಿಪ್ಲೋಮಾ ಓದುತ್ತಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಮಕ್ಕಳಿಗೆ ಮನ್‌ಮುಲ್‌ ವತಿಯಿಂದ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಹೇಳಿದರು.

ಮನ್‌ಮುಲ್‌ ನಿರ್ದೇಶಕ ಕೆ.ಎಂ. ಉಮೇಶ್, ಉಪವ್ಯವಸ್ಥಾಪಕ ಕೆ.ಎನ್. ಕೃಷ್ಣಮೂರ್ತಿ, ಸಹಾಯಕ ವ್ಯವಸ್ಥಾಪಕ ಆರ್.ಪ್ರಸಾದ್, ವಿಸ್ತರಣಾಧಿಕಾರಿಗಳಾದ ಬಿ.ಎಸ್.ಶಿವಶಂಕರ್, ಎಂ.ಸಿ.ರಶ್ಮಿ, ಹರೀಶ್ ಹೆಗಡೆ, ಮಧು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT