ADVERTISEMENT

ಸಮಸ್ಯೆಯಷ್ಟೇ ಅಲ್ಲ; ಪಾತ್ರದ ಅರಿವೂ ಇರಲಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 5:48 IST
Last Updated 27 ಡಿಸೆಂಬರ್ 2017, 5:48 IST
ಮಂಡ್ಯ ನಗರದ ಹರ್ಡೀಕರ್‌ ಭವನದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರ ಸಭೆಯನ್ನು ಮುಖಂಡರು ಮಂಗಳವಾರ ಉದ್ಘಾಟಿಸಿದರು
ಮಂಡ್ಯ ನಗರದ ಹರ್ಡೀಕರ್‌ ಭವನದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರ ಸಭೆಯನ್ನು ಮುಖಂಡರು ಮಂಗಳವಾರ ಉದ್ಘಾಟಿಸಿದರು   

ಮಂಡ್ಯ: ‘ರೈತರಿಗೆ ಅವರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಸಮಗ್ರ ಅರಿವಿರಬೇಕು. ಅವುಗಳ ಪರಿಹಾರಕ್ಕಾಗಿ ನಮ್ಮ ಪಾತ್ರವೇನು ಎಂದೂ ಮನಗಾಣಬೇಕು’ ಎಂದು ರಾಜ್ಯ ರೈತ ಸಂಘದ (ಮೂಲ ಸಂಘಟನೆ) ರಾಜ್ಯ ಸಂಚಾಲಕ ಎನ್‌.ನಂಜೇಗೌಡ ಸಲಹೆ ನೀಡಿದರು.

ನಗರದ ಹರ್ಡೀಕರ್‌ ಭವನದಲ್ಲಿ ರಾಜ್ಯ ರೈತ ಸಂಘ (ಮೂಲ ಸಂಘಟನೆ) ‘ರಾಜಕೀಯ ರಹಿತ ಸಂಘಟನೆಯತ್ತ ರಾಜ್ಯ ರೈತರ ಚಿತ್ತ’ ವಿಷಯ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರ ಸಭೆಯ ಅಧ್ಯಕ್ಷತೆ ಅವರು ಮಾತನಾಡಿದರು.

ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಬೇಕು ಎಂಬುದೇ ಬಿಡಿಸಲಾರದ ಸಮಸ್ಯೆ ಆಗಿದೆ. ಇದಕ್ಕೆ ತಾರ್ಕಿಕ ಅಂತ್ಯ ಮಾಡದೇ ಸರ್ಕಾರಗಳು ನಾಟಕೀಯವಾಗಿ ರೈತರ ಪರವಾಗಿ ಇದ್ದೇವೆ ಎಂದು ಮೋಸ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಕೃಷಿ ಬೆಲೆ ಆಯೋಗವನ್ನು ರಚಿಸಲಾಗಿದೆ. ಅಲ್ಲಿಗೆ ನಿಯೋಜನೆ ಗೊಂಡಿರುವ ಅಧಿಕಾರಿಗಳಿಗೆ ವರದಿ ಸಲ್ಲಿಸಲು ಸರ್ಕಾರಗಳು ಬಿಡುತ್ತಿಲ್ಲ. ರಾಜಕೀಯ ಪಕ್ಷಗಳಿಂದ ಇಂತಹ ನಡವಳಿಕೆಗಳು ದುರಂತ. ಪರಿಹಾರ ಸಿಗಬಹುದಾ ಎಂದು ಕಾದು ನೋಡಬೇಕು ಎಂದು ತಿಳಿಸಿದರು.

ರೈತರು ಒಂದು ಕ್ವಿಂಟಲ್ ಭತ್ತ ಬೆಳೆಯಲು ₹ 1,672 ಬೇಕು. ಸರ್ಕಾರ ₹ 1,400 ಬೆಲೆ ನಿಗದಿಗೊಳಿಸಿ ಕೈತೊಳೆದುಕೊಳ್ಳುತ್ತದೆ. ಜೊತೆಗೆ ₹ 100 ಬೆಂಬಲ ಬೆಲೆ ಘೋಷಿಸಿ ರೈತರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ. ಇದರ ವಿರುದ್ಧ ಹೋರಾಡಲು ರೈತರು ಇನ್ನಾದರೂ ಏಕತೆ ಪ್ರದರ್ಶಿಸಬೇಕು ಎಂದು ಹೇಳಿದರು. ಆ ಮೂಲಕ ಭ್ರಷ್ಟಾಚಾರ ರಾಜಕಾರಣದ ವಿರುದ್ಧ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

ರೈತ ಮುಖಂಡ ಕೆ.ಬೋರಯ್ಯ ಅವರು, ರೈತರ ಬಡತನ ಹೋಗಲಾಡಿಸಲು ರೈತ ಪರ ಹೋರಾಟಗಳು ಹೆಚ್ಚಾಗಬೇಕು. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮುಖಂಡರು ರೈತರ ಕಣ್ಣೀರು ಒರೆಸುವ ನಾಟಕ ಆಡುತ್ತಾರೆ. ರೈತರ ಹತ್ತಿರ ಹೋಗಿ ಮತ ಕೇಳಲು ಅವರಿಗೆ ನಾಚಿಕೆ ಆಗಬೇಕು ಎಂದು ಟೀಕಿಸಿದರು.

ರೈತ ಸಂಘದ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಭರಮಣ್ಣಪ್ಪ ಅವರು, ‘ಚುನಾವಣೆಯಲ್ಲಿ ರೊಕ್ಕ ಕೊಟ್ಟು ಗೆಲ್ಲುತ್ತಾರೆ. ಸಭೆ ನಡೆಸಲು ಸಹ ರೊಕ್ಕ ಕೊಟ್ಟು ಜನರನ್ನು ಕರೆದುಕೊಂಡು ಬಂದಿರುತ್ತಾರೆ. ಇಂತಹ ರಾಜಕಾರಣಿಗಳಿಗೆ ಮಾನ ಮರ್ಯಾದೆ ಇಲ್ಲ’ ಎಂದು ಗುಡುಗಿದರು.

ಇಂಥ ಮುಖಂಡರು ಮೊದಲು ರೈತರು ಹೋರಾಟ, ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಮಸ್ಯೆಗಳನ್ನು ಅರಿತುಕೊಳ್ಳಬೇಕು ಎಂದು ಸಲಹೆ ಮಾಡಿದರು. ಸಭೆಯಲ್ಲಿ ಮಂಡ್ಯ ಹಾಗೂ ಹಾಸನ, ಬೀದರ್‌, ಮೈಸೂರು, ರಾಮನಗರ, ರಾಯಚೂರು, ಹಾವೇರಿ, ಬಿಜಾಪುರ, ಬಳ್ಳಾರಿ, ದಾವಣಗೆರೆ ಹಾಗೂ ಮಂಡ್ಯ ಜಿಲ್ಲೆಗಳಿಂದ ರೈತರು ಭಾಗವಹಿಸಿದ್ದರು.

ನಿರ್ಣಯಗಳು: ರೈತರ ಹಿತಾಸಕ್ತಿ ಕಾಯುವವರ ಪರ ಮತ ಚಲಾಯಿಸುವುದು ರೈತರಿಗೆ ₹ 5,000 ಮಾಸಾಶನಕ್ಕೆ ಒತ್ತಾಯ, ವೈಜ್ಞಾನಿಕ ಕೃಷಿ ಬೆಲೆ ಆಯೋಗದ ಜಾರಿ ಆಗ್ರಹ  ಕುರಿತು ನಿರ್ಣಯಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಮುಖಂಡರಾದ ಹೆಮ್ಮಿಗೆ ಚಂದ್ರಶೇಖರ್‌, ಸುಧೀರ್‌ ಕುಮಾರ್‌, ನ.ಲಿ.ಕೃಷ್ಣ, ಪ್ರಿಯಾಂಕ, ಶಿವರಾಂ ಮದ್ದೂರು, ಇಂಡುವಾಳು ಚಂದ್ರಶೇಖರ್‌, ಬಸವರಾಜು, ರಂಗಸ್ವಾಮಿ, ಗಂಗಾಧರ್‌, ಯಾದಗಿರಿಯ ಶರಣಪ್ಪ ಪಾಟೀಲ್‌, ಬೀದರ್‌ನ ನಿರ್ಮಲಾ ಕಾಂತ್‌, ಮಹೇಶ್‌ ಸುಬ್ಬೇದಾರ್‌, ದಾವಣಗೆರೆ ನಾಗರಾಜಪ್ಪ ಇದ್ದರು.

* * 

ಪ್ರೊ.ನಂಜುಂಡಸ್ವಾಮಿ ಅವರು ರೈತ ಸಂಘದ ಮೆದುಳು ಹಾಗೂ ರೈತ ಪಾಲಿನ ಹೃದಯ. ಅವರ ಹೋರಾಟ ಇಂದಿಗೂ ಪ್ರಸ್ತುತ
ಜಿ.ಟಿ.ವೀರಪ್ಪ,
ಸಾಂಸ್ಕೃತಿಕ ವಿಭಾಗದ ಅಧ್ಯಕ್ಷ, ರೈತ ಸಂಘ (ಮೂಲ ಸಂಘಟನೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.