ಮಂಡ್ಯ: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಸ್ಥಾಪನೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರೆ ಕೊಟ್ಟಿದ್ದ ಮುಷ್ಕರಕ್ಕೆ ನಗರದ ಖಾಸಗಿ ಆಸ್ಪತ್ರೆಗಳು ಬೆಂಬಲ ನೀಡಿದವು. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಒಪಿಡಿಗಳನ್ನು ಬಂದ್ ಮಾಡಲಾಗಿತ್ತು.
ಎಲ್ಲಾ ಖಾಸಗಿ ಆಸ್ಪತ್ರೆಗಳ ಒಳರೋಗಿಗಳ ವಿಭಾಗಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಹೊಸ ದಾಖಲಾತಿಗೆ ಯಾವುದೇ ಅಡ್ಡಿ ಇರಲಿಲ್ಲ. ಆದರೆ ಒಪಿಡಿಗಳನ್ನು ಮಾತ್ರ ಬಂದ್ ಮಾಡಲಾಗಿತ್ತು. ಮುಷ್ಕರ ಮಾಹಿತಿ ಇಲ್ಲದೆ ಹಳ್ಳಿಗಳಿಂದ ಆಸ್ಪತ್ರೆಗೆ ಬಂದ ರೋಗಿಗಳು ಚಿಕಿತ್ಸೆ ಸಿಗದೆ ಪರದಾಡಿದರು.
ನಗರದ ರಾಮಕೃಷ್ಣ ಆಸ್ಪತ್ರೆ, ಅರ್ಚನಾ ಆಸ್ಪತ್ರೆ, ಸೇವಾ ನರ್ಸಿಂಗ್ ಹೋಂ, ಪ್ರಶಾಂತ್ ನರ್ಸಿಂಗ್ ಹೋಂ, ಸುಬ್ರಮಣ್ಯ ಆಸ್ಪತ್ರೆ, ಶಿಲ್ಪಶ್ರೀ ಆಸ್ಪತ್ರೆ ಸೇರಿ ವಿವಿಧೆಡೆ ಒಪಿಡಿಯಲ್ಲಿ ಚಿಕಿತ್ಸೆ ದೊರೆಯಲಿಲ್ಲ.
ಜಿಲ್ಲಾಸ್ಪತ್ರೆ ಸಜ್ಜು : ಮುಷ್ಕರದ ಮಾಹಿತಿ ಇದ್ದ ಕಾರಣ ಜಿಲ್ಲಾಸ್ಪತ್ರೆಯಲ್ಲಿ ಪರಿಸ್ಥಿತಿ ನಿಭಾಯಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆಸ್ಪತ್ರೆಗೆ ಬಂದ ಎಲ್ಲಾ ರೋಗಿಗಳಿಗೂ ಸೂಕ್ತ ಚಿಕಿತ್ಸೆ ದೊರೆಯುವಂತೆ ವ್ಯವಸ್ಥೆ ಮಾಡಲಾಗಿತ್ತು.
‘ಜಿಲ್ಲಾಸ್ಪತ್ರೆಯ ಎರಡು ವಿಭಾಗಗಳಲ್ಲಿ ವೈದ್ಯರು ನಿರಂತರವಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಂಗಳವಾರ ನಿಗದಿಯಾಗಿದ್ದ ತಿಂಗಳ ಸಭೆಯನ್ನು ರದ್ದು ಮಾಡಿ ಎಲ್ಲಾ ವೈದ್ಯಾಧಿಕಾರಿಗಳು ರೋಗಿಗಳ ತಪಾಸಣೆ ನಡೆಸುವಂತೆ ಸೂಚನೆ ನೀಡಲಾಗಿತ್ತು. ತಾಲ್ಲೂಕು ವೈದ್ಯಾಧಿಕಾರಿಗಳು ಆಯಾ ತಾಲ್ಲೂಕುಗಳಲ್ಲಿ ಯಾವುದೇ ತೊಂದರೆ ಆಗದಂತೆ ಪರಿಸ್ಥಿತಿ ನಿಭಾಯಿಸಿದ್ದಾರೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.