ನಾಗಮಂಗಲ: ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರು ನಗರಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಯಾವ ಸಂಘಟನೆಗಳೂ ಬಂದ್ ಮಾಡಬಾರದು. ಸರ್ಕಾರ ಅದನ್ನು ಬೆಂಬಲಿಸುವುದಿಲ್ಲ’ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ತಾಲ್ಲೂಕಿನ ಬೆಳ್ಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆ. ಫೆ.4ರಂದು ಯಾರೂ ಬಂದ್ಗೆ ಬೆಂಬಲ ನೀಡಬಾರದು. ಪ್ರಧಾನಿ ಬೆಂಗಳೂರಿಗೆ ಭೇಟಿ ನೀಡಿ ಅವರ ವಿಚಾರ ತಿಳಿಸಿ ಹೋಗುತ್ತಾರೆ. ಅದರಲ್ಲಿ ತಪ್ಪೇನೂ ಇಲ್ಲ. ಬಂದ್ ಆಚರಣೆಗೆ ಕಾಂಗ್ರೆಸ್ ಪಕ್ಷ, ರಾಜ್ಯ ಸರ್ಕಾರದ ವಿರೋಧವಿದೆ’ ಎಂದು ಹೇಳಿದರು.
‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಕುರಿತು ಕೆಪಿಸಿಸಿ ಪ್ರಚಾರ ಸಮಿತಿ ಹೊಸ ಚಿಂತನೆ ನಡೆಸಿದೆ. 18ರಿಂದ 30 ವರ್ಷ ವಯಸ್ಸಿನ ಯುವ ಅಭ್ಯರ್ಥಿಗಳಿಗೆ ಆದ್ಯತೆ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ’ ಎಂದು ಹೇಳಿದರು.
ತಪ್ಪಿದ ಅನಾಹುತ: ಸಚಿವ ಡಿ.ಕೆ.ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡ್ ಆಗಿ ಮತ್ತೆ ಟೇಕ್ ಆಫ್ ಆದ ಕಾರಣ ಪಟ್ಟಣದ ಹೆಲಿಪ್ಯಾಡ್ನಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು.
ಮೊದಲು ಭೂಸ್ಪರ್ಶಿಸಿದ ಆದ ತಕ್ಷಣ ಜನರು ಹೆಲಿಕಾಪ್ಟರ್ ಬಳಿಗೆ ನುಗ್ಗಿದರು. ಇದನ್ನು ಅರಿತ ಪೈಲಟ್ ಕೂಡಲೇ ಟೇಕ್ಆಫ್ ಮಾಡಿದರು. ಪೊಲೀಸರು ಜನರನ್ನು ಚದುರಿಸಿದ ನಂತರ ಹೆಲಿಕಾಪ್ಟರ್ ಮತ್ತೆ ಲ್ಯಾಂಡ್ ಆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.